ಕರಾವಳಿ

ಕಾನೂನು ಪದವಿಧರರಿಗೆ ವೃತ್ತಿ ಪ್ರಾಯೋಗಿಕ ತರಬೇತಿಗಾಗಿ ಅರ್ಜಿ ಆಹ್ವಾನ

Pinterest LinkedIn Tumblr

ಮಂಗಳೂರು : 2020-21ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪರಿಶಿಷ್ಟ ವರ್ಗದ ಕಾನೂನು ಪದವಿಧರರಿಗೆ ನ್ಯಾಯವಾದಿ ವೃತ್ತಿಯ ಪ್ರಾಯೋಗಿಕ ತರಬೇತಿಯನ್ನು ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ನಿಬಂಧನೆಗಳು :

ಅಭ್ಯರ್ಥಿಯು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು ಹಾಗೂ ಜಾತಿ ಪ್ರಮಾಣ ಪತ್ರ ಹೊಂದಿರಬೇಕು, ಅಭ್ಯರ್ಥಿಯು ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿಶ್ವ ವಿದ್ಯಾನಿಲಯ/ಶಿಕ್ಷಣ ಸಂಸ್ಥೆಗಳಿಂದ 3 ವರ್ಷ ಅಥವಾ 5 ವರ್ಷಗಳ ಕಾನೂನು ಪದವಿ ಶಿಕ್ಷಣವನ್ನು ಪೂರೈಸಿ ಜೊತೆಗೆ ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರಗಳನ್ನು ಹೊಂದಿರಬೇಕು.

ಅಭ್ಯರ್ಥಿಯು ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್, ಬೆಂಗಳೂರು ಇದರ ಸದಸ್ಯರಾಗಿರಬೇಕು. ಹಾಗೂ ಸದಸ್ಯತ್ವ ನೊಂದಣಿ ಪತ್ರ ಹೊಂದಿರಬೇಕು. ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ ರೂ. 2.50 ಲಕ್ಷ ಮೀರಿರಬಾರದು. ಈ ಬಗ್ಗೆ ವಾರ್ಷಿಕ ಆದಾಯ ಪ್ರಮಾಣ ಪತ್ರ ಹೊಂದಿರಬೇಕು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೆ ಅಭ್ಯರ್ಥಿಯ ಗರಿಷ್ಟ ವಯೋಮಿತಿಯು 40 ವರ್ಷ ಆಗಿರಬೇಕು. ವಯಸ್ಸಿನ ದೃಢೀಕರಣದ ಬಗ್ಗೆ ಎಸ್.ಎಸ್.ಎಲ್.ಸಿ ಅಂಕಪಟ್ಟಿ/ ವರ್ಗವಣೆ ಪ್ರಮಾಣ ಪತ್ರ/ ಜನನ ಪ್ರಮಾಣ ಪತ್ರ ಹೊಂದಿರಬೇಕು.

ಅಪೂರ್ಣ ಅರ್ಜಿ, ತಡವಾಗಿ ಬಂದ ಅರ್ಜಿ ಹಾಗೂ ನಿಬಂಧನೆಗಳನ್ನು ಪೂರೈಸದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅರ್ಹ ಅರ್ಜಿಗಳ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ನಿಗದಿತ ಅರ್ಜಿ ನಮೂನೆಯೊಂದಿಗೆ ಅರ್ಜಿಯಲ್ಲಿ ಕೇಳಿರುವ ಎಲ್ಲಾ ಪ್ರಮಾಣ ಪತ್ರಗಳ ದೃಢೀಕರಣ ಪತ್ರಗಳನ್ನು ಲಗ್ತೀಕರಿಸಿಬೇಕು.(ಭಾವಚಿತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ) ದಕ್ಷಿಣ ಕನ್ನಡ ಜಿಲ್ಲೆಯವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅರ್ಜಿಯನ್ನು ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಅಬ್ಬಕ್ಕನಗರ, ಕೊಟ್ಟಾರ, ಮಂಗಳೂರು-575006 ಗೆ ಸಲ್ಲಿಸಲು ಸೆಪ್ಡೆಂಬರ್ 10 ರಂದು ಕೊನೆಯ ದಿನ.

ತರಬೇತಿಯ ವಿವರ ಇಂತಿವೆ:

ತರಬೇತಿಯ ಅವಧಿ 2 ವರ್ಷಗಳಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಹೆಯಾನ ರೂ. 10,000 ಶಿಷ್ಯ ವೇತನವನ್ನು ಈ ಅವಧಿಯಲ್ಲಿ ನೀಡಲಾಗುವುದು.

ಆಯ್ಕೆಯಾದ ತರಬೇತಿದಾರರಿಗೆ ಕಚೇರಿ ಸ್ಥಾಪಿಸಿ ಕೊಳ್ಳಲು, ಕಾನೂನು ಪುಸ್ತಕಗಳನ್ನು ಖರೀದಿಲು ಮತ್ತು ಪೀಠೋಪಕರಣ/ಕಂಪ್ಯೂಟರ್ ಇತ್ಯಾದಿ ತೆಗೆದುಕೊಳ್ಳಲು ಒಮ್ಮೆ ತಾಲೂಕು/ಟಿ.ಎಂ.ಸಿ ಕೇಂದ್ರ ಸ್ಥಾನಗಳಲ್ಲಿ ರೂ. 50,000 ಮತ್ತು ನಗರ ಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರೂ. 1,00,000 ಅನುದಾನ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಜಿಲ್ಲಾ ಆಯ್ಕೆ ಸಮಿತಿಯು ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್ ಸರಕಾರಿ ವಕೀಲರು ಅಥವಾ ಕನಿಷ್ಟ 15 ವರ್ಷಗಳ ವಕೀಲ ವೃತ್ತಿಯಲ್ಲಿ ಅನುಭವವುಳ್ಳ ವಕೀಲರ ಅಧೀನದಲ್ಲಿ ತರಬೇತಿಗೆ ನಿಯೋಜಿಸಲಾಗುವುದು.

ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಯು ತಾವು ಆಯ್ಕೆಯಾದ 15 ದಿನದ ಒಳಗೆ ಅಂಗೀಕಾರವನ್ನು ನಿಗದಿತ ಸಮಯದೊಳಗೆ ತಿಳಿಸದಿದ್ದಲ್ಲಿ ಅವರ ಆಯ್ಕೆಯನ್ನು ರದ್ದುಪಡಿಸಲಾಗುವುದು ಹಾಗೂ ಬದಲಿಗೆ ವೇಯಿಟಿಂಗ್ ಲಿಸ್ಟ್‍ನ ಬೇರೆ ಅರ್ಹ ಅಭ್ಯರ್ಥಿಗಳನ್ನು ಅರ್ಹತೆಗನುಸಾರವಾಗಿ ಆಯ್ಕೆ ಮಾಡಲಾಗುವುದು.

ಆಯ್ಕೆಯಾದ ಅಭ್ಯರ್ಥಿಯು ತರಬೇತಿಗೆ ಹೋಗುವ ಮುಂಚೆ ತಾನು ಈ ತರಬೇತಿಯನ್ನು ಮಧ್ಯದಲ್ಲಿ ಬಿಟ್ಟು ಹೋಗುವುದಿಲ್ಲವೆಂದು ಹಾಗು ಈ ತರಬೇತಿಯನ್ನು ಮಧ್ಯದಲ್ಲಿ ಬಿಟ್ಟು ಹೋದಲ್ಲಿ ತರಬೇತಿಯ ಒಟ್ಟು ವೆಚ್ಚವನ್ನು ಹಾಗೂ ವೆಚ್ಚಕ್ಕೆ ಶೇ.10 ರಂತೆ ಬಡ್ಡಿಯನ್ನು ಸರಕಾರಕ್ಕೆ ಪಾವತಿ ಮಾಡಲು ತನ್ನ ಒಪ್ಪಿಗೆ ಇರುತ್ತದೆ ಎಂಬುದಕ್ಕೆ ಮುಚ್ಚಳಿಕೆ ಪತ್ರವನ್ನು ಛಾಪಾ ಕಾಗದದಲ್ಲಿ ಬರೆದು ಕೊಡಬೇಕಾಗುತ್ತದೆ.

ಸುಳ್ಳು ಮಾಹಿತಿ ಹಾಗೂ ಸುಳ್ಳು ಪ್ರಮಾಣ ಪತ್ರಗಳನ್ನು ನೀಡಿದ ಅಭ್ಯರ್ಥಿಗಳ ಮೇಲೆ ಕಾನೂನು ರೀತ್ಯಾ ಕ್ರಮ ಕೈಗಳ್ಳಲಾಗುವುದು ಎಂದು ದ.ಕ. ಜಿಲ್ಲೆ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಯೋಜನಾ ಸಮನ್ವಯಾಧಿಕಾರಿ ಪ್ರಕಟಣೆ ತಿಳಿಸಿದೆ.

Comments are closed.