ಕರಾವಳಿ

ದ.ಕ.ಜಿಲ್ಲೆಯಲ್ಲಿ ಮಾಸ್ಕ್ ಕಡ್ಡಾಯ – ತಪ್ಪಿದಲ್ಲಿ ದಂಡ: ಜಿಲ್ಲಾಧಿಕಾರಿ ಎಚ್ಚರಿಕೆ

Pinterest LinkedIn Tumblr

ಮಂಗಳೂರು ಆಗಸ್ಟ್ 06 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಕೋವಿಡ್-19 ಮುಂಜಾಗೃತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ದ.ಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕೆ. ವಿ ರಾಜೇಂದ್ರ ಆದೇಶಿಸಿರುತ್ತಾರೆ.

ಸರಕಾರದ ಜುಲೈ 30 ರ ಆದೇಶ ತೆರವು-3 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಹಾಗೂ ಈ ಕೆಳಕಂಡ ನಿರ್ದೇಶನಗಳನ್ನು ಸಾರ್ವಜನಿಕರು ತಪ್ಪದೆ ಪಾಲಿಸಬೇಕು.

ಮುಖದ ಹೊದಿಕೆ: ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಮತ್ತು ಪ್ರಯಾಣದ ಸಮಯ ದಲ್ಲಿ ಮುಖದ ಹೊದಿಕೆಯನ್ನು ಧರಿಸುವುದು ಕಡ್ಡಾಯವಾಗಿರುತ್ತದೆ. ಅಗತ್ಯಾನುಸಾರ ಮುಖದ ಹೊದಿಕೆಯನ್ನು ಧರಿಸದಿದ್ದಲ್ಲಿ ನಗರ ಪ್ರದೇಶಗಳಲ್ಲಿ ರೂ. 200 ಮತ್ತು ಇನ್ನುಳಿದ ಪ್ರದೇಶಗಳಲ್ಲಿ ರೂ. 100 ದಂಡ ವಿಧಿಸಲಾಗುವುದು.

ಸಾಮಾಜಿಕ ಅಂತರ: ಪ್ರತಿಯೊಬ್ಬರು ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಠ 6 ಅಡಿ ಅಂತರವನ್ನು (2 ಗಜ ಅಂತರ) ಕಾಯ್ದುಕೊಳ್ಳಬೇಕು.

ಗುಂಪುಗೂಡುವಿಕೆ: ಬೃಹತ್ ಸಾರ್ವಜನಿಕ ಸಭೆಗಳು ಮತ್ತು ಒಟ್ಟು ಗೂಡುವಿಕೆ ನಿಷೇಧವನ್ನು ಮುಂದುವರೆಸಲಾಗಿದೆ. ಮದುವೆ ಸಂಬಂಧಿತ ಕೂಟಗಳಲ್ಲಿ ಅತಿಥಿಗಳ ಸಂಖ್ಯೆ 50 ಮೀರಿರಬಾರದು. ಶವ ಸಂಸ್ಕಾರ/ಅಂತಿಮ ವಿಧಿ ಸಂಬಂಧಿತ ಕಾರ್ಯಗಳಿಗೆ ವ್ಯಕ್ತಿಗಳ ಸಂಖ್ಯೆ 20 ಮೀರಿರಬಾರದು.

ಸ್ಥಳೀಯ ಪ್ರಾಧಿಕಾರಗಳು, ಅದರ ಕಾನೂನು, ನಿಯಮ ಮತ್ತು ನಿಬಂಧನೆಗಳಲ್ಲಿ ತಿಳಿಸಿರುವಂತೆ ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದು ದಂಡನಾರ್ಹ ಶಿಕ್ಷೆಯಾಗಿರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಪಾನ್, ಗುಟ್ಕಾ, ತಂಬಾಕು ಇತ್ಯಾದಿಗಳ ಬಳಕೆಯನ್ನು ನಿಷೇಧಿಸಿದೆ.

ಕೆಲಸದ ಸ್ಥಳಗಳಲ್ಲಿ ನಿಗಾವಹಿಸಬೇಕಾದ ಹೆಚ್ಚುವರಿ ನಿರ್ದೇಶನಗಳು ಇಂತಿವೆ:

ಮನೆಯಿಂದ ಕೆಲಸ: ಸಾಧ್ಯವಾದಷ್ಟು ಮಟ್ಟಿಗೆ ಮನೆಯಿಂದಲೇ ಕೆಲಸ ಮಾಡುವ ಪದ್ದತಿಯನ್ನು ಅನುಸರಿಸಬೇಕು.

ಕೆಲಸದಲ್ಲಿ ಪಾಳಿಯ ಪದ್ಧತಿ/ವ್ಯವಹಾರ ಸಮಯ: ಕಚೇರಿಗಳಲ್ಲಿ, ಕೆಲಸದ ಸ್ಥಳಗಳಲ್ಲಿ, ಅಂಗಡಿಗಳಲ್ಲಿ, ಮಾರುಕಟ್ಟೆಗಳಲ್ಲಿ ಮತ್ತು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ/ವ್ಯವಹಾರದ ಸಮಯದಲ್ಲಿ ಪಾಳಿಯ ಪದ್ಧತಿಯನ್ನು ಅನುಸರಿಸಬೇಕು.

ಸ್ಕ್ರೀನಿಂಗ್ ಮತ್ತು ನೈರ್ಮಲ್ಯ: ಕೆಲಸದ ಸಂಪೂರ್ಣ ಆವರಣ, ಸಾಮಾನ್ಯ ಸೌಲಭ್ಯಗಳು ಮತ್ತು ಮಾನವ ಸಂಪರ್ಕಕ್ಕೆ ಬರುವ ಎಲ್ಲ ಅಂಶಗಳಿಗೆ ಆಗಾಗ್ಗೆ ನೈರ್ಮಲ್ಯೀಕರಣ ಮಾಡಬೇಕು. (ಉದಾಹರಣೆಗೆ ಬಾಗಿಲ ಹಿಡಿಕೆಗಳು, ಇತ್ಯಾದಿಗಳು) ಇದನ್ನು ಕೆಲಸದ ಪಾಳಿಯ ಮಧ್ಯದಲ್ಲಿ ಸಹ ಖಾತರಿಪಡಿಸಿಕೊಳ್ಳಬೇಕು.

ಸಾಮಾಜಿಕ ಅಂತರ: ಕೆಲಸದ ಸ್ಥಳಗಳಲ್ಲಿ ವ್ಯಕ್ತಿಗಳ ನಡುವೆ, ಪಾಳಿಗಳ ನಡುವೆ, ಊಟದ ವಿರಾಮ ಮೊದಲಾದವುಗಳಲ್ಲಿ ಎಲ್ಲಾ ವ್ಯಕ್ತಿಗಳು ಸಾಕಷ್ಟು ಅಚಿತರವನ್ನು ಕಾಯ್ದುಕೊಂಡಿರುವ ಬಗ್ಗೆ ಮೇಲ್ವಿಚಾರಕರು ಖಾತರಿಪಡಿಸಿಕೊಳ್ಳಬೇಕು.

ಮೇಲ್ಕಂಡ ರಾಷ್ಟ್ರೀಯ ನಿರ್ದೇಶನಗಳನ್ನು ಪಾಲಿಸದೆ ವ್ಯತಿರಿಕ್ತವಾಗಿ ವರ್ತಿಸಿದರೆ ಅಂತವರ ವಿರುದ್ದ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧ್ಯಾದೇಶ 202 ಕಲಂ 5 (3), 6(1), (2) ರನ್ವಯ ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 57ರನ್ವಯ ಕಾನೂನು ರೀತ್ಯಾ ಕ್ರಮ ಜರಗಿಸಲಾಗುವುದು.

Comments are closed.