ಮಂಗಳೂರು : ಅಯೋಧ್ಯೆಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಶ್ರೀ ರಾಮಮಂದಿರದ ಶಿಲಾನ್ಯಾಸ ನೆರವೇರಿಸಿದ ಶುಭಾವಸರದಲ್ಲಿ ಪೂಜ್ಯ ವಿಶ್ವೇಶತೀರ್ಥ ಸ್ವಾಮೀಜಿಯವರ ಸಂಸ್ಮರಣೆಯೊಂದಿಗೆ ಮತ್ತು ಪೂಜ್ಯರ ಶ್ರೀ ರಾಮ ಮಂದಿರ ಪುನರ್ನಿರ್ಮಾಣದ ಸಂಕಲ್ಪ ಮತ್ತು ಆಶಯದ ಸಾಕ್ಷಾತ್ಕಾರಕ್ಕಾಗಿ ಪ್ರಸ್ತುತ ಪೇಜಾವರ ಮಠಾಧೀಶರೂ, ಅಯೋಧ್ಯೆ ಶ್ರೀ ರಾಮ ಮಂದಿರ ನ್ಯಾಸ ಟ್ರಸ್ಟ್ನ ವಿಶ್ವಸ್ಥರೂ ಆಗಿರುವ ಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥರ ಅಶೀರ್ವಾದದೊಂದಿಗೆ, ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕದ್ರಿ ಕಂಬಳ ರಸ್ತೆ, ಮಲ್ಲಿಕಾ ಬಡಾವಣೆಯಲ್ಲಿರುವ ಮಂಜು ಪ್ರಾಸಾದದಲ್ಲಿನ ವಾದಿರಾಜ ಮಂಟಪದಲ್ಲಿ ‘ತ್ರೀನಾರಿಕೇಳ ಶ್ರೀ ಗಣಯಾಗ’, ‘ಹರಿವಾಯು ಸ್ತುತಿ ಪಠಣ’ ಸಹಿತ ‘ವಿಷ್ಣು ಸಹಸ್ರನಾಮ ಯಾಗ’ವು ವೇ| ಮೂ| ಡಾ. ಪ್ರಭಾಕರ ಅಡಿಗರ ನೇತೃತ್ವದಲ್ಲಿ ಜರಗಿತು.
ವೇದ ವಿದ್ವಾನ್ ಪಂಜ ಭಾಸ್ಕರ ಭಟ್, ಕದ್ರಿ ಶ್ರೀರಂಗ ಐತಾಳ್, ವೆ. ಮೂ. ಸತ್ಯಕೃಷ್ಣ ಭಟ್, ಎಂ. ಬಿ. ಪುರಾಣಿಕ್, ಡಾ. ಎಂ. ಪ್ರಭಾಕರ ಜೋಶಿ, ಪೊಳಲಿ ನಿತ್ಯಾನಂದ ಕಾರಂತ, ಕದ್ರಿ ನವನೀತ ಶೆಟ್ಟಿ, ಸುಧಾಕರ ರಾವ್ ಪೇಜಾವರ ಮೊದಲಾದವರು ಉಪಸ್ಥಿತರಿದ್ದು ಮಧ್ಯಾಹ್ನ ಸಾಮೂಹಿಕ ಪ್ರಾರ್ಥನೆಯೊಂದಿಗೆ ಪೂರ್ಣಾಹುತಿ ನಡೆಯಿತು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿದರು.


Comments are closed.