ಕರಾವಳಿ

ದ.ಕ. ಜಿಲ್ಲಾಧಿಕಾರಿಯಾಗಿದ್ದ ಸಿಂಧು. ಬಿ ರೂಪೇಶ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಸೆರೆ

Pinterest LinkedIn Tumblr

ಮಂಗಳೂರು, ಜುಲೈ, 29 : ಮಂಗಳವಾರ ದಿಢೀರ್ ವರ್ಗಾವಣೆಗೊಂಡಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಯಾಗಿದ್ದ ಸಿಂಧು. ಬಿ ರೂಪೇಶ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಮೂಡಬಿದ್ರೆ ಠಾಣಾ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಅವರಿಗೆ ಬಹಿರಂಗ ಕೊಲೆ ಬೆದರಿಕೆ ಒಡ್ಡಿದ್ದ ಆರೋಪದಲ್ಲಿ ಮೂಡಬಿದ್ರೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿ ಮಿಜಾರು ನಿವಾಸಿ ರಂಜಿತ್(20) ಎಂಬಾತನನ್ನು ಬಂಧಿಸಿದ್ದಾರೆ.

ಗೋಸಾಗಾಟ ಮಾಡುವ ವ್ಯಾಪಾರಿಗಳಿಗೆ ಹಲ್ಲೆ ಮಾಡುವವರ, ದರೋಡೆ ಮಾಡುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಿಂಧು ಬಿ. ರೂಪೇಶ್ ಅವರು ಸೋಮವಾರ ಎಚ್ಚರಿಕೆ ನೀಡಿದ್ದರು. ಇದನ್ನು ಸಹಿಸದ ಕೆಲ ಕಿಡಿಗೇಡಿಗಳು ಇವರ ಹೇಳಿಕೆ ಖಂಡಿಸಿ ವಾಟ್ಸ್ ಆಪ್ ಗ್ರೂಪ್‌ಗಳಲ್ಲಿ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿದ್ದರು.

ಬಂಧಿತ ಆರೋಪಿ ರಂಜಿತ್ “ರಾಮ್ ಸೇನಾ” ಎಂಬ ವಾಟ್ಸಪ್ ಗ್ರೂಪ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಅವರಿಗೆ ತುಳು ಭಾಷೆಯಲ್ಲಿ “ಫಸ್ಟ್ ಮೊಲೆನ್ ಕಡ್ತ್ ಕೆರೊಡು” (ಮೊದಲು ಇವಳನ್ನು ಕಡಿದು ಕೊಲೆಗೈಯಬೇಕು) ಎಂದು ಪೋಸ್ಟ್ ಗೆ ಕಾಮೆಂಟ್ ಬರೆಯುವ ಮೂಲಕ ಕೊಲೆ ಬೆದರಿಕೆ ಒಡ್ಡಿದ್ದ ಎಂದು ಆರೋಪಿಸಲಾಗಿದೆ.

ಕಾಮೆಂಟ್ ಬರೆದಿರುವ ಮೊಬೈಲ್ ಸಂಖ್ಯೆ +919632188546 ಆಗಿದ್ದು ಕಿಡಿಗೇಡಿಯನ್ನು ಕೂಡಲೇ ಪೋಲಿಸರು ಪತ್ತೆ ಹಚ್ಚಿ ಜಿಲ್ಲಾಧಿಕಾರಿಯವರಿಗೆ ರಕ್ಷಣೆ ನೀಡುವ ಮೂಲಕ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿದೆ ಎಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದರು. ಆದರೆ ಈ ಕುರಿತು ಜಿಲ್ಲಾಧಿಕಾರಿಗಳು ಯಾವೂದೇ ದೂರು ನೀಡಿಲ್ಲದಿದ್ದರೂ ಪೊಲೀಸ್ ಇಲಾಖೆಯು ಸ್ವಯಂ ಪ್ರೇರಿತ ( ಸುಮೋಟೋ) ದೂರು ದಾಖಲಿಸಿಕೊಂಡು ತನಿಖೆ ನಡೆಸಿತ್ತು. ಇದೀಗ ಮೂಡಬಿದ್ರೆ ಪೊಲೀಸರು ರಂಜಿತ್ ನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಜಿಲ್ಲಾಧಿಕಾರಿ ದಿಢೀರ್ ವರ್ಗಾವಣೆ:

ಈ ಮಧ್ಯೆ ಜಿಲ್ಲೆಯಲ್ಲಿ ನಡೆಯುತ್ತಿರುವ ಗೋವು ಸಾಗಾಟಗಾರರ ಮೇಲಿನ ಹಲ್ಲೆ, ದರೋಡೆ ಕೃತ್ಯಗಳ ಬಗ್ಗೆ ಧ್ವನಿ ಎತ್ತಿದ್ದ ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರನ್ನು ದಿಢೀರ್ ಆಗಿ ವರ್ಗಾವಣೆ ಮಾಡಲಾಗಿದೆ.

ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಅದೇಶ ಹೊರಡಿಸಿದ್ದು ಅವರ ಸ್ಥಾನಕ್ಕೆ ಬೆಳಗಾವಿಯ ಜಿಲ್ಲಾ ಪಂಚಾಯತ್ ಸಿ.ಇ ಓ ಆಗಿದ್ದ ಡಾ. ರಾಜೇಂದ್ರ ಕೆ.ವಿ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.

ಸಿಂಧೂ ರೂಪೇಶ್ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಇ -ಆಡಳಿತ ವಿಭಾಗದ ನಿರ್ದೆಶಕಿಯನ್ನಾಗಿ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ.ಡಾ. ರಾಜೇಂದ್ರ ಕೆ.ವಿ ಅವರು ಈ ಹಿಂದೆ ಪುತ್ತೂರಿನಲ್ಲಿ ಸಹಾಯಕ ಕಮೀಷನರ್ ಆಗಿ ಕರ್ತವ್ಯ ನರ್ವಹಿಸಿದ್ದರು.

Comments are closed.