ಕರಾವಳಿ

ಲಾಕ್ ಡೌನ್ ಸಂಧರ್ಭದಲ್ಲಿ ಜನತೆಗೆ ಆಹಾರ ಸಾಮಾಗ್ರಿ ಹಾಗೂ ಸೋಂಕಿತರಿಗೆ ಉಚಿತ ಚಿಕಿತ್ಸೆಗೆ ಆಗ್ರಹಿಸಿ ಪ್ರತಿಭಟನೆ

Pinterest LinkedIn Tumblr

ಮಂಗಳೂರು : ಲಾಕ್ ಡೌನ್ ಸಂಧರ್ಭದಲ್ಲಿ ಜನತೆಗೆ ಆಹಾರ ಸಾಮಾಗ್ರಿಗಳನ್ನು ಹಾಗೂ ಕೋರೋನಾ ಸೋಂಕಿತರಿಗೆ ಉಚಿತ ಚಿಕಿತ್ಸೆಯನ್ನು ಒದಗಿಸಬೇಕು ಮತ್ತು ಸೀಲ್ ಡೌನ್ ಪ್ರದೇಶಗಳ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಸಿಪಿಐಎಂ ನೇತ್ರತ್ವದಲ್ಲಿ ಮಂಗಳೂರು ನಗರದಲ್ಲಿ ಬಿತ್ತಿಚಿತ್ರ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ ಅವರು, ಈ ಹಿಂದಿನ ಲಾಕ್ ಡೌನ್ ನಿಂದಾಗಿ ದುಡಿಯುವ ವರ್ಗದ ಜನತೆ ತೀರಾ ಸಂಕಷ್ಟಗಳಿಗೆ ಒಳಗಾಗಿದ್ದು,ಈಗ ಮತ್ತೆ ವಿಧಿಸಿರುವ ಲಾಕ್ ಡೌನ್ ನಿಂದ ಕಂಗಾಲಾಗಿದ್ದಾರೆ. ಉದ್ಯೋಗವಿಲ್ಲದೆ,ಕಾಸಿಲ್ಲದೆ, ಆಹಾರವಿಲ್ಲದೆ ಪರದಾಡುವ ತೀರಾ ಬಡ ಕಾರ್ಮಿಕರಿಗೆ ಅಹಾರ ಸಾಮಾಗ್ರಿಗಳನ್ನು ಜಿಲ್ಲಾಡಳಿತ ಒದಗಿಸಬೇಕಾಗಿದೆ. ಕೋರೋನಾ ನೆಪದಲ್ಲಿ ಜನರನ್ನು ಲೂಟಿ ಮಾಡುವ ಖಾಸಗೀ ಆಸ್ಪತ್ರೆಗಳಿಗೆ ಮೂಗುದಾರ ತೊಡಿಸಲು ಸರಕಾರ ಮುಂದಾಗಬೇಕು. ಕೋರೋನಾ ಸೋಂಕಿತರಿಗೆ ತಾರತಮ್ಯವಿಲ್ಲದೆ ಉಚಿತ ಚಿಕಿತ್ಸೆಯನ್ನು ಒದಗಿಸಬೇಕು ಹಾಗೂ ಖಾಸಗೀ ಆಸ್ಪತ್ರೆಗಳು ಕೋರೋನಾ ಸೇರಿದಂತೆ ಇತರ ಯಾವುದೇ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಕಡ್ಡಾಯಗೊಳಿಸಬೇಕಾಗಿದೆ ಎಂದು ಹೇಳಿದರು.

ಸಿಪಿಐಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು ಮಾತನಾಡುತ್ತಾ,  ಕೋರೋನಾ ವೈರಸ್ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು,ಈಗಾಗಲೇ ಘೋಷಿಸಿರುವ ಸೀಲ್ ಡೌನ್ ಪ್ರದೇಶಗಳ ಜನರ ಸಂಕಷ್ಟಗಳು ಹೇಳ ತೀರಾದಾಗಿದೆ.ಅವರಿಗೆ ಬೇಕಾಗುವ ಆಹಾರ,ಔಷಧಿ ಸಾಮಾಗ್ರಿಗಳನ್ನು ಇಲ್ಲಿಯವರೆಗೂ ತಲುಪಿಸುವ ವ್ಯವಸ್ಥೆ ಇಲ್ಲ.ಅಧಿಕಾರಿಗಳು ಅತ್ತ ಗಮನವನ್ನೂ ಹರಿಸುತ್ತಿಲ್ಲ ಎಂದು ದೂರಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, *ಕೋರೋನಾ ನಿಗ್ರಹಿಸಲು ವೈಜ್ಞಾನಿಕ ನೆಲೆಯಲ್ಲಿ ಕಾರ್ಯ ನಿರ್ವಹಿಸುವ ಬದಲು ಲಾಕ್ ಡೌನ್ ಮಾತ್ರವೇ ಪರಿಹಾರವೆಂದು ಬಿಂಬಿಸಿ, ತನ್ನೆಲ್ಲಾ ವೈಫಲ್ಯವನ್ನು ಮರೆಮಾಚಲು ಲಾಕ್ ಡೌನ್ ಘೋಷಿಸಿ ಮತ್ತೊಮ್ಮೆ ಜನರನ್ನು ಸಂಕಷ್ಟಕ್ಕೆ ದೂಡಿದ ರಾಜ್ಯ ಸರಕಾರದ ನಡೆ ತೀರಾ ಖಂಡನೀಯ.ತಜ್ಞ ವೈದ್ಯರ ಕೊರತೆಯಿಂದ ಬಳಲುತ್ತಿರುವ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಆರೋಗ್ಯ ಸಿಬ್ಬಂದಿಗಳಿಗೆ ಸುರಕ್ಷತಾ ಆರೋಗ್ಯ ಕಿಟ್ ಗಳನ್ನು ಒದಗಿಸಲು ಜಿಲ್ಲಾಡಳಿತ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋರೋನಾ ನಿಗ್ರಹಿಸಲು ಲಾಕ್ ಡೌನ್ ಪರಿಹಾರವಲ್ಲ. ಕೋರೋನಾ ಸೋಂಕಿತರಿಗೆ ತಾರತಮ್ಯವಿಲ್ಲದೆ ಉಚಿತ ಚಿಕಿತ್ಸೆ ಒದಗಿಸಿರಿ, ಜನತೆಗೆ ಆಹಾರ ಸಾಮಾಗ್ರಿಗಳನ್ನು ಒದಗಿಸಿರಿ. ಆರೋಗ್ಯ ಸಿಬ್ಬಂದಿಗಳಿಗೆ ಸುರಕ್ಷತಾ ಆರೋಗ್ಯ ಕಿಟ್ ಗಳನ್ನು ಒದಗಿಸಿರಿ, ಸೀಲ್ ಡೌನ್ ಪ್ರದೇಶಗಳ ಜನರ ಸಂಕಷ್ಟಗಳಿಗೆ ಸ್ಪಂದಿಸಿರಿ, ವೆನ್ಲಾಕ್ ಆಸ್ಪತ್ರೆಯಲ್ಲಿ ತಜ್ಞ ವೈದ್ಯರನ್ನು ನೇಮಕ ಮಾಡಿರಿ, ಖಾಸಗೀ ಆಸ್ಪತ್ರೆಗಳ ಲೂಟಿಕೋರತನಕ್ಕೆ ಕಡಿವಾಣ ಹಾಕಿರಿ, ಎಂಬಿತ್ಯಾದಿ ಘೋಷಣೆಗಳನ್ನು ಪ್ರತಿಭಟನಕಾರರು ಕೂಗಿದರು.

ಪ್ರತಿಭಟನೆಯಲ್ಲಿ ಸಿಪಿಐಎಂ ಜಿಲ್ಲಾ ನಾಯಕರಾದ ಜಯಂತಿ ಬಿ.ಶೆಟ್ಟಿ,ಸುರೇಶ್ ಬಜಾಲ್, ಸಿಐಟಿಯು ನಾಯಕರಾದ ಜಯಲಕ್ಷ್ಮಿ, ಮುಸ್ತಫಾ, ಹರೀಶ್ ಪೂಜಾರಿ, ಸಂತೋಷ್ ಆರ್.ಎಸ್,ಅನ್ವರ್ ಶೇಕ್, ನಾಗೇಶ್ ಕೋಟ್ಯಾನ್, ದಲಿತ ಹಕ್ಕುಗಳ ಸಮಿತಿಯ ನಾಯಕರಾದ ತಿಮ್ಮಯ್ಯ ಕೊಂಚಾಡಿ, ಡಿವೈಎಫ್‌ಐ ನಾಯಕರಾದ ಪ್ರಶಾಂತ್ ಉರ್ವಾಸ್ಟೋರ್, ನಾಗೇಂದ್ರ ಮುಂತಾದವರು ಹಾಜರಿದ್ದರು.

Comments are closed.