ಮಂಗಳೂರು, ಜುಲೈ.1: ಮಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೋವಿಡ್-19 ಸೋಂಕಿನ ಆರ್ಭಟ ಮತ್ತೆ ಮುಂದುವರಿದಿದ್ದು, ಇದೀಗ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಸಿಪಿಯೊಬ್ಬರಿಗೆ ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹೋಂ ಗಾರ್ಡ್ ಸೇರಿದಂತೆ ಹತ್ತಕ್ಕೂ ಹೆಚ್ಚು ಪೊಲೀಸರಿಗೆ ಸೋಂಕು ತಗುಲಿದ್ದು, ಠಾಣೆಯನ್ನು ಭಾಗಶಃ ಸೀಲ್ ಡೌನ್ ಮಾಡಲಾಗಿದೆ. ಈ ಹಿಂದೆ ಠಾಣೆಯ ಎಸ್ ಐ, ಎಎಸ್ ಐ, ಇಬ್ಬರು ಡ್ರೈವರ್ ಗಳು ಮತ್ತು ಠಾಣೆಯಲ್ಲಿದ್ದ ಇಬ್ಬರು ಆರೋಪಿಗಳಿಗೆ ಕೋವಿಡ್-19 ಸೋಂಕು ತಾಗಿತ್ತು. ಇದೀಗ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಸಿಪಿಯೊಬ್ಬರಿಗೆ ಕೊರೋನ ಸೋಂಕು ತಗುಲಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಕೊರೋನದಿಂದ ಮೃತಪಟ್ಟವರೋರ್ವರ ಅಂತ್ಯಸಂಸ್ಕಾರಕ್ಕೆ ಬೋಳಾರದ ಧಫನಭೂಮಿಯಲ್ಲಿ ಕೆಲವು ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು. ಈ ಸಂದರ್ಭ ಪೊಲೀಸರು ಸಹಿತ ಹಲವು ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮನವೊಲಿಸಿದ್ದರು. ಸ್ಥಳೀಯರ ಮನವೊಲಿಕೆಯ ಬಳಿಕ ಅಂತ್ಯಸಂಸ್ಕಾರ ನೆರವೇರಿತ್ತು.
ಈ ಅಂತ್ಯಸಂಸ್ಕಾರದ ಬಂದೋಬಸ್ತ್ ನಲ್ಲಿ ಇದೀಗ ಸೋಂಕಿಗೆ ತುತ್ತಾಗಿರುವ ಎಸಿಪಿಯವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎಸಿಪಿಯವರಿಗೆ ಸೋಂಕು ತಗುಲಿರ ಬಹುದು ಎಂದು ಅಂದಾಜಿಸಲಾಗಿದೆ.
ಉಳ್ಳಾಲ ಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ಮಹಾಮಾರಿ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಇದುವರೆಗೆ ಕ್ಷೇತ್ರದಲ್ಲಿ 47 ಜನರಿಗೆ ಕೋವಿಡ್ -19 ಸೋಂಕು ದೃಢವಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.
Comments are closed.