ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕಿಗೆ ಯುವಕ ಸೇರಿದಂತೆ ಇಬ್ಬರು ಬಲಿಯಾಗಿದ್ದಾರೆ. ಸುರತ್ಕಲ್ ನ ಯುವಕ ಮತ್ತು ಬಂಟ್ವಾಳ ಸಮೀಪದ ಮಹಿಳೆಯೊಬ್ಬರು ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನ ಬಿ.ಕಸ್ಬಾ ಗ್ರಾಮದ ಲೊರೆಟೊಪದವಿನ 57 ವರ್ಷದ ವೃದ್ದೆ ಹಾಗೂ ಸುರತ್ಕಲ್ನ ಇಡ್ಯಾ ನಿವಾಸಿ 31 ವರ್ಷದ ಯುವಕ ಕೊರೊನಾ ಸೋಂಕಿನಿಂದಾಗಿ ಭಾನುವಾರ ಸಾವನ್ನಪ್ಪಿದ್ದಾರೆ. ಈ ಮೂಲಕ ದ.ಕ. ಜಿಲ್ಲೆಯಲ್ಲಿ ಕೊರೋನ ವೈರಸ್ ಗೆ ಬಲಿಯಾದವರ ಸಂಖ್ಯೆ 12ಕ್ಕೇರಿದೆ.
ಲೊರೆಟೊಪದವಿನ ಈ ಮಹಿಳೆ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ತಿಂಗಳಿಗೆ ಒಂದು ಬಾರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸುತ್ತಿದ್ದರು. ಅದರಂತೆ ವಾರದ ಹಿಂದೆ ಮಂಗಳೂರಿನಲ್ಲಿ ಆರೋಗ್ಯ ತಪಾಸಣೆ ನಡೆಸಿ ಮನೆಗೆ ಬಂದಿದ್ದು ಆ ಬಳಿಕ ಅವರ ಆರೋಗ್ಯ ತೀವ್ರ ಏರುಪೇರಾಗಿತ್ತು ಎಂದು ತಿಳಿದು ಬಂದಿದೆ.
ಮೂರು ದಿನದ ಹಿಂದೆ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ಶನಿವಾರ ರಾತ್ರಿ ಅವರು ಮೃತಪಟ್ಟಿದ್ದಾರೆ. ಅವರ ಗಂಟಲ ದ್ರವದ ವರದಿಯಲ್ಲಿ ಕೊರೋನ ದೃಢಪಟ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುರತ್ಕಲ್ನ ಇಡ್ಯಾ ನಿವಾಸಿ 31 ವರ್ಷದ ಯುವಕನಿಗೆ ಸೋಂಕು ಧೃಢಪಟ್ಟಿದ್ದ ಹಿನ್ನೆಲೆಯಲ್ಲಿ ನಗರದ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ಮೃತಪಟ್ಟಿದ್ದಾರೆ.
Comments are closed.