ಕರಾವಳಿ

ಪಚ್ಚನಾಡಿ ತ್ಯಾಜ್ಯ ನೀರು ಸಂಸ್ಕರಣೆಗೆ ಶೀಘ್ರದಲ್ಲೇ ಶಾಶ್ವತ ಪರಿಹಾರ : ಕೋಟಾ ಶ್ರೀನಿವಾಸ ಪೂಜಾರಿ

Pinterest LinkedIn Tumblr

ಮಂಗಳೂರು  : ಮಂಗಳೂರು ಮಹಾನಗರದ ತ್ಯಾಜ್ಯ ವಿಲೇವಾರಿ ಘಟಕ ಪಚ್ಚನಾಡಿಯಲ್ಲಿ ತ್ಯಾಜ್ಯ ನೀರಿನ ಸಂಸ್ಕರಣೆಗೆ ಶೀಘ್ರದಲ್ಲಿಯೇ ಸರಕಾರದಿಂದ ಅಂದಾಜು ರೂ. 5 ಕೋಟಿ ಅನುದಾನ ಪಡೆದು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ದ.ಕ ಜಿಲ್ಲೆಯ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಅವರು ಪಿಲಿಕುಳ ನಿಸರ್ಗಧಾಮದ ಆಡಳಿತ ಕಚೇರಿಯಲ್ಲಿ ನಡೆದ ಪಚ್ಚನಾಡಿ ಒಳಚರಂಡಿ ನೀರು ಶುದ್ದೀಕರಣ ಘಟಕದಿಂದಾಗುವ ಸಮಸ್ಯೆ ಕುರಿತಾದ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಪಚ್ಚನಾಡಿ ತ್ಯಾಜ್ಯ ನೀರಿನ ಅಸಮರ್ಪಕ ಪೂರೈಕೆಯಿಂದ ಅಲ್ಲಿನ ಸ್ಥಳೀಯರು ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದು, ಈ ಸಮಸ್ಯೆಯನ್ನು ಮನಗಂಡು ಮಹಾನಗರಪಾಲಿಕೆಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮುತುವರ್ಜಿಯಿಂದ ಕೆಲಸ ಮಾಡಿ ಪರಿಹಾರ ಕಂಡುಕೊಳ್ಳಬೇಕೆಂದು ತಿಳಿಸಿದರು. ಪಿಲಿಕುಳ ನಿಸರ್ಗಧಾಮದ ಸರ್ವತೋಮುಖ ಅಭಿವೃದ್ಧಿಗೆ ವಿವಿಧ ಯೋಜನೆಗಳ ಮೂಲಕ ಶ್ರಮಿಸಲಾಗುತ್ತದೆ ಎಂದರು.

ಕೊಳಚೆ ನೀರನ್ನು ಸಂಸ್ಕರಿಸುವ ಸಂಸ್ಕರಣಾ ಘಟಕದ ತಾಂತ್ರಿಕ ಸಮಸ್ಯೆಯನ್ನು ಒಂದು ತಿಂಗಳೊಳಗೆ ಸರಿಪಡಿಸಿ ಶುದ್ದೀಕರಣ ಮಾಡಿ ಪೂರ್ಣಗೊಳಿಸಲಾಗುತ್ತದೆ. ಸರಕಾರದಿಂದ ಹೆಚ್ಚುವರಿ ಅನುದಾನ ಪಡೆದುಕೊಂಡು ಎನ್.ಐ.ಟಿ.ಕೆ. ಸುರತ್ಕಲ್ ನಡೆಸಲಿರುವ ಸರ್ವೇಯನುಸಾರ ಸಮರ್ಪಕ ಯೋಜನೆ ಕಾರ್ಯರೂಪಕ್ಕೆ ತಂದು ಶಾಶ್ವತ ಪರಿಹಾರ ಕಂಡುಕೊಳ್ಳಲಾಗುತ್ತದೆ. ಈ ಯೋಜನೆಯಿಂದ ಕೊಳಚೆ ನೀರು ತಡೆಯಲು ಸಾಧ್ಯವಾಗಬಹುದು ಎಂದರು.

ತ್ಯಾಜ್ಯ ನೀರಿನ ಶುದ್ದೀಕರಣಕ್ಕೆ ಸಂಬಂಧಿಸಿದಂತೆ ಎನ್.ಐ.ಟಿ.ಕೆ. ಸುರತ್ಕಲ್ ತಾಂತ್ರಿಕ ಸಂಸ್ಥೆಯಿಂದ ಸರ್ವೇ ಮಾಡಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಂಟಾಗುವ ಗಂಭೀರ ಸಮಸ್ಯೆಯ ಬಗ್ಗೆ ವರದಿ ಸಿದ್ದಪಡಿಸಿ ಜೊತೆಗೆ ಇಂಜಿನಿಯರ್‌ಗಳ ಮೂಲಕ ತಾಂತ್ರಿಕ ಅಂಶಗಳನ್ನು ಗಮನದಲ್ಲಿರಿಸಿಕೊಂಡು ವರ್ಕ್ಶೀಟ್ ತಯಾರಿಸಿ ಅದರಂತೆ ಯೋಜನೆ ರೂಪಿಸಿಕೊಂಡು ಹಂತ ಹಂತವಾಗಿ ಕಾಮಗಾರಿಗಳನ್ನು ಮಾಡಲಾಗುತ್ತದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತ ಡಾ. ಸಂತೋಷ್ ಕುಮಾರ್ ಹೇಳಿದರು.

ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ, ತ್ಯಾಜ್ಯ ಸಂಸ್ಕರಣಾ ಘಟಕದ ಅಸರ್ಮಪಕ ನಿರ್ವಹಣೆಯಿಂದ ಸುತ್ತಲಿನ ಕೆರೆ, ಬಾವಿ, ಕೊಳವೆಬಾವಿ ಸೇರಿದಂತೆ ಕುಡಿಯುವ ನೀರು ಕಲುಷಿತಗೊಳ್ಳುತ್ತಿದೆ. ಬಹುಗ್ರಾಮ ಕುಡಿಯುವ ನೀರು ಒದಗಿಸುವ ಮರವೂರು ಅಣೆಕಟ್ಟೆಗೂ ಇದು ಸೇರುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ಮೇಯರ್ ದಿವಾಕರ್, ಆಯುಕ್ತ ಅಜಿತ್ ಶಾನಾಡಿ, ಶೆಟ್ಟಿ, ಮತ್ತಿತರರು ಉಪಸ್ಥಿತಿದ್ದರು.

Comments are closed.