ಕರಾವಳಿ

ಮಂಗಳೂರಿನಲ್ಲಿ ಸಂಚಾರಿ ಗಂಟಲು ದ್ರವ ಸಂಗ್ರಹಣ ಕೇಂದ್ರಕ್ಕೆ ಚಾಲನೆ

Pinterest LinkedIn Tumblr

ಮಂಗಳೂರು ಮೇ 04 : ದಕ್ಷಿಣ ಕನ್ನಡ ಜಿಲ್ಲಾ ನಿರ್ಮಿತಿ ಕೇಂದ್ರದ ವತಿಯಿಂದ ಆರೋಗ್ಯ ಇಲಾಖೆಗೆ ಸಂಚಾರಿ ಕೋವಿಡ್ ಹಿನ್ನೆಲೆಯಲ್ಲಿ ಸಂಚಾರಿ ಗಂಟಲು ದ್ರವ ಸಂಗ್ರಹಣ ಕೇಂದ್ರ ವಾಹನವನ್ನು ಭಾನುವಾರ ಹಸ್ತಾಂತರಿಸಲಾಯಿತು.

ರಾಜ್ಯದ ಪ್ರಥಮ ಸಂಚಾರಿ ಸಂಚಾರಿ ಗಂಟಲು ದ್ರವ ಸಂಗ್ರಹಣ ಕೇಂದ್ರವನ್ನು ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಇದರಿಂದ ಗಂಟಲು ದ್ರವ ಸಂಗ್ರಹಣ ಪರೀಕ್ಷೆಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ, ದ.ಕ. ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ಮತ್ತಿತರರು ಇದ್ದರು.

ಸುಮಾರು 4.5 ಲಕ್ಷ ವೆಚ್ಚದ ಈ ವಾಹನವನ್ನು ದ.ಕ. ಜಿಲ್ಲಾ ನಿರ್ಮಿತಿ ಕೇಂದ್ರದ ಉಳಿತಾಯದ ಮೊತ್ತದಿಂದ ಖರೀದಿಸಿ, ಆರೋಗ್ಯ ಇಲಾಖೆಗೆ ನೀಡಲಾಗಿದೆ. ವಾಹನದಲ್ಲಿ 5 ಜನ ಆಸೀನರಾಗಬಹುದಾಗಿದ್ದು, ಹವಾನಿಯಂತ್ರಿತ ಸೌಲಭ್ಯ ಹೊಂದಿದೆ. ವೈದ್ಯರು ರೋಗಿಯೊಂದಿಗೆ ನೇರ ಸಂಪರ್ಕಕ್ಕೆ ಬಾರದೆ, ರೋಗಿ ಹೊರಗೆ ನಿಂತು, ಗಂಟಲ ದ್ರವ ಸಂಗ್ರಹಿಸಬಹುದಾಗಿದೆ. ಅಲ್ಲದೇ, ಪಿಪಿಇ ಕಿಟ್ ಬಳಸುವ ಅಗತ್ಯ ಇರುವುದಿಲ್ಲ.

ರೋಗಿಯೊಂದಿಗೆ ವೈದ್ಯರು ಸಂಭಾಷಣೆ ಮಾಡಲು ಇಂಟರ್ ಕಾಂ ವ್ಯವಸ್ಥೆ, ಧ್ವನಿವರ್ಧಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದರಲ್ಲಿ ಆರೋಗ್ಯ ಮಾಹಿತಿ, ಘೋಷಣೆಗಳನ್ನು ಮಾಡಬಹುದಾಗಿದೆ. ವಾಹನದ ಸುತ್ತಲೂ ಆರೋಗ್ಯ ಸಂದೇಶಗಳ ಫಲಕಗಳನ್ನು ಅಳವಡಿಸಲಾಗಿದೆ.

Comments are closed.