ಕರಾವಳಿ

ಪಾಲಘರ್ ಸಂತರ ಹತ್ಯೆಗೆ ವಿಶ್ವಹಿಂದು ಪರಿಷದ್ ಖಂಡನೆ : ನಾಳೆ ದೇಶವ್ಯಾಪಿ ಮನೆ ಶೃದ್ಧಾಂಜಲಿಗೆ ಕರೆ

Pinterest LinkedIn Tumblr

ಮಂಗಳೂರು, ಎಪ್ರಿಲ್.27 : ಮಹಾರಾಷ್ಟ್ರದ ಪಾಲಘಾರ್ ಗ್ರಾಮದಲ್ಲಿ ಕಳೆದ ಗುರುವಾರ ದಿನಾಂಕ 16 – 04 – 2020 ರಂದು ಇಬ್ಬರು ಸಾಧುಗಳು ಹಾಗು ಅವರ ಸಹಾಯಕ ಸೇರಿದಂತೆ 3 ಜನರ ನಿರ್ದಯವಾದ ಬರ್ಬರ ಹತ್ಯೆ ನಡೆದಿರುವುದು ಸಂಪೂರ್ಣ ಹಿಂದುಸಮಾಜಕ್ಕೆ ತೀವ್ರ ಆಘಾತವನ್ನು ಉಂಟುಮಾಡಿದೆ.

ತಮ್ಮ ಗುರುಗಳ ಅಂತ್ಯಕ್ರಿಯೆಗೆಂದು ಮುಂಬೈನಿಂದ ಗುಜರಾತಿಗೆ ತೆರಳುತ್ತಿದ್ದ ಈ ಪೂಜ್ಯ ಸಂತರನ್ನು ಮಕ್ಕಳನ್ನು ಅಪಹರಿಸುವ ಕಳ್ಳರು ಎಂದು ಸುಳ್ಳು ವದಂತಿ ಹಬ್ಬಿಸಿ ನೂರಾರು ಗ್ರಾಮಸ್ಥರು ಲಾಠಿ ಇತ್ಯಾದಿ ಮಾರಕಾಸ್ತ್ರಗಳಿಂದ ಸಾಮೂಹಿಕ ಆಕ್ರಮಣ ನಡೆಸಿರುವುದರ ಹಿಂದೆ ಒಂದು ಯೋಜಿತ ಸಂಚು ಇದೆ ಎಂಬುದರಲ್ಲಿ ಸಂದೇಹವಿಲ್ಲ.

ಎಡಪಂತೀಯ ವಿಚಾರಧಾರೆಯ ರಾಜಕೀಯ ಹಾಗು ಇತರ ವಾಮಪಂಥೀಯ ಸಂಘಟನೆಗಳ ಪ್ರಭಾವದಲ್ಲಿರುವ ಈ ಕ್ಷೇತ್ರದಲ್ಲಿ ಹಿಂದೆಯೂ ಇಂತಹ ಅನೇಕ ಹಿಂದೂವಿರೋಧಿ, ಧರ್ಮವಿರೋಧಿ ಕೃತ್ಯಗಳು ನಡೆದಿರುವುದು ಬೆಳಕಿಗೆ ಬಂದಿದೆ.

ಪೂಜ್ಯ ಸಂತರ, ಧರ್ಮಾಚಾರ್ಯರ ಹಾಗು ಮಠಾಧೀಶರುಗಳ ಮೇಲೆ ಅಪಾರ ಶೃದ್ಧೆ ಗೌರವ ಹೊಂದಿರುವ ವಿಶ್ವಹಿಂದು ಪರಿಷದ್ ನಿರಂತರವಾಗಿ ಸಂತರ ಕೃಪಾಶೀರ್ವಾದ ಹಾಗು ಮಾರ್ಗದರ್ಶನದಲ್ಲಿ ಕಾರ್ಯ ಮಾಡುತ್ತಾ ಬಂದಿದೆ, ಈ ಸಂತರ ದಯನೀಯ ನಿಧನಕ್ಕೆ ವಿಶ್ವಹಿಂದು ಪರಿಷದ್ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.

ಈ ಸಾಧುಸಂತರ ಹತ್ಯೆಯನ್ನು ತೀವ್ರವಾಗಿ ಖಂಡಿಸಿತ್ತದೆ ಮಾತ್ರವಲ್ಲದೆ 28 ಏಪ್ರಿಲ್ 2020 ರಂದು ಮಂಗಳವಾರ ಅವರ ದಿವ್ಯಚೇತನಗಳಿಗೆ ದೇಶವ್ಯಾಪಿ ಮನೆಮನೆಗಳಲ್ಲಿ ಶೃದ್ಧಾಂಜಲಿ ಅರ್ಪಿಸಲು ವಿಶ್ವಹಿಂದೂ ಪರಿಷದ್ ಕರೆ ನೀಡಿದೆ.

ಈ ಘಟನೆ ಕುರಿತು ಉನ್ನತ ಮಟ್ಟದಲ್ಲಿ ತನಿಖೆ ನಡೆಸಿ, ಇದರ ಹಿಂದಿನ ಷಡ್ಯಂತ್ರವನ್ನು ಬಯಲಿಗೆಳೆದು ಅಪರಾಧಿಗಳನ್ನು ಉಗ್ರಶಿಕ್ಷೆಗೆ ಗುರಿಪಡಿಸಬೇಕೆಂದು ವಿಶ್ವಹಿಂದು ಪರಿಷದ್ ಮಹಾರಾಷ್ಟ್ರ ಹಾಗು ಕೇಂದ್ರಸರಕಾರವನ್ನು ಆಗ್ರಹಿಸುತ್ತದೆ ಎಂದು ಕರ್ನಾಟಕ ವಿಶ್ವಹಿಂದೂ ಪರಿಷದ್ ನ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ ಎಂ ಬಿ ಪುರಾಣಿಕ್ ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments are closed.