ಮಂಗಳೂರು: ಹಳೆಯ ತಲೆಮಾರಿನ ಹಿರಿಯ ಅರ್ಥಧಾರಿಗಳಾದ ದಿ.ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ದಿ. ಬೊಂಡಾಲ ರಾಮಣ್ಣ ಶೆಟ್ಟಿ ಸ್ಮರಣಾರ್ಥ ನೀಡಲಾಗುವ ‘ಬೊಂಡಾಲ ಪ್ರಶಸ್ತಿ ‘ ಗೆ 2019 – 20 ನೇ ಸಾಲಿನಲ್ಲಿ ಕಟೀಲು ಮೇಳದ ಹಿರಿಯ ಯಕ್ಷಗಾನ ವೇಷಧಾರಿ ರವಿರಾಜ ಪನೆಯಾಲ ಮತ್ತು ಮದ್ದಲೆಗಾರ ಮಣಿಮುಂಡ ಸುಬ್ರಹ್ಮಣ್ಯಶಾಸ್ತ್ರೀ ಆಯ್ಕೆಯಾಗಿದ್ದಾರೆ.
ಬಂಟ್ವಾಳ ತಾಲೂಕಿನಲ್ಲಿ ಜನಪ್ರಿಯ ಶಿಕ್ಷಕರಾಗಿ, ಊರಿನ ಪಟೇಲರಾಗಿ ಪ್ರಸಿದ್ಧರಾಗಿದ್ದ ಬೊಂಡಾಲ ಜನಾರ್ದನ ಶೆಟ್ಟಿ ಅವರು ಹಳೆಯ ತಲೆಮಾರಿನ ನುರಿತ ಯಕ್ಷಗಾನ ಅರ್ಥಧಾರಿಗಳು. ಕೆ.ಪಿ.ವೆಂಕಪ್ಪ ಶೆಟ್ಟಿ, ನಾರಾಯಣ ಕಿಲ್ಲೆ, ಪೊಳಲಿ ಶಾಸ್ತ್ರಿ ,ಶೇಣಿ ಗೋಪಾಲಕೃಷ್ಣ ಭಟ್ ಮೊದಲಾದ ತಾಳಮದ್ದಳೆ ದಿಗ್ಗಜರ ಸಾಲಿನಲ್ಲಿ ಅರ್ಥ ಹೇಳುತ್ತಿದ್ದ ಅವರಿಗೆ ಯಕ್ಷಗಾನದ ಸಂಜಯ ಎಂದೇ ಹೆಸರು. ಕಾರಣ ಕೃಷ್ಣ ಸಂಧಾನದ ಅವರ ಸಂಜಯನ ಪಾತ್ರಕ್ಕೆ ಆ ಕಾಲದಲ್ಲಿ ಸರಿಗಟ್ಟುವವರೇ ಇಲ್ಲವಾಗಿತ್ತು.
ಅವರ ಪುತ್ರ ಬೊಂಡಾಲ ರಾಮಣ್ಣ ಶೆಟ್ಟರು ಭೂಮಾಪನ ಅಧಿಕಾರಿಯಾಗಿ, ಯಕ್ಷಗಾನದ ಸಂಘಟಕ – ವೇ಼ಷಧಾರಿಯಾಗಿ ಜನಪ್ರಿಯರು. ಪ್ರಸ್ತುತ ಕೀರ್ತಿಶೇಷರಾಗಿರುವ ಈ ಇಬ್ಬರ ಹೆಸರಿನಲ್ಲಿ ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ನೀಡುವ ಬೊಂಡಾಲ ಪ್ರಶಸ್ತಿಗೆ 2020ನೇ ಸಾಲಿನಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಹಿರಿಯ ವೇಷಧಾರಿ ರವಿರಾಜ ಪನೆಯಾಲ ಮತ್ತು ಹಿಮ್ಮೇಳ ವಾದಕ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ ಆಯ್ಕೆಯಾಗಿದ್ದಾರೆ.
ಕಟೀಲು ಮೇಳದಲ್ಲಿ ಸೇವೆಗೈದ ಕಲಾವಿದರಿಗಾಗಿಯೇ ಕಳೆದ ಒಂಭತ್ತು ವರ್ಷಗಳಿಂದ ನೀಡಲಾಗುತ್ತಿರುವ ಬೊಂಡಾಲ ಪ್ರಶಸ್ತಿಯನ್ನು ಫೆ.21, 2020 ರಂದು ಬಂಟ್ವಾಳ ಶಂಭೂರು ಗ್ರಾಮದ ಬೊಂಡಾಲದಲ್ಲಿ ಜರಗುವ ಕಟೀಲು ಮೇಳದ ಬಯಲಾಟದ ರಂಗಸ್ಥಳದಲ್ಲಿ ಪ್ರದಾನಿಸಲಾಗುವುದು.
ರವಿರಾಜ ಪನೆಯಾಲ: ಕಾಸರಗೋಡು ತಾಲೂಕಿನ ಪನೆಯಾಲದಲ್ಲಿ ದಿ.ಎನ್. ಕೇಶವ ಭಟ್ ಮತ್ತು ಶ್ರೀಮತಿ ಸಾವಿತ್ರಿ ದಂಪತಿಗೆ 1968ರಲ್ಲಿ ಜನಿಸಿದ ರವಿರಾಜ ಭಟ್ ಪಡ್ರೆ ವಾಣಿನಗರದ ಸರಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಕಲಿತು ಯಕ್ಷಗಾನದತ್ತ ಹೊರಳಿದರು. ಗುರು ಸಬ್ಬಣಕೋಡಿ ರಾಮ ಭಟ್ಟರಲ್ಲಿ ನಾಟ್ಯಾಭ್ಯಾಸ ಮಾಡಿ 1989ರಲ್ಲಿ ಕಟೀಲು ಮೇಳಕ್ಕೆ ಸೇರ್ಪಡೆಗೊಂಡರು. 1997 ರಲ್ಲಿ ಮೇಳ ಬಿಟ್ಟು ಕೃಷಿಯನ್ನು ಅವಲಂಬಿಸಿದ ಅವರು ಮರಳಿ 2004ರಲ್ಲಿ ಎಡನೀರು ಮೇಳ ಸೇರಿ ತಮ್ಮ ಯಕ್ಷಗಾನ ಸೇವೆಯನ್ನು ಮುಂದುವರಿಸಿದರು.
ಆರಂಭದಲ್ಲಿ ಬಣ್ಣದ ವೇಷಗಳನ್ನೇ ಮಾಡುತ್ತಿದ್ದ ರವಿ ರಾಜರು ಬಳಿಕ ಕಿರೀಟ ಹಾಗೂ ನಾಟಕೀಯ ವೇಷಗಳನ್ನು ನಿರ್ವಹಿಸತೊಡಗಿದರು. ಅರ್ಜುನ, ದೇವೇಂದ್ರ ,ಭೀಷ್ಮ, ಕರ್ಣ, ಕಂಸ, ಜರಾಸಂಧ, ರಾವಣ, ಶುಂಭ, ಮಹಿಷಾಸುರ, ಅರುಣಾಸುರ ಮುಂತಾದ ಪಾತ್ರಗಳಲ್ಲಿ ಅವರು ಪ್ರಸಿದ್ಧರು. ತಾಳಮದ್ದಳೆ ಕೂಟಗಳಲ್ಲಿ ಅರ್ಥಧಾರಿಯಾಗಿ ಯೂ ಪನೆಯಾಲರಿಗೆ ಪರಿಶ್ರಮವಿದೆ.
ಪತ್ನಿ ದುರ್ಗಾಪರಮೇಶ್ವರಿ ಮತ್ತು ಪುತ್ರ ಚಿನ್ಮಯರನ್ನೊಳಗೊಂಡ ಪುಟ್ಟ ಸಂಸಾರ ರವಿರಾಜರದು. ಇದೀಗ 2015ರಿಂದ ಕಟೀಲು ಮೇಳಕ್ಕೆ ಮತ್ತೆ ಸೇರ್ಪಡೆಗೊಂಡಿರುವ ಅವರು ತಮ್ಮ ಕಲಾ ವ್ಯವಸಾಯವನ್ನು ಮುಂದುವರಿಸುತ್ತಿದ್ದಾರೆ.
ಮಣಿಮುಂಡ ಸುಬ್ರಮಣ್ಯ ಶಾಸ್ತ್ರಿ: ಮೂಡಿಗೆರೆ ತಾಲ್ಲೂಕಿನ ಬಣಕಲ್ ನಲ್ಲಿ ಸುಬ್ಬಣ್ಣ ಶಾಸ್ತ್ರಿ ಮತ್ತು ರಮಾದೇವಿ ದಂಪತಿಯ ಪುತ್ರನಾಗಿ ಫೆಬ್ರವರಿ 23, 1966 ರಲ್ಲಿ ಜನಿಸಿದ ಮಣಿಮುಂಡ ಸುಬ್ರಹ್ಮಣ್ಯಶಾಸ್ತ್ರಿ ಕಲಿತುದುದು ಏಳನೇ ತರಗತಿ. 1977ರಲ್ಲಿ ಧರ್ಮಸ್ಥಳ ಯಕ್ಷಗಾನ ಕೇಂದ್ರವನ್ನು ಸೇರಿ ಗುರು ಗೋವಿಂದಭಟ್ಟರಿಂದ ನಾಟ್ಯ ಕಲಿತು ವೇಷಧಾರಿಯಾಗಿ ಅವರು ತಮ್ಮ ವೃತ್ತಿಜೀವನವನ್ನು ಆರಂಭಿಸಿದರು.
ಧರ್ಮಸ್ಥಳ ಮೇಳದಲ್ಲಿ ಎರಡು ವರ್ಷ ಹಾಗೂ ಸುಂಕದಕಟ್ಟೆ ಮೇಳದಲ್ಲಿ ಒಂದು ವರ್ಷ ನಿತ್ಯ ವೇಷಗಳನ್ನು ಮಾಡುತ್ತಿದ್ದ ಸುಬ್ರಹ್ಮಣ್ಯಶಾಸ್ತ್ರಿ ಮುಂದೆ ಯಕ್ಷಗಾನದ ಹಿಮ್ಮೇಳದತ್ತ ಆಕರ್ಷಿತರಾದರು. ಮರಳಿ ಧರ್ಮಸ್ಥಳ ಕೇಂದ್ರವನ್ನು ಸೇರಿದ ಅವರು ನೆಡ್ಲೆ ನರಸಿಂಹ ಭಟ್ಟರಿಂದ ಚೆಂಡೆ – ಮದ್ದಳೆವಾದನವನ್ನು ಅಭ್ಯಸಿಸಿದರು. ಆ ಮೇಲೆ ಪುತ್ತೂರು ಹಾಗೂ ಧರ್ಮಸ್ಥಳ ಮೇಳಗಳಲ್ಲಿ ಎರಡು ವರ್ಷ ತಿರುಗಾಟ ನಡೆಸಿದರು. ಈ ಹಂತದಲ್ಲಿ ಧರ್ಮಸ್ಥಳ ಮೇಳದ ಕಡತೋಕ ಮಂಜುನಾಥ ಭಾಗವತರು ಮತ್ತು ಕೃಷ್ಣಯ್ಯ ಬಲ್ಲಾಳರ ಸಮರ್ಥ ಮಾರ್ಗದರ್ಶನ ಅವರಿಗೆ ಲಭಿಸಿತು.
ತೆಂಕುತಿಟ್ಟಿನ ವಿವಿಧ ಮೇಳಗಳಲ್ಲಿ ಸುಮಾರು ಮೂರೂವರೆ ದಶಕಗಳ ತಿರುಗಾಟದ ಅನುಭವವಿರುವ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿಗಳು ಪ್ರಸ್ತುತ ಕಳೆದ 11 ವರ್ಷಗಳಿಂದ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಬರಹ: ಭಾಸ್ಕರ ರೈ ಕುಕ್ಕುವಳ್ಳಿ.

Comments are closed.