ಮಂಗಳೂರು / ಉಳ್ಳಾಲ, ಫೆಬ್ರವರಿ.20 : ಫೆಬ್ರವರಿ 15ರಂದು ಶನಿವಾರ ತಡ ರಾತ್ರಿ ಉಳ್ಳಾಲ ನೇತ್ರಾವತಿ ಸೇತುವೆ ಬಳಿ ನಿಗೂಢವಾಗಿ ಕಾಣೆಯಾಗಿದ್ದ ಬಾಳ್ತಿಲ ಶಂಭೂರು ಚರ್ಚ್ ಬಳಿಯ ನಿವಾಸಿ ಗೋಪಾಲಕೃಷ್ಣ ರೈ ಮತ್ತು ಅವರ ಏಕೈಕ ಪುತ್ರ ನಮೀಶ್ ರೈ ಈವರೆಗೆ ಪತ್ತೆಯಾಗದೇ ಇರುವುದರಿಂದ ಮನೆಯವರು ಆತಂಕಕ್ಕೆ ಒಳಗಾಗಿದ್ದಾರೆ.
ಕೊಣಾಜೆ ಸಮೀಪದ ಪಾವೂರು ಗುತ್ತು ನೇಮಕ್ಕೆ ಬಂದಿದ್ದ ಮುಂಬಯಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿರುವ ಬಂಟ್ವಾಳ, ಬಾಳ್ತಿಲ ಶಂಭೂರು ಚರ್ಚ್ ಬಳಿಯ ನಿವಾಸಿ ಗೋಪಾಲಕೃಷ್ಣ ರೈ (52) ಮತ್ತು ಅವರ ಏಕೈಕ ಪುತ್ರ ನಮೀಶ್ ರೈ (5) ಶನಿವಾರ ತಡರಾತ್ರಿ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದು, ಅವರು ಚಲಿಸುತ್ತಿದ್ದ ಕಾರು ಮಂಗಳೂರು -ಕಾಸರಗೋಡು ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಸೇತುವೆ ಬಳಿ ಪತ್ತೆಯಾಗಿದೆ. ಈ ವೇಳೆ ನೇತ್ರಾವತಿ ಸುತ್ತಮುತ್ತ ತಟ ಪ್ರದೇಶದಲ್ಲಿ ಮೀನುಗಾರರು ಸೇರಿದಂತೆ ಸ್ಥಳೀಯರು ಹುಡುಕಾಡಿದರೂ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ.
ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಗೋಪಾಲಕೃಷ್ಣ ರೈ ಅವರ ಪತ್ನಿ ನಾಪತ್ತೆ ದೂರು ನೀಡಿದ್ದಾರೆ. ಆದರೆ ನಾಪತ್ತೆಯಾಗಿ ಐದು ದಿನಗಳು ಕಳೆದರೂ ಇನ್ನು ಇವರ ಸುಳಿವು ಲಭಿಸದೇ ಇರುವುದರಿಂದ ಮನೆಯವರು ಆತಂಕಗೊಂಡಿದ್ದಾರೆ.
ಪಾವೂರು ದೆಬ್ಬೇಲಿಯಲ್ಲಿ 18 ವರ್ಷಕ್ಕೊಮ್ಮೆ ನಡೆಯುವ ಪೈಚಿಲ್ ನೇಮ ಫೆ. 15 ಮತ್ತು 16ರಂದು ನಡೆದಿದ್ದು, ಇದಕ್ಕಾಗಿ ಫೆ. 14ರಂದು ಪತ್ನಿ, ಪುತ್ರನೊಂದಿಗೆ ಗೋಪಾಲಕೃಷ್ಣ ರೈ ಮುಂಬಯಿಯಿಂದ ತನ್ನ ವ್ಯಾಗನ್ಆರ್ ಕಾರಿನಲ್ಲಿ ಆಗಮಿಸಿದ್ದರು. 15ರಂದು ರಾತ್ರಿ ನೇಮದಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಿದ್ದ ರೈ ಅವರು ತಡರಾತ್ರಿ 1 ಗಂಟೆಯವರೆಗೂ ನೇಮ ನಡೆಯುತ್ತಿದ್ದ ಸ್ಥಳದಲ್ಲಿ ಇದ್ದರು. ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ಪುತ್ರ ನಮೀಶ್ ರೈ ತಡರಾತ್ರಿ ನಿದ್ರೆಗೆ ಜಾರಿದ್ದರಿಂದ ಪತ್ನಿಯ ಮನೆಗೆ ಪುತ್ರನೊಂದಿಗೆ ತೆರಳಿದ್ದು, ಮನೆ ತಲುಪಿದಾಗ ಪುತ್ರ ನಮೀಶ್ ಅಳಲು ಆರಂಭಿಸಿದ. ಹೀಗಾಗಿ ಪುತ್ರನನ್ನು ಮತ್ತೆ ಕರೆದುಕೊಂಡು ಬರುತ್ತೇನೆ ಎಂದಿದ್ದರು.
ಆದರೆ ಕರೆ ಮಾಡಿ ಗಂಟೆ ಕಳೆದರೂ ಪುತ್ರ ಮತ್ತು ಪತಿ ನೇಮದ ಕಡೆ ಬಾರದೆ ಇದ್ದಾಗ ಪತ್ನಿ ತನ್ನ ಪತಿಗೆ ನಿರಂತರವಾಗಿ ದೂರವಾಣಿ ಕರೆ ಮಾಡಿದರೂ ಸ್ವೀಕರಿಸದೇ ಇದ್ದಾಗ ನಸುಕಿನ ಜಾವ 4 ಗಂಟೆಯಿಂದ ಐದು ಗಂಟೆಯವರೆಗೆ ಹುಡುಕಾಡಿದ್ದು, ಭಯಗೊಂಡ ಗೋಪಾಲಕೃಷ್ಣ ರೈ ಅವರ ಪತ್ನಿ ಮತ್ತು ಮನೆಯವರು ಕೊಣಾಜೆ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರು ದಾಖಲಿಸಿದ್ದರು.
ಬೆಳಗ್ಗಿನ ಜಾವ ಸಂಚಾರಿ ಪೊಲೀಸರು ಹೆದ್ದಾರಿಯಲ್ಲಿ ಗಸ್ತು ತಿರುಗಾಡುತ್ತಿದ್ದಾಗ ಸೇತುವೆ ಬಳಿ ಅನಾಥ ಸ್ಥಿತಿಯಲ್ಲಿ ನಿಂತಿದ್ದ ಕಾರನ್ನು ಗಮನಿಸಿ ಹತ್ತಿರ ಬಂದಾಗ ಕಾರಿನ ಗ್ಲಾಸ್ ಹಾಕದೆ ಇರುವುದು ಪತ್ತೆಯಾಯಿತು. ಸುತ್ತಮುತ್ತ ಯಾರೂ ಇಲ್ಲದೇ ಇದ್ದಾಗ ಕಾರನ್ನು ತಪಾಸಣೆ ನಡೆಸಿದ್ದು, ಕಾರಿನಲ್ಲಿ ಮಗುವಿನ ಚಪ್ಪಲ್, ಅರ್ಧ ಕುಡಿದ ಮದ್ಯದ ಬಾಟಲಿ, ಮೊಬೈಲ್ ಪತ್ತೆಯಾಗಿದೆ.
ಕಾರಿನ ಡ್ಯಾಷ್ ಬೋರ್ಡ್ ಪರಿಶೀಲನೆ ನಡೆಸಿದಾಗ ಅದರಲ್ಲಿ ಡೆತ್ನೋಟ್ ಪತ್ತೆಯಾಗಿದ್ದು ತಕ್ಷಣವೇ ಪೊಲೀಸರು ಕಂಟ್ರೋಲ್ ರೂಂಗೆ ದೂರವಾಣಿ ಕರೆ ಮಾಡಿದ್ದು, ಈ ಸಂದರ್ಭದಲ್ಲಿ ರೈ ಅವರ ಮನೆಯವರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದನ್ನು ಪರಶೀಲನೆ ನಡೆಸಿದಾಗ ನಾಪತ್ತೆಯಾದ ಗೋಪಾಲಕೃಷ್ಣ ರೈ ಅವರ ಮಹಾರಾಷ್ಟ್ರ ನೋಂದಾಯಿತ ಕಾರು ಎಂದು ಬೆಳಕಿಗೆ ಬಂದಿದ್ದು ಪೊಲೀಸರು ರೈ ಅವರ ಪತ್ನಿಗೆ ಮಾಹಿತಿ ನೀಡಿದ್ದಾರೆ,
ಪತ್ನಿ ಮನೆಯವರು ನೇತ್ರಾವತಿ ಸೇತುವೆಗೆ ಆಗಮಿಸಿ ಕಾರು ತಮ್ಮದೇ ಎಂದು ಖಚಿತಪಡಿಸಿದ್ದು, ಮಂಗಳೂರು ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ನದಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಥಳೀಯರ ಮತ್ತು ಮೀನುಗಾರರ ಸಹಕಾರದೊಂದಿಗೆ ಹುಡುಕಾಟ ನಡೆಸಿದ್ದರೂ ಈವರೆಗೆ ಪತ್ತೆಯಾಗಿಲ್ಲ.
ರೈ ಅವರು ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗುತ್ತಿದ್ದಂತೆ ಅವರು ಕಾರಿನ ಡ್ಯಾಷ್ ಬೋರ್ಡ್ನಲ್ಲಿ ಬರೆದಿಟ್ಟಿದ್ದ ಡೆತ್ ನೋಟ್ನಲ್ಲಿ ಸಾವಿಗೆ ಕಾರಣ ಏನು ಎಂಬುದನ್ನು ತಿಳಿಸಿಲ್ಲ. ತಾನೊಬ್ಬ ಪಾಪಿ. ಪುತ್ರನನ್ನು ಕೊಂದ ಕ್ರೂರಿ. ಹೆತ್ತವರಿಗೆ, ಸಹೋದರ-ಸಹೋದರಿಯರಿಗೆ ಉತ್ತಮ ಸಹೋದರ ನಾದೆ, ಪತ್ನಿಗೆ ಉತ್ತಮ ಪತಿ ಆಗಲಿಲ್ಲ. ತನ್ನ ಪತ್ನಿ ಯಾವುದೇ ಚಿಂತೆಯಿಲ್ಲದೆ ಮುಂದಿನ ಬಾಳ್ವೆಯನ್ನು ನಡೆಸಬೇಕು. ತನ್ನ ಆಸ್ತಿಯೆಲ್ಲಾ ಸಹೋದರನಿಗೆ ಸೇರಿರುವುದು. ಪತ್ನಿ ಆಕೆಯ ಸಹೋದರನ ಪುತ್ರನನ್ನು ಸ್ವಂತ ಪುತ್ರನಂತೆ ನೋಡಿಕೊಳ್ಳಲಿ ಎಂದು ಬರೆದಿದ್ದಾರೆ. ಕೊಣಾಜೆ ಪೊಲೀಸರು ಪ್ರಕರಣ ತನಿಖೆಯನ್ನು ಮುಂದುವರಿಸಿದ್ದಾರೆ.





Comments are closed.