ಕರಾವಳಿ

ಬಾಕಿ ಹಣ 2500 ವಾಪಾಸ್ ಕೊಡದ್ದಕೆ ಸ್ನೇಹಿತನ ಕೊಲೆ‌ ಮಾಡಿದ ಆರೋಪಿ ಅಂದರ್!

Pinterest LinkedIn Tumblr

ಉಡುಪಿ: ಕೊಡಬೇಕಿದ್ದ ಎರಡೂವರೆ ಸಾವಿರ ರೂ. ಹಣವನ್ನು ನೀಡದೇ ಸತಾಯಿಸುತ್ತಿದ್ದ ದ್ವೇಷದಿಂದ ತನ್ನ ಸ್ನೇಹಿತನನ್ನೇ ಬಾವಿಗೆ ದೂಡಿ ಹಾಕಿ ಕೊಲೆ ಮಾಡಿದ ಆರೋಪಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಫೆ.14 ಶುಕ್ರವಾರ ಬೆಳಿಗ್ಗೆ ಬ್ರಹ್ಮಾವರ ತಾಲೂಕು ಹೆಗ್ಗುಂಜೆ ಗ್ರಾಮದ ಪಡುಕೋಮೆ ನಿರ್ಜೆಡ್ಡು ಎಂಬಲ್ಲಿ ಈ ಕೊಲೆ ನಡೆದಿದ್ದು ಕೊಲೆಯಾದ ಯುವಕನ ತಾಯಿ ಪೊಲೀಸರಿಗೆ ದೂರು ನೀಡಿದ್ದರು.

ಬ್ರಹ್ಮಾವರ ಹೆಗ್ಗುಂಜೆ ನಿರ್ಜೆಡ್ಡುವಿನ ನಿವಾಸಿ ಮನೋಜ್ (21) ಕೊಲೆಯಾಗಿದ್ದು ಆತನ ಸ್ನೇಹಿತ ಸುನಿಲ್ ಶೆಟ್ಟಿ ಎಂಬಾತ ಕೊಲೆ ಮಾಡಿ ಪರಾರಿಯಾಗಿದ್ದ. ಬ್ರಹ್ಮಾವರ ಸಿಪಿಐ ಅನಂತ ಪದ್ಮನಾಭ, ಪಿಎಸ್ಐ ರಾಘವೇಂದ್ರ ಹಾಗೂ ಸಿಬ್ಬಂದಿಗಳ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಏನಿದು ಘಟನೆ…..
ಫೆ.14 ಶುಕ್ರವಾರ ಬೆಳಿಗ್ಗೆ ಮನೋಜ್ ಅವರ ಮನೆಗೆ ಬಂದ ಸುನೀಲ್ ಶೆಟ್ಟಿ, ಮನೋಜ್ ನನಗೆ 2,500ರೂ. ಹಣ ಕೊಡಲು ಇದೆ. ಹಣ ಪಡೆದು ಎರಡು ವರ್ಷಗಳಾದರೂ ಇನ್ನೂ ನೀಡಿಲ್ಲ. ಫೋನ್ ಮಾಡಿದರೆ ತೆಗೆಯುದಿಲ್ಲ. ಉಡುಪಿಯಲ್ಲಿ ಹುಡುಕಾಡಿದರೂ ಸಿಕ್ಕಿಲ್ಲ ಎಂದು ಕೂಗಾಡಿದ್ದ. ಮನೆಯಲ್ಲಿ ಮಲಗಿದ್ದ ಮನೋಜ್ ಹೊರಗಡೆ ಬಂದು ಮಂದಾರ್ತಿ ಬ್ಯಾಂಕ್‌ನಲ್ಲಿ ಹಣ ತೆಗೆದು ಕೊಡುತ್ತೇನೆ ಎಂದು ಸುನೀಲ ಶೆಟ್ಟಿಗೆ ಹೇಳಿದ್ದು ನನಗೆ ಈಗಲೇ ಹಣ ಬೇಕೆಂದು ರಂಪಾಟ ಮಾಡಿದ್ದ. ಆ ಸಮಯಕ್ಕೆ ಮನೋಜ್ ಹಲ್ಲುಜ್ಜಿ ಬರುವುದಾಗಿ ಹೇಳಿ ಬಾವಿಯ ಕಡೆ ಹೋದಾಗ ಸುನೀಲ್ ಶೆಟ್ಟಿ ಕೂಡ ಆತನೊಂದಿಗೆ ಹೋದನು. ಅಲ್ಲಿಂದ ವಾಪಾಸ್ಸು ಬಂದ ಸುನೀಲ್ ಶೆಟ್ಟಿ, ತನ್ನಲ್ಲಿ ಮನೋಜ್ ಬಾವಿಗೆ ಬಿದ್ದ ಎಂದು ಹೇಳಿ ಓಡಿ ಹೋಗಿದ್ದ.

ಬಾಕಿ ಇರುವ 2,500ರೂ. ಹಣ ನೀಡದೆ ಸತಾಯಿಸುತ್ತಿರುವ ದ್ವೇಷದಿಂದ ಸುನೀಲ್ ಶೆಟ್ಟಿ, ನನ್ನ ಮಗನನ್ನು ಬಾವಿಗೆ ದೂಡಿ ಹಾಕಿ ಕೊಲೆ ಮಾಡಿದ್ದಾರೆಂದು ಮನೋಜ್ ತಾಯಿ ರಾಧಾಭಾಯಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Comments are closed.