ಕರಾವಳಿ

ಐಸ್ ಸ್ಕೇಟಿಂಗ್ ನಲ್ಲಿ‌ ಅಂತರಾಷ್ಟ್ರೀಯ ಚಿನ್ನದ ಪದಕ ಪಡೆದ ಅನಘಾಗೆ ಮುಖ್ಯಮಂತ್ರಿ ಯಡಿಯೂರಪ್ಪರಿಂದ ಅಭಿನಂದನೆ 

Pinterest LinkedIn Tumblr

ಮಂಗಳೂರು: ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ,ಅಂತರಾಷ್ಟ್ರೀಯ ಐಸ್ ಸ್ಕೇಟಿಂಗ್ ನಲ್ಲಿ ಎರಡು ಚಿನ್ನದ ಪದಕ ಪಡೆದ ಮಂಗಳೂರಿನ ಕುಮಾರಿ ಅನಘಾ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬೆಂಗಳೂರಿನ ಅವರ ಸ್ವಗೃಹ ಧವಳಗಿರಿ ಯಲ್ಲಿ ಅಭಿನಂದಿಸಿದರು.

ಕಿರಿಯ ಪ್ರಾಯದಲ್ಲೇ ಐಸ್ ಸ್ಕೇಟಿಂಗ್ ಅನ್ನುವ ಕಷ್ಟಕರ ಕ್ರೀಡೆಯಲ್ಲಿ ಸಾಧನೆ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದಿರೋದು ಈ ರಾಜ್ಯಕ್ಕೆ ಹೆಮ್ಮೆಯ ವಿಚಾರ,ಮುಂದಿನ ದಿನದಲ್ಲೂ ಈ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯ ಹಾಗೂ ದೇಶಕ್ಕೆ ಹೆಸರು ತರುವಂತೆ ಅವರು ಆಶಿಸಿದರು.

ಅನಘಾ ಕಳೆದ 2020 ಜನವರಿ 4 ಹಾಗೂ 5 ರಂದು ಸಿಂಗಾಪುರದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಐಸ್ ಸ್ಕೇಟಿಂಗ್ ನಲ್ಲಿ ಎರಡು ಚಿನ್ನದ ಪದಕ ಪಡೆದು ಅತೀ ಕಿರಿಯ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಚಿನ್ನದ ಪದಕ ಪಡೆದ ದೇಶದ ಮೊದಲ ಸ್ಕೇಟರ್ ಅನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅನಘಾ ಈವರೆಗೆ ಜಿಲ್ಲಾ,ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಒಟ್ಟು 22 ಚಿನ್ನದ ಪದಕ,9 ಬೆಳ್ಳಿ ಹಾಗೂ 6 ಕಂಚಿನ‌ ಪದಕ ಪಡೆದಿದ್ದಾರೆ.

ಮಂಗಳೂರಿನ‌ ಕದ್ರಿ ಹಿಲ್ಸ್ ನಿವಾಸಿ, ಅನಘಾ ಡೆಂಟಲ್ ಸ್ಪೆಷಾಲಿಟಿ ಕ್ಲಿನಿಕ್ ನ ವೈದ್ಯರಾದ ಡಾ.ರಾಜೇಶ್ ಹುಕ್ಕೇರಿ ಹಾಗೂ ಡಾ.ಅನಿತಾ ರಾಜೇಶ್ ದಂಪತಿಯ ಪುತ್ರಿಯಾದ ಅನಘಾ ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ನ ನಾಲ್ಕನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಅನಘಾ ಅವರ ಕ್ರೀಡಾ ಸಾಧನೆಯನ್ನು ಪರಿಗಣಿಸಿ ಜನವರಿ 26 ರಂದು ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ದೆಹಲಿಯಲ್ಲಿ ಐಸ್ ಸ್ಕೇಟಿಂಗ್ ನ ಭಾರತ ತಂಡದ ಕೋಚ್ ಅವಧೂತ್ ಥಾವಡೇ ಅವರಿಂದ ಐಸ್ ಸ್ಕೇಟಿಂಗ್ ತರಬೇತಿ ಪಡೆಯುತ್ತಿರುವ ಅನಘಾ, ಮಂಗಳೂರಿನಲ್ಲಿ ತರಬೇತುದಾರರಾದ ಮೋಹನ್ ದಾಸ್.ಕೆ ಹಾಗೂ ಜಯರಾಜ್ ಕುಕ್ಯಾನ್ ಅವರಿಂದ ರೋಲರ್ ಸ್ಕೇಟಿಂಗ್ ತರಬೇತಿ ಪಡೆಯುತ್ತಿದ್ದಾರೆ.

Comments are closed.