ಕರಾವಳಿ

ಮಂಗಳೂರಿನಲ್ಲಿ ಇಂದಿನಿಂದ ಕರಾವಳಿ ಉತ್ಸವ : ಮಧ್ಯಾಹ್ನ ವೈಭವಯುತ ಸಾಂಸ್ಕೃತಿಕ ಮೆರವಣಿಗೆ

Pinterest LinkedIn Tumblr

ಮಂಗಳೂರು ಜನವರಿ.10 : ದಕ್ಷಿಣ ಕನ್ನಡ ಜಿಲ್ಲೆಯ ಅತಿದೊಡ್ಡ ಉತ್ಸವ ಕರಾವಳಿ ಉತ್ಸವಕ್ಕೆ ಶುಕ್ರವಾರ ಚಾಲನೆ ದೊರಕಲಿದೆ.

ಉತ್ಸವದ ಪ್ರಯುಕ್ತ ವೈಭವಯುತ ಸಾಂಸ್ಕೃತಿಕ ಮೆರವಣಿಗೆ ಮಂಗಳೂರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಮಧ್ಯಾಹ್ನ 3.30 ಕ್ಕೆ ನೆಹರೂ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಸಾಂಸ್ಕೃತಿಕ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕಲಾತಂಡಗಳು ವೈವಿಧ್ಯಮಯ ಕಲಾ ಪ್ರದರ್ಶನದೊಂದಿಗೆ ಭಾಗವಹಿಸಲಿದ್ದು, ನಗರದ ಜನತೆಗೆ ವಿವಿಧ ಕಲಾ ಪ್ರಕಾರಗಳನ್ನು ನೋಡುವ ಅವಕಾಶ ದೊರಕಲಿದೆ. ಮೆರವಣಿಗೆಯ ಯಶಸ್ಸಿಗೆ ಎಲ್ಲಾ ಸಿದ್ಧತೆಗಳು ಅಂತಿಮಗೊಂಡಿದ್ದು, ಈಗಾಗಲೇ ರಾಜ್ಯದ ವಿವಿಧ ಕಲಾ ತಂಡಗಳು ಮಂಗಳೂರು ನಗರ ತಲುಪಿವೆ.

ಸುಮಾರು 28 ಕಲಾತಂಡಗಳು ಹಾಗೂ ಯುವಜನ ಸಂಘಟನೆಗಳು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸಲಿವೆ.

ನೆಹರೂ ಮೈದಾನದಿಂದ ಹೊರಡುವ ಜನಪದ ಸಾಂಸ್ಕೃತಿಕ ಮೆರವಣಿಗೆ ಕೆ.ಎಸ್. ರಾವ್ ರಸ್ತೆ, ನವಭಾರತ್ ವೃತ್ತ, ಪಿವಿಎಸ್, ಲಾಲ್‍ಭಾಗ್ ಮೂಲಕ ಕರಾವಳಿ ಉತ್ಸವ ಮೈದಾನ ತಲುಪಲಿದೆ. ಸಂಜೆ 5.30ಕ್ಕೆ ವಸ್ತುಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಲಿದ್ದು, 6 ಗಂಟೆಗೆ ಕರಾವಳಿ ಉತ್ಸವವಕ್ಕೆ ಚಿತ್ರನಟ ರಿಷಬ್ ಶೆಟ್ಟಿ ಚಾಲನೆ ನೀಡಲಿದ್ದಾರೆ.

ಕರಾವಳಿ ಉತ್ಸವದ ಅಂಗವಾಗಿ ಜ.11 ರಿಂದ 19ರವರೆಗೆ ಉತ್ಸವ ಮೈದಾನ, ಕದ್ರಿ ಪಾರ್ಕ್‍ನಲ್ಲಿ ನಾಡಿನ ಖ್ಯಾತ ಕಲಾವಿದರು ಹಾಗೂ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಜನವರಿ 11ರಂದು ನಗರದ ವಿವಿಧ ಕ್ರೀಡಾಂಗಣಗಳಲ್ಲಿ ಕರಾವಳಿ ಉತ್ಸವ ಕ್ರೀಡೋತ್ಸವ, ಜ.16 ಮತ್ತು 17ರಂದು ಜಿಲ್ಲೆಯ ವಿವಿಧ ಕಾಲೇಜು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ‘ಯುವ ಉತ್ಸವ’ ಕದ್ರಿ ಪಾರ್ಕ್‍ನಲ್ಲಿ ನಡೆಯಲಿವೆ.

ಪಣಂಬೂರು ಬೀಚ್‍ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ:

ಪಣಂಬೂರು ಬೀಚ್‍ನಲ್ಲಿ ಜನವರಿ 17ರಿಂದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆರಂಭವಾಗಲಿದೆ. ಇದರಲ್ಲಿ ದೇಶ ವಿದೇಶಗಳ ಇದಲ್ಲದೆ ಬೀಚ್ ಕ್ರೀಡಾಕೂಟಗಳು, ಸಂಗೀತ ಕಾರ್ಯಕ್ರಮಗಳೂ ನಡೆಯಲಿದ್ದು, 19ರಂದು ಸಮಾರೋಪ ನಡೆಯಲಿದೆ.
ಕರಾವಳಿ ಉತ್ಸವ ಮೈದಾನದಲ್ಲಿ ವಸ್ತುಪ್ರದರ್ಶನ ಜ.10ರಿಂದ ಫೆಬ್ರವರಿ 10ರರೆಗೆ ಒಂದು ತಿಂಗಳ ಕಾಲ ನಡೆಯಲಿದೆ.

Comments are closed.