ಕರಾವಳಿ

ಪೇಜಾವರ ಸ್ವಾಮೀಜಿಯವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ- ಆಸ್ಪತ್ರೆಗೆ ಗಣ್ಯರ ಭೇಟಿ ರದ್ಧು

Pinterest LinkedIn Tumblr

ಉಡುಪಿ: ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿರುವ ಪೇಜಾವರ ಸ್ವಾಮೀಜಿಯವರ ಆರೋಗ್ಯ ಸ್ಥಿತಿಯು ತೀರಾ ಗಂಭೀರವಾಗಿದ್ದು ಅವರ ಪ್ರಜ್ಞೆಯ ಸ್ಥಿತಿಯಲ್ಲಿ ಇದುವರೆಗೆ ಯಾವುದೇ ಸುಧಾರಣೆ ಕಂಡು ಬಂದಿಲ್ಲ.ಅವರು ಇನ್ನೂ ಕೂಡ ಜೀವ ರಕ್ಷಕ ಸಾಧನಗಳ ಸಹಾಯದಲ್ಲಿ ಇದ್ದಾರೆ. ಅವರ ದೇಹ ಸ್ಥಿತಿಯಲ್ಲಿ ನಿನ್ನೆಯಿಂದ ಇಳಿಮುಖವಾಗಿದೆ ಎಂದು ಆಸ್ಪತ್ರೆಯ ಮೂಲಗಳಿಂದ ತಿಳಿದು ಬಂದಿದೆ.

ಶುಕ್ರವಾರ ಸಂಜೆ ಮಣಿಪಾಲ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು,ಸ್ವಾಮೀಜಿಗಳ ಆರೋಗ್ಯ ಸ್ಥಿತಿ ಮತ್ತಷ್ಟು ಕ್ಷೀಣವಾಗಿದೆ.ಪ್ರಜ್ಞೆಯ ಸ್ಥಿತಿಯಲ್ಲಿ ಇದುವರೆಗೆ ಯಾವುದೇ ಸುಧಾರಣೆ ಕಂಡು ಬಂದಿಲ್ಲ. ಅವರು ಜೀವರಕ್ಷಕ ಸಾಧನಗಳ ಸಹಾಯದಲ್ಲಿದ್ದಾರೆ ಎಂದಿದೆ.
ಪೇಜಾವರ ಶ್ರೀಗಳಿಗೆ ಶುಕ್ರವಾರ ರಾತ್ರಿ ಎಂಆರ್ ಐ ಸ್ಕ್ಯಾನಿಂಗ್ ಮಾಡಲಾಗಿದೆ.ಇಂದು ಮತ್ತೊಂದು ಎಂಆರ್ ಐ ಸ್ಕ್ಯಾನಿಂಗ್ ಮಾಡಲಿದ್ದು,ಎರಡೂ ವರದಿ ಬಂದ ನಂತರ ವೈದ್ಯರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ.

ಡಿಸೆಂಬರ್ 19ರಂದು ಸ್ವಾಮೀಜಿಯವರು ಜ್ವರದಿಂದ ಬಳಲುತ್ತಿದ್ದರೂ ಎರಡು ಮೂರು ಕಾರ್ಯಕ್ರಮಗಳನ್ನು ಮುಗಿಸಿ ಉಡುಪಿಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಸ್ವಲ್ಪ ಗುಣಮುಖರಾಗಿ ಮಠಕ್ಕೆ ಮರಳಿದ್ದರು. ಆದರೆ ಡಿ.20ರಂದು ಮುಂಜಾನೆ ಉಸಿರಾಟದ ಸಮಸ್ಯೆ ಕಂಡು ಬಂದ ಹಿನ್ನಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಗೆ ದಾಖಲಾಗಿರುವ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಯವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ.ಆದ್ದರಿಂದ ಸ್ವಾಮೀಜಿಯವರ ಭೇಟಿಗೆ ಗಣ್ಯರನ್ನು ಇಂದಿನಿಂದ ಅವಕಾಶ ನೀಡದಿರಲು ವೈದ್ಯರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಪೇಜಾವರ ಶ್ರೀಗಳು ಆಸ್ಪತ್ರೆಗೆ ದಾಖಲಾದ ದಿನದಿಂದ ಪ್ರತಿನಿತ್ಯ ಗಣ್ಯರು ಭೇಟಿ ನೀಡುತ್ತಿರುವುದರಿಂದ ಚಿಕಿತ್ಸೆಗೆ ಅಡ್ಡಿಯಾಗುತ್ತಿದೆ. ಪ್ರತೀ ಸಲ ಗಣ್ಯರು ಭೇಟಿಗೆ ಬಂದಾಗ ಐಸಿಯೂ ಬಾಗಿಲು ತೆರೆಯಬೇಕಾಗುತ್ತದೆ. ಹಾಗಾಗಿ ಇಂದಿನಿಂದ ಯಾವುದೇ ಗಣ್ಯರಿಗೆ ಸ್ವಾಮೀಜಿಗಳ ಭೇಟಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Comments are closed.