ಕರಾವಳಿ

ಮಂಗಳೂರು : ಶಾಸಕ ಕಾಮತ್ ಅವರ ನೋ ಹಾರ್ನ್ ಡೇ ಅಭಿಯಾನಕ್ಕೆ ಒಂದು ವರ್ಷ

Pinterest LinkedIn Tumblr

ಮಂಗಳೂರು : ಮಿತಿ ಮೀರಿದ ಶಬ್ದ ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಕಳೆದ ವರ್ಷ ಕೈಗೊಂಡ ನೋ ಹಾರ್ನ್ ಡೇ ಅಭಿಯಾನಕ್ಕೆ ಇಂದಿಗೆ ಒಂದು ವರ್ಷ ಸಂಧಿದೆ. ಆದರೆ ಅಂದಿನ ಉತ್ಸಾಹ ಇಂದಿಗೂ ಹಾಗೆಯೇ ಇದೆ.

ಮಂಗಳೂರು ನಗರದಲ್ಲಿ ಹಲವಾರು ಆಸ್ಪತ್ರೆಗಳಿವೆ, ಶಾಲಾ ಕಾಲೇಜುಗಳಿವೆ. ವಾಹನಗಳ ಕರ್ಕಶ ಹಾರ್ನ್`ಗಳ ಶಬ್ದದಿಂದ ಅದೆಷ್ಟೋ ಜನರಿಗೆ ಸಮಸ್ಯೆಯಾಗುತ್ತಿದೆ ಎನ್ನುವ ಕಾರಣದಿಂದ ಮಂಗಳೂರು ನಗರದಲ್ಲಿ ವಾರದ ಒಂದು ದಿನ ಹಾರ್ನ್ ಮುಕ್ತ ದಿನವನ್ನಾಗಿ ಆಚರಿಸುವ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಅಭಿಯಾನದ ಪೂರ್ವಭಾವಿಯಾಗಿ ಬಸ್ ಚಾಲಕರು ಹಾಗೂ ಮಾಲಕರ ಸಂಘ, ರಿಕ್ಷಾ ಚಾಲಕರ ಸಂಘ, ಟಾಕ್ಸಿ ಚಾಲಕರ ಸಂಘದ ಜೊತೆ ಮಾತುಕತೆ ನಡೆಸಿ ನೋ ಹಾರ್ನ್ ಡೇ ಅಭಿಯಾನಕ್ಕೆ ಕೈ ಜೋಡಿಸುವಂತೆ ಶಾಸಕ ಕಾಮತ್ ಕರೆ ನೀಡಿದ್ದರು.

ಶಾಸಕರ ಮನವಿಗೆ ಸ್ಪಂದಿಸಿದ್ದ ಬಸ್ ಮಾಲಕರ ಸಂಘವು ಅಭಿಯಾನಕ್ಕೆ ಬೆಂಬಲವಾಗಿ ಹಲವಾರು ಬಸ್ ಗಳಲ್ಲಿನ ಕರ್ಕಶ ಹಾರ್ನ್ ಗಳನ್ನು ತೆರವುಗೊಳಿಸಿದ್ದು ವಿಶೇಷವಾಗಿತ್ತು.

ಶಾಲಾ ಕಾಲೇಜು ವಿಧ್ಯಾರ್ಥಿಗಳಿಂದ ನೋ ಹಾರ್ನ್ ಡೇ ಅಭಿಯಾನಕ್ಕೆ ಬೆಂಬಲ: 

ಅಭಿಯಾನ ಪ್ರಾರಂಭವಾದ ಮೊದಲ ವಾರ ನಗರದ ವಿವಿಧ ಕಾಲೇಜುಗಳ ವಿಧ್ಯಾರ್ಥಿಗಳು ಜ್ಯೋತಿ ವೃತ್ತದ ಬಳಿ ವಾಹನ ಸವಾರರಿಗೆ ಗುಲಾಬಿ ಹೂ ವಿತರಿಸುವ ಮೂಲಕ ಶಬ್ದ ರಹಿತ ದಿನವನ್ನು ಆಚರಿಸುವಂತೆ ವಾಹನ ಚಾಲಕರಲ್ಲಿ ಜಾಗೃತಿ ಮೂಡಿಸಿದ್ದರು. ವಿಧ್ಯಾರ್ಥಿ ಗಳೊಂದಿಗೆ ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳು ಕೂಡ ಈ ಅಭಿಯಾನದಲ್ಲಿ ಕೈ ಜೋಡಿಸಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವು.

 ನೋ ಹಾರ್ನ್ ಡೇ ಸ್ಟಿಕ್ಕರ್ ವಿತರಣೆ :

ಅಭಿಯಾನದ ಪ್ರಾರಂಭದಿಂದಲೂ ಹಂತ ಹಂತವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ರೀತಿಯ ಕಾರ್ಯಗಳು ನಡೆದಿತ್ತು. ಆಟೋ,ಬಸ್,ಟಾಕ್ಸಿ, ಹಾಗೂ ಕಾಲೇಜು ಆವರಣದಲ್ಲಿ ಸ್ವತಃ ಶಾಸಕ ಕಾಮತ್ ಸ್ಟಿಕರ್ ವಿತರಿಸುವ ಮೂಲಕ ಅಭಿಯಾನವು ಮತ್ತಷ್ಟು ಪುಷ್ಠಿ ನೀಡಿದ್ದರು.

ಕಾಲೇಜು ಆವರಣದಲ್ಲಿ ಜಾಗೃತಿ ಕಾರ್ಯಕ್ರಮ :

ನಗರದ ಕಾಲೇಜುಗಳಿಗೆ ತೆರಳಿ ನೋ ಹಾರ್ನ್ ಡೇ ಅಭಿಯಾನದ ಕುರಿತು ಜಾಗೃತಿ ಮೂಡಿಸಲು ಶಾಸಕ ಕಾಮತ್ ಅವರು ವಿಧ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿದ್ದರು. ವಿಧ್ಯಾರ್ಥಿ ಹಾಗೂ ಶಿಕ್ಷಕರ ವಾಹನಗಳಿಗೆ ಸ್ಟಿಕ್ಕರ್ ಅಂಟಿಸುವ ಮೂಲಕ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು.

ಈ ಕುರಿತು ಪ್ರತಿಕ್ರಯಿಸಿರುವ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ನಗರದಲ್ಲಿ ವಾಹನಗಳ ಹಾರ್ನ್ ಶಬ್ದದಿಂದ ಉಂಟಾಗುವ ಶಬ್ದ ಮಾಲಿನ್ಯವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಕಳೆದ ವರ್ಷದಿಂದ ಆಚರಿಸಿಕೊಂಡು ಬರುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನದ ಕುರಿತು ಪ್ರಚಾರ ನೀಡುತ್ತಾ ಸಾಧ್ಯವಾಗುವ ಮಟ್ಟಿಗೆ ಶಬ್ದ ಮಾಲಿನ್ಯ ತಡೆಗಟ್ಟಲು ನಮ್ಮೊಂದಿಗೆ ಕೈ ಜೋಡಿಸಿ ಎಂದು ಭಿನ್ನವಿಸಿದ್ದೇವೆ.

ಸಾರ್ವಜನಿಕ ವಲಯದಲ್ಲಿ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗುತ್ತಿದೆಯಾದರೂ ಮತ್ತಷ್ಟು ಪ್ರಚಾರದ ಅವಶ್ಯಕತೆಯಿದೆ. ಈ ಹಿಂದೆ ಕಲೆಕ್ಟರ್ ಗೇಟ್ ನಿಂದ ಹಂಪನಕಟ್ಟೆಯ ವರೆಗೆ ನೋ ಹಾರ್ನ್ ಝೋನ್ ಕುರಿತು ಸಂಚಾರಿ ಪೋಲಿಸ್ ಇಲಾಖೆಯಿಂದ ಆದೇಶವಿದ್ದರೂ ಕೂಡ ಸಾರ್ವಜನಿಕರ ಬೆಂಬಲದ ಹೊರತಾಗಿ ಅದು ಅನುಷ್ಠಾನಕ್ಕೆ ಸಾಧ್ಯವಾಗಿಲ್ಲ.

ಶಬ್ದ ಮಾಲಿನ್ಯ, ಪರಿಸರ ಮಾಲಿನ್ಯ ಇಂತಹ ಪ್ರಕೃತಿಯ ಮೇಲಿನ ಕೆಡುಕುಗಳು ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬರಬೇಕು ಎನ್ನುವ ಆಶಯ ಜನ ಸಮೂಹದ ಮನಸ್ಸಿನಲ್ಲಿ ಚಿಗುರೊಡೆಯಬೇಕು. ಆಗ ಮಾತ್ರ ಸ್ವಚ್ಛ – ಸುಂದರ- ಸ್ವಸ್ಥ ನಗರ ನಿರ್ಮಾಣ ಸಾಧ್ಯ. ನೇ ಹಾರ್ನ್ ಡೇ ಅಭಿಯಾನಕ್ಕೆ ಮತ್ತಷ್ಟು ಬೆಂಬಲ ಬೇಕಿದೆ. ಸಾರ್ವಜನಿಕರು ಈ ಅಭಿಯಾನವನ್ನು ನಗರದ ಹಿತ ದೃಷ್ಠಿಯಲ್ಲಿ ತಮ್ಮ ತಮ್ಮ ದಿನಚರಿಯ ಭಾಗವಾಗಿ ಬೆಳೆಸಿಕೊಂಡರೆ ಶಬ್ದ ಮಾಲಿನ್ಯಕ್ಕೆ ಕಡೆವಾಣ ಹಾಕಬಹುದು ಎಂದು ಶಾಸಕ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.

Comments are closed.