ಕರಾವಳಿ

ನವಯುಗ ಕಂಪೆನಿ ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ: ಕುಂದಾಪುರದಲ್ಲಿ ಜನಾಕ್ರೋಷ!

Pinterest LinkedIn Tumblr

ಕುಂದಾಪುರ : ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ ಹಲವು ಕಾರಣಗಳನ್ನು ನೀಡುತ್ತಿದ್ದು ಇದರ ನಿವಾರಣೆಗೆ ಸ್ಥಳೀಯವಾದ ಹೋರಾಟದ ಜೊತೆಗೆ ದೆಹಲಿ ಮಟ್ಟದಲ್ಲಿ ಹೋರಾಟ ನಡೆಸಬೇಕಾದ ಅನೀವಾರ್ಯತೆ ಇದೆ. ಲೋಕಸಭಾ ಸದಸ್ಯರು, ಶಾಸಕರು, ಹೋರಾಟ ಸಮಿತಿಯವರು ಜತೆಯಾಗಿ ನಡೆಸುವ ಪ್ರಯತ್ನದಲ್ಲಿ ನಾನು ಸಂಪೂರ್ಣವಾಗಿ ಸಹಕಾರ ನೀಡುವುದಾಗಿ ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ತಿಳಿಸಿದ್ದಾರೆ.

ಕುಂದಾಪುರ ಶಾಸ್ತ್ರಿ ಸರ್ಕಲ್‌ ಬಳಿಯಲ್ಲಿ ನಿರ್ಮಾಣವಾಗುತ್ತಿರುವ ಫ್ಲೈ ಓವರ್‌ನ ವಿಳಂಭ ಕಾಮಗಾರಿಯನ್ನು ವಿರೋಧಿಸಿ ಮಂಗಳವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ನೇತ್ರತ್ವದಲ್ಲಿ ನಡೆದ ಧರಣಿ ಹಾಗೂ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿ ಚತುಷ್ಫಥದ ಮೂಲ ಯೋಜನೆಯಲ್ಲಿ ಕುಂದಾಪುರದ ಶಾಸ್ತ್ರಿ ಸರ್ಕಲ್‌ ಬಳಿಯಲ್ಲಿ ರಸ್ತೆಗೆ ಎಂಬ್ಯಾಕ್‌ಮೆಂಟ್‌ ನಿರ್ಮಾಣ ಮಾಡಿ ಸಣ್ಣ ಪ್ರಮಾಣದ ಅಂಡರ್‌ ಪಾಸ್‌ ನಿರ್ಮಾಣ ಮಾಡುವ ಉದ್ದೇಶ ಇತ್ತು. ಸ್ಥಳೀಯರ ಒತ್ತಾಯದಂತೆ ಕೇಂದ್ರ ಸರ್ಕಾರದ ಗಮನ ಸೆಳೆದು ಫ್ಲೈ ಓವರ್‌ ನಿರ್ಮಾಣದ ಪ್ರಾಸ್ತಾವನೆಗೆ ಒಪ್ಪಿಗೆ ಪಡೆಯಲಾಗಿತ್ತು. 2016 ರಲ್ಲಿ ಬದಲಾದ ಪ್ರಾಸ್ತಾವಿತ ಯೋಜನೆಗೆ 22.24 ಕೋಟಿ ರೂ. ವೆಚ್ಚದಲ್ಲಿ ಮಂಜೂರಾತಿ ದೊರಕಿತ್ತು ಎಂದು ವಿವರಿಸಿದರು.

ಸಭೆಯಲ್ಲಿ ಮಾತನಾಡಿದ ಸಾಸ್ತಾನ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಪ್ರತಾಪ್‌ ಶೆಟ್ಟಿ, ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ನೀಡಿದ ಆದೇಶಕ್ಕೂ ಬೆಲೆ ಇಲ್ಲಾ. ಪ್ರಸ್ತುತ ನೀಡಿರುವ ವಾಯಿದೆಯೊಳಗೆ ಕಾಮಗಾರಿ ಮುಗಿಯದೆ ಇದ್ದಲ್ಲಿ ಟೋಲ್‌ ಬಂದ್‌ ಮಾಡುವ ಜಿಲ್ಲಾಡಳಿತದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಅವಕಾಶವಿದ್ದಲ್ಲಿ ಬಾಕಿ ಉಳಿದಿರುವ ಕಾಮಗಾರಿ ಮುಗಿಸಲು ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ಸಮಿತಿ ರಚನೆ ಮಾಡಿ ಅದರ ಅಡಿಯಲ್ಲಿ ಸ್ಥಳೀಯ ಗುತ್ತಿಗೆದಾರರು, ಜೆಸಿಬಿ, ಹಿತಾಚಿ ಮುಂತಾದ ಯಂತ್ರಗಳ ಮಾಲಕರ ಸಹಕಾರ ಪಡೆದು ಕಾಮಗಾರಿ ಮುಗಿಸಲು ನಿರ್ಧಾರ ಕೈಗೊಂಡಲ್ಲಿ 2 ತಿಂಗಳ ಒಳಗೆ ಕಾಮಗಾರಿ ಮುಗಿಸಲು ಹೋರಾಟ ಸಮಿತಿ ಸಹಕಾರ ನೀಡಲಿದೆ ಎಂದರು.

10.5 ಕಿ.ಮೀ ದೂರದಲ್ಲಿ 2 ಟೋಲ್‌ ಗೇಟ್‌!
ಧರಣಿ ನೇತ್ರತ್ವ ವಹಿಸಿದ್ದ ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಯೋಜನಾ ವೆಚ್ಚ ತಯಾರಿಸದೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ನಿಗದಿ ಮಾಡಿದ ಹಣಕ್ಕಿಂತ ಹೆಚ್ಚು ಹಣಗಳು ಯೋಜನೆಗೆ ಬಳಕೆಯಾದರೂ, ಪ್ರಶ್ನಿಸುವವರು ಇಲ್ಲ. ಜಿಲ್ಲೆಯಲ್ಲಿ ನಡೆಯುವ ಯಾವುದೆ ಸಭೆಗಳಿಗೂ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳನ್ನು ಕರೆಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಿಂದೆ ಜಿಲ್ಲಾಧಿಕಾರಿಗಳಾಗಿದ್ದವರು ತೆಗೆದುಕೊಂಡಿರುವ ನಿರ್ಧಾರಗಳು ಅವರು ವರ್ಗಾವಣೆಯಾಗುತ್ತಿದ್ದಂತೆ ಬದಲಾಗುತ್ತದೆ. ಕೇವಲ 10.5 ಕಿ.ಮೀ ದೂರದಲ್ಲಿ 2 ಟೋಲ್‌ ಗೇಟ್‌ ನಿರ್ಮಾಣವಾಗಿದ್ದರೂ, ನಮ್ಮ ಜನಪ್ರತಿನಿಧಿಗಳು ಮಾತನಾಡುತ್ತಿಲ್ಲ ಎಂದರು.

ಜನರ ಸಹನೆಯ ದುರುಪಯೋಗವಾಗುತ್ತಿದೆ: ಕಿಶೋರ್ ಕುಮಾರ್
ಹೋರಾಟ ಸಮಿತಿಯ ಕಿಶೋರಕುಮಾರ, ಹೆದ್ದಾರಿ ವಿಸ್ತರಣೆಯ ಮೂಲ ಯೋಜನೆಯಲ್ಲಿ ಬಸ್ರೂರು ಮೂರು ಕೈ ಬಳಿ ಎಂಬ್ಯಾಕ್‌ಮೆಂಟ್‌, ಟಿ.ಟಿ ರಸ್ತೆ ಬಳಿಯಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡುವ ಯೋಜನೆಗಳೇ ಇದ್ದಿರಲಿಲ್ಲ. ಗುತ್ತಿಗೆ ಕಂಪೆನಿಯ ಅನೂಕೂಲಕ್ಕಾಗಿ ಯೋಜನೆಗಳನ್ನು ಬದಲಾಯಿಸಲಾಗುತ್ತಿದೆ. ಜನರ ಸಹನೆಗಳೇ ಜನಪ್ರತಿನಿಧಿಗಳಿಗೆ ವರವಾಗುತ್ತಿದೆ. ಸಾರ್ವಜನಿಕ ಸಮಸ್ಯೆಗಳಿಗಾಗಿ ಹೋರಾಟ ನಡೆಸುವುದು ನಮ್ಮ ಹಕ್ಕು ಎನ್ನುವುದನ್ನು ಪ್ರತಿಪಾದನೆ ಮಾಡುವುದನ್ನೆ ಜನರು ಮರೆಯುತ್ತಿದ್ದಾರೆ ಎಂದರು.

ಕಾಮಗಾರಿ ಬಳಿಕ ಜೀವಹಾನಿ ಹೆಚ್ಚಿದೆ…
ವಕೀಲ ಗೋಪಾಲಕೃಷ್ಣ ಶೆಟ್ಟಿ ಶಿರಿಯಾರ ಮಾತನಾಡಿ, ಪ್ರಾಣ ಹಾನಿ ಹಾಗೂ ಸ್ವತ್ತು ಹಾನಿ ನಿಯಂತ್ರಣ ಮಾಡುವ ಉದ್ದೇಶಕ್ಕಾಗಿ ರೂಪಿಸಲಾದ ಚತುಷ್ಪಥ ಯೋಜನೆಯ ಮೂಲ ಉದ್ದೇಶಗಳೇ ಮರೆಯಾಗುತ್ತಿದೆ. ಸುಂಕ ಕೊಟ್ಟು ಸಂಕಷ್ಟ ಪಡೆದುಕೊಳ್ಳಲಾಗುತ್ತಿದೆ. ಹೆದ್ದಾರಿ ವಿಸ್ತರಣೆಯಾದ ಬಳಿಕ ಜೀವ ಹಾನಿ ಹಾಗೂ ಸ್ವತ್ತು ಹಾನಿ ಹೆಚ್ಚಾಗುತ್ತಿದೆ. ನಿಯಮಕ್ಕೆ ವಿರುದ್ಧವಾಗಿ ಬ್ಯಾರಿಕೇಡ್‌ಗಳನ್ನು ಹಾಕಲಾಗುತ್ತಿದೆ. ಹೆದ್ದಾರಿಯಲ್ಲಿ ಸಮರ್ಪಕವಾದ ದಾರಿದೀಪದ ವ್ಯವಸ್ಥೆ ಇಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸದ ಜನಪ್ರತಿನಿಧಿಗಳು ಇದ್ದರೆಷ್ಟು, ಬಿಟ್ಟರೆಷ್ಟು ಎಂದು ಖಾರವಾಗಿ ಹೇಳಿದರು.

ಸಿಪಿಎಂ ಪಕ್ಷದ ಹಿರಿಯ ಮುಖಂಡರಾದ ಎಚ್‌.ನರಸಿಂಹ, ವೆಂಕಟೇಶ ಕೋಣಿ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ, ಹಿರಿಯ ವಕೀಲ ಎ.ಎಸ್‌.ಎನ್‌ ಹೆಬ್ಬಾರ್‌, ಸಾಸ್ತಾನ ಹೆದ್ದಾರಿ ಹೋರಾಟ ಸಮಿತಿಯ ಶ್ಯಾಮ್‌ಸುಂದರ್‌ ಎನ್‌ ಮಾತನಾಡಿದರು.

ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ಕೆ.ರಾಜು ಅವರು ಪ್ರತಿಭಟನಾಕಾರರ ಅಹವಾಲುಗಳನ್ನು ಆಲಿಸಿದ ಬಳಿಕ ಹೆದ್ದಾರಿ ಇಲಾಖೆ ಹಾಗೂ ಗುತ್ತಿಗೆ ಕಂಪೆನಿ ಅಧಿಕಾರಿಗಳಲ್ಲಿ ಯೋಜನೆಯನ್ನು ಯಾವಾಗ ಮುಗಿಸುತ್ತೀರಿ ಎನ್ನುವ ಸ್ವಷ್ಟ ಭರವಸೆ ನೀಡುವಂತೆ ಸೂಚಿಸಿದರು. ಪ್ರತಿಕ್ರಿಯೆ ನೀಡಿದ ನವಯುಗ ಅಧಿಕಾರಿಗಳು ಮಾ.31 ರ ಒಳಗೆ ಮುಗಿಸುವ ಭರವಸೆ ನೀಡಿದರು.

ವಾಯಿದೆಯೊಳಗೆ ಆಗದಿದ್ದರೆ ಟೋಲ್ ಬಂದ್!
ನಿಗದಿತ ದಿನಾಂಕದ ಒಳಗೆ ಕಾಮಗಾರಿ ಪೂರ್ಣಗೊಳ್ಳದೆ ಹೋದಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಮಾ.31 ರಿಂದ ಟೋಲ್‌ ಸಂಗ್ರಹ ಬಂದ್‌ ಮಾಡಲಾಗುತ್ತದೆ. ಎ.ಸಿ ಕೋರ್ಟ್‌ನಲ್ಲಿ 133 ಕಾನೂನು ಅಡಿಯಲ್ಲಿ ದಾಖಲಾದ ಪ್ರಕರಣದ ವಿಚಾರಣೆಯನ್ನು ಮುಂದುವರೆಸಲಾಗುತ್ತದೆ. ತಪ್ಪಿತಸ್ಥರು ಎಂದು ಕಂಡು ಬಂದಲ್ಲಿ ಸಂಬಂಧಿತರ ವಿರುದ್ದ ಕಾನೂನು ಕ್ರಮ ಜರುಗಿಸುವುದಾಗಿ ಉಪವಿಭಾಗಾಧಿಕಾರಿ ಹೇಳಿದರು.

‘ಶೋ ಮಾಡಬೇಡಿ’- ಕೂಗಾಡಿದವರಿಗೆ ಜೆ.ಪಿ ಹೆಗ್ಡೆ ಗರಂ!
ಸಭೆಯಲ್ಲಿ ಭಾಗವಹಿಸಿದ ಗುತ್ತಿಗೆ ಕಂಪನಿ ಹಾಗೂ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಜನರು ಸ್ವಷ್ಟ ನಿರ್ಧಾರ ಪ್ರಕಟಿಸುವವರೆಗೂ ತೆರಳಲು ಬಿಡುವುದಿಲ್ಲ ಎಂದರು. ಅಲ್ಲದೇ ರಸ್ತೆ ತಡೆ ಮಾಡೋಣ ಎಂದು ಕೆಲವರು ಆಕ್ರೋಷ ವ್ಯಕ್ತಪಡಿಸಿದರು. ಶಾಸಕ ಹಾಗೂ ಸಂಸದರ ವಿರುದ್ಧವೂ ಕೆಲವರು ದಿಕ್ಕಾರ ಕೂಗಿದ ಘಟನೆಯೂ ನಡೆಯಿತು. ಈ ವೇಳೆ ಮಧ್ಯ ಪ್ರವೇಶಿಸಿದ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿ ಶೋ ಮಾಡುವುದು ಸರಿಯಲ್ಲ ಎಂದು ಅಸಹನೆ ವ್ಯಕ್ತಪಡಿಸಿ ವೇದಿಕೆಯಿಂದ ತನ್ನ ಕಾರಿನತ್ತ ತೆರಳಿದರು. ಬಳಿಕ ಕೆಲವರು ಅವರನ್ನು ಮನವೊಲಿಸಿ ಮತ್ತೆ ವೇದಿಕೆಯತ್ತ ಕರೆತಂದರು.

ಹೆದ್ದಾರಿ ತಡೆಗೆ ಯತ್ನ-ತಡೆದ ಪೊಲೀಸರು
ಸಭೆಯ ಕೊನೆಯ ಹಂತದ ವೇಳೆಯಲ್ಲಿ ಅಧಿಕಾರಿಗಳು ನೀಡಿದ ಭರವಸೆಗಳಿಗೆ ತೃಪ್ತರಾಗದ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ 66 ರನ್ನು ತಡೆದು ಪ್ರತಿಭಟನೆ ನಡೆಸಲು ಮುಂದಾದದರು. ಸರ್ಕಲ್‌ ಇನ್ಸ್‌ಪೆಕ್ಟರ್‌ ಮಂಜಪ್ಪ ಡಿ.ಆರ್‌ ಹಾಗೂ ಎಸ್‌.ಐ ಹರೀಶ್‌ ನಾಯ್ಕ್‌ ಪ್ರತಿಭಟನಕಾರರು ರಸ್ತೆ ತಡೆಯಲು ಸುತರಾಂ ಅವಕಾಶ ನೀಡಲ್ಲ ಎಂದು ತಾಕೀತು ಮಾಡಿದ್ದು ಹೆದ್ದಾರಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.

ಸೋಮಶೇಖರ ಶೆಟ್ಟಿ ಕೆಂಚನೂರು, ಬಿ.ಕಿಶೋರಕುಮಾರ, ರಾಜೇಶ್‌ ಕಾವೇರಿ, ಶಶಿಧರ ಹೆಮ್ಮಾಡಿ, ನಿತ್ಯಾನಂದ ಶೆಟ್ಟಿ ಅಂಪಾರು, ಗಣೇಶ್‌ ಮೆಂಡನ್‌ ಎಲ್‌ಐಸಿ ರಸ್ತೆ, ನ್ಯಾಯವಾದಿಗಳಾದ ಗೋಪಾಲಕೃಷ್ಣ ಶೆಟ್ಟಿ ಶಿರಿಯಾರ, ಮಲ್ಯಾಡಿ ಜಯರಾಮ್‌ ಶೆಟ್ಟಿ, ಕೆ.ಸಿ.ಶೆಟ್ಟಿ ವಿನೋದ ಕ್ರಾಸ್ತಾ, ಚಂದ್ರಶೇಖರ ಶೆಟ್ಟಿ, ಪುರಸಭೆಗೆ ಆಯ್ಕೆಯಾದ ದೇವಕಿ ಪಿ ಸಣ್ಣಯ್ಯ, ಚಂದ್ರಶೇಖರ ಖಾರ್ವಿ, ಜಿ.ಕೆ.ಗಿರೀಶ್‌, ಅಬ್ಬು ಮಹಮ್ಮದ್‌, ಪ್ರಭಾವತಿ ಶೆಟ್ಟಿ, ಶ್ರೀಧರ ಗೋಲ್ಡ್‌ನ್‌ ಮಿಲ್ಲರ್‌, ಚಿತ್ತೂರು ಪ್ರಕಾಶ್ಚಂದ್ರ ಶೆಟ್ಟಿ, ವಿಠ್ಠಲ್‌ ಪೂಜಾರಿ ಸಾಸ್ತಾನ, ಪ್ರಶಾಂತ ಶೆಟ್ಟಿ ಸಾಸ್ತಾನ, ರಾಜೇಶ್‌ ಕೆ.ವಿ ಪಾಂಡೇಶ್ವರ, ಟ್ರೋಲ್‌ ಕುಂದಾಪುರ ಕುಡಿ ಸಾಮಾಜಿಕ ಜಾಲ ತಾಣದ ವೈಭವ್‌, ಶಾಶ್ವತ್‌ ಶೆಟ್ಟಿ, ಅನಿಲ್‌ ಇದ್ದರು.

Comments are closed.