ಕರಾವಳಿ

ಸುರತ್ಕಲ್ ಜಂಕ್ಷನ್ ಬಳಿ ಯುವಕನ ಬರ್ಬರ ಹತ್ಯೆ : ಮೂವರ ಬಂಧನ

Pinterest LinkedIn Tumblr

ಮಂಗಳೂರು, ನವೆಂಬರ್.30: ಸುರತ್ಕಲ್ ಜಂಕ್ಷನ್ ಸಮೀಪದ ವೈನ್‌ಶಾಪ್ ಬಳಿ ಶುಕ್ರವಾರ ತಡರಾತ್ರಿ ತಂಡವೊಂದು ಯುವಕನನ್ನು ಮಾರಕಾಯುಧದಿಂದ ಕಡಿದು ಹತ್ಯೆಗೈದ ಘಟನೆ ನಡೆದಿದೆ.

ಹತ್ಯೆಗೀಡಾದ ವ್ಯಕ್ತಿಯನ್ನು ಸುರತ್ಕಲ್ ಗುಡ್ಡೆಕೊಪ್ಲ ನಿವಾಸಿ ಸಂದೇಶ್ (30) ಎಂದು ಹೆಸರಿಸಲಾಗಿದೆ.

ಸಂದೇಶ್ ನಿನ್ನೆ ರಾತ್ರಿ 11 ಗಂಟೆಗೆ ಸುರತ್ಕಲ್ ಜಂಕ್ಷನ್ ಸಮೀಪದ ಜೀವನ್ ತಾರಾ ವೈನ್ಸ್ ಹಿಂಭಾಗದ ಬಾರ್ ನಲ್ಲಿ ಸ್ನೇಹಿತರ ಜೊತೆ ಕುಳಿತಿದ್ದು ಈ ವೇಳೆ ಸಂದೇಶ್ ಪರಿಚಿತರೇ ಆಗಿರುವ ಸ್ಥಳೀಯ ಯುವಕರ ತಂಡ ಜಗಳಕ್ಕೆ ಮುಂದಾಗಿದೆ. ನಂತರ ಜಗಳ ದೊಡ್ಡದಾಗಿದ್ದು ತಂಡವು ಮಾರಕಾಯುಧದಿಂದ ದಾಳಿ ನಡೆಸಿ ಹತ್ಯೆಗೈದು ಪರಾರಿಯಾಗಿದೆ ಎಂದು ತಿಳಿದು ಬಂದಿದೆ.

ಸಂದೇಶ್ ಶಬರಿಮಲೆ ಮಾಲೆ ಧರಿಸಿದ್ದು ನಿನ್ನೆ ಮಧ್ಯಾಹ್ನ ಮಾಲೆ ತೆಗೆದಿದ್ದರು ಎನ್ನಲಾಗಿದೆ. ಈ ಹಿಂದೆ ಸಂಘಟನೆಯಲ್ಲಿ ಜೊತೆಯಾಗಿದ್ದ ಸ್ನೇಹಿತರೇ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿಗಳಾದ ರಾಜ ಯಾನೆ ರಾಘವೇಂದ್ರ, ಗಣೇಶ್, ಸುಹೈಲ್‌ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಗೆಳೆಯರ ನಡುವೆ ಇದ್ದ ಭಿನ್ನಾಭಿಪ್ರಾಯ ಈ ಹತ್ಯೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ನಾರಾಯಣ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಸುರತ್ಕಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Comments are closed.