ಕರಾವಳಿ

ಪಾಲಿಕೆಯಲ್ಲಿ ಕಾಂಗ್ರೇಸ್ ಆಡಳಿತವಿರುವಾಗ ನೀರಿನ ದರ ಏರಿಕೆ : ಶಾಸಕ ಕಾಮಾತ್ ಆರೋಪ

Pinterest LinkedIn Tumblr

ಮಂಗಳೂರು ಮಹಾನಗರ ಪಾಲಿಕೆಯ ಕುಡಿಯುವ ನೀರಿನ ದರ ಏರಿಸುವ ಮೂಲಕ ಕಾಂಗ್ರೇಸ್ ಆಡಳಿತವು ಜನರನ್ನು ಲೂಟಿ ಮಾಡಿದೆ ಎಂದು ಮಂಗಳೂರು ದಕ್ಷಿಣ ಶಾಸಕ ಡಿ ವೇದವ್ಯಾಸ್‌ ಕಾಮತ್ ಆರೋಪಿಸಿದ್ದಾರೆ.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೇಸ್ ಆಡಳಿತವಿರುವಾಗ ಮಹಾನಗರ ಪಾಲಿಕೆಯ ಕುಡಿಯುವ ನೀರಿನ ದರವನ್ನು ಏಕಾಏಕಿ ಏರಿಸುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹೊರೆಯಾಗಿದೆ. ಕಳೆದ ಐದು ವರ್ಷಗಳಿಂದ ಮಂಗಳೂರು ಮಹಾನಗರ ಪಾಲಿಕೆಯು ಕುಡಿಯುವ ನೀರಿನ ಬಿಲ್ಲುಗಳನ್ನು ಜಾರಿಗೊಳಿಸುವಲ್ಲಿ ಹಾಗೂ ದರ ವಸೂಲಾತಿಯಲ್ಲಿ ವೈಫಲ್ಯ ಕಂಡಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ ಎಂದು ದೂರಿದರು.

ಈ ಹಿಂದೆ ಆಡಳಿತ ಮಾಡಿದ ಮೇಯರ್‌ಗಳು ಕೂಡ ನೀರಿನ ಲಕ್ಷಗಟ್ಟಲೆ ಬಿಲ್ ಬಾಕಿಯಿರುವಂತಹ ವ್ಯಕ್ತಿ ಪಟ್ಟಿಯನ್ನು ಬಹಿರಂಗ ಪಡಿಸಿರುವುದು ನಮಗೆಲ್ಲರಿಗೂ ತಿಳಿದ ವಿಚಾರವಾಗಿ ಈ ಎಲ್ಲಾ ವೈಫಲ್ಯಗಳ ನಡುವೆ ಕಾಂಗೇಸ್ ಪಕ್ಷವು ನಗರ ಪಾಲಿಕೆಯಲ್ಲಿ ಆಡಳಿತಾಧಿಕಾರಿಯ ಅವಧಿಯಲ್ಲಿ (ಜೂನ್ ತಿಂಗಳಲ್ಲಿ) ಏಕಾಎಕಿಯಾಗಿ ನೀರಿನ ದರವನ್ನು 3 ರಿಂದ 4 ಪಟ್ಟು ಏರಿಸುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ತೊಂದರೆಯನ್ನುಂಟು ಮಾಡಿದೆ.

ರಾಜ್ಯದಲ್ಲಿ ಕಾಂಗ್ರೇಸ್ ಮತ್ತು ಜೆ.ಡಿ.ಎಸ್ ಸಮ್ಮಿಶ್ರ ಸರಕಾರ ಆಡಳಿತ ಇದ್ದ ಸಂದರ್ಭದಲ್ಲಿ, ಯು.ಟಿ.ಖಾದರ್ ರವರು ಜಿಲ್ಲಾ ಉಸ್ತುವಾರಿ ಆಗಿದ್ದ ಸಂದರ್ಭದಲ್ಲಿ ನೀರಿನ ದರ ಏರಿಸುವ ಮೂಲಕ ಜನ ವಿರೋಧಿ ನಿಲುವನ್ನು ತೋರಿಸಿದೆ. ಕಾಂಗ್ರೇಸ್ ಪಕ್ಷವು ನೀರಿನ ದರ ಏರಿಕೆ ಮಾಡಿ ನೀರು ಸರಬರಾಜನ್ನು ಸಮರ್ಪಕವಾಗಿ ಮಾಡದೆ ಜನರು ಪರದಾಡುವಂತೆ ಮಾಡಿದೆ. ಏರಿಕೆ ಮಾಡಿರುವ ದರವು ತೀರ ಅವೈಜ್ಞಾನಿಕವಾಗಿದೆ.ಯಾಕೆಂದರೆ ಈ ಹಿಂದೆ ಗೃಹ ಬಳಕೆಗೆ ತಿಂಗಳೊಂದಕ್ಕೆ ಕನಿಷ್ಠ 24000 ನೀರಿನ ಉಪಯೋಗಕ್ಕೆ ಅವಕಾಶವಿತ್ತು. ಇದನ್ನು ಏಕಾಏಕಿ 8000 ಕ್ಕೆ ಸೀಮಿತಗೋಳಿಸಿರುವುದು ಖಂಡನೀಯ. ಇದರ ನಡುವೆ ಕಾಂಗ್ರೇಸ್ ಆಡಳಿತ ವೈಫಲ್ಯಗಳನ್ನು ಬಿಜೆಪಿ ಜನಪ್ರತಿನಿಧಿಗಳ ಮೇಲೆ ಹೇರಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

5 ವರುಷ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಸಂದರ್ಭದಲ್ಲಿ ನೀರು ಪೂರೈಕೆ ಸುವ್ಯವಸ್ಥಿತವಾಗಿ ನಡೆಯುತ್ತಿತ್ತು. ಆದರೆ ಕಾಂಗ್ರೇಸ್ ಆಡಳಿತ ಅವಧಿಯಲ್ಲಿ ಮಳೆಗಾಲದ ಸಂದರ್ಭದಲ್ಲೂ ಸಮರ್ಪಕವಾಗಿ ನೀರು ಪೂರೈಸಲು ಕಾಂಗ್ರೇಸ್ ಆಡಳಿತ ವೈಫಲ್ಯ ಕಂಡಿದೆ ಎಂದು ಶಾಸಕರು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿಯ ಪದಾಧಿಕಾರಿಗಳಾದ ಭಾಸ್ಕರಚಂದ್ರ ಶೆಟ್ಟಿ , ರಾಜಗೋಪಾಲ್ ರೈ, ರವೀಂದ್ರ ಮುಂತಾದವರು ಉಪಸ್ಥಿತರಿದ್ದರು.

Comments are closed.