ಉಡುಪಿ: ಅರಬ್ಬಿಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಚಂಡಮಾರುತದಿಂದ ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆ ಸುರಿಯುತಿದ್ದು, ಗಾಳಿ-ಮಳೆಯಿಂದಾಗಿ ಇಬ್ಬರು ಬಲಿಯಾಗಿದ ಘಟನೆ ವರದಿಯಾಗಿದೆ.
ಕಾಪು ತಾಲೂಕಿನ ಕುರ್ಕಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಜಾರುಗಿರಿಯ ಚಂದ್ರಶೇಖರ ಎಂಬವರ ಪತ್ನಿ ಸುಲೋಚನಾ(42) ನಿನ್ನೆ ಸಂಜೆ ವೇಳೆ ಶಂಖತೀರ್ಥ ಎಂಬಲ್ಲಿ ತುಂಬಿದ ತೋಡೊಂದನ್ನು ದಾಟುವಾಗ ಅಕಸ್ಮಿಕವಾಗಿ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಹುಲ್ಲು ತರಲೆಂದು ಗದ್ದೆಗೆ ತೆರಳಿದ್ದ ಅವರು ವಾಪಾಸ್ ಹಿಂದಿರುಗದೇ ಇದ್ದಾಗ ಮನೆಯವರು ಹುಡುಕಾಡಿದಾಗ ರಾತ್ರಿ 8:00 ಗಂಟೆ ಸುಮಾರಿಗೆ ಸ್ವಲ್ಪವೇ ದೂರದಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಹುಲ್ಲು ಕೊಯ್ದು ಮನೆಗೆ ಹಿಂದಿರುಗುವ ಮಾರ್ಗದಲ್ಲಿ ತೋಡು ದಾಟುವಾಗ ಅವರು ಕಾಲು ಜಾರಿ ನೀರಿನಲ್ಲಿ ಮುಳುಗಿರಬೇಕೆಂದು ಶಂಕಿಸಲಾಗಿದೆ.
ಇದೇ ವೇಳೆ ಉಡುಪಿ ತಾಲೂಕು ಕುಕ್ಕೆಹಳ್ಳಿ ಗ್ರಾಪಂ ವ್ಯಾಪ್ತಿಯ ಸಾಂತಜೆಡ್ಡು ಎಂಬಲ್ಲಿ ರಾತ್ರಿ 9ಗಂಟೆಯ ಸುಮಾರಿಗೆ ಮರವೊಂದು ಮನೆಯ ಮೇಲೆ ಉರುಳಿ ಬಿದ್ದಿದ್ದು, ಆ ಮನೆಯಲ್ಲಿದ್ದ ಕುಕ್ಕೆಹಳ್ಳಿಯ ರಿಕ್ಷಾ ಚಾಲಕ ರವೀಂದ್ರ ಕುಲಾಲ್ (38) ಎಂಬವರು ಅದರಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದುಬಂದಿದೆ. ರವೀಂದ್ರ ಕುಲಾಲ್ ಅವರು ಮನೆಗೆ ಹಿಂದಿರುಗುವ ವೇಳೆ ಧಾರಾಕಾರ ಮಳೆ ಸುರಿದುದರಿಂದ ಗಾಳಿ-ಮಳೆಗೆ ಮಾರ್ಗ ಸರಿಯಾಗಿ ಕಾಣಿಸದ ಕಾರಣ ರಿಕ್ಷಾವನ್ನು ನಿಲ್ಲಿಸಿ ಪರಿಚಯದ ದಿವಾಕರ ಶೆಟ್ಟಿ ಎಂಬವರ ಮನೆಯ ಸಿಟೌಟ್ನಲ್ಲಿ ನಿಂತಿದ್ದಾಗ ಪಕ್ಕದಲ್ಲಿದ್ದ ಮರವೊಂದು ಮನೆಯ ಮೇಲೆ ಉರುಳಿದೆ. ಆ ಸಂದರ್ಭ ಅದರ ಗೆಲ್ಲೊಂದು ರವೀಂದ್ರ ಅವರಿಗೆ ಬಡಿದು ಅದು ಮೃತ ಪಟ್ಟಿದ್ದಾರೆ.
ಮಳೆಗೆ 1.20 ಲಕ್ಷ ಹಾನಿ
ಕುಂದಾಪುರ : ಕಳೆದ ಮೂರು ದಿನದಿಂದ ತಾಲೂಕುನಾದ್ಯಂತ ಸುರಿಯುತ್ತಿರುವ ಮಳೆಗೆ ೧.೨೦ ಲಕ್ಷ ರೂ.ನಷ್ಟ ಸಂಭವಿಸಿದೆ. ನಾಡಾ ಚಿಕ್ಕಳ್ಳಿ ಸಾಲ್ಬುಡದಲ್ಲಿ ನೆರೆ ಪರೀಸ್ಥಿತಿ ಹಾಗೆ ಮುಂದುವರಿದಿದ್ದು, ತೆನೆ ಬೀಸಿದ ಗದ್ದೆಯಲ್ಲಿ ಭತ್ತ ಗಾಳಿ ಮಳೆಗೆ ಮಲಗಿದ್ದು, ಭತ್ತದ ಫಸಲು ನೀರಿನಲ್ಲಿ ಕೊಚ್ಚಿ ಹೋಗುವ ಅಪಾಯವಿದೆ. ಶುಕ್ರವಾರ ಒಂದು ಮಳೆ ಒಂದು ಬಿಸಲಿನ ಕಣ್ಣಾಮುಚ್ಚಾಲೆ ಆಡುತ್ತಿದ್ದು, ಕಡಲ ಅಬ್ಬರ ಕೂಡಾ ಹೆಚ್ಚಿದೆ. ತ್ರಾಸಿ ಮರವಂತೆ ಬೀಚ್ನಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದು, ತೆರಗಳು ರಸ್ತೆವರೆಗೆ ಬರುತ್ತಿದೆ. ಗುಜ್ಜಾಡಿ ಗ್ರಾಮದ ನಾಲ್ಕು ಮನೆಗಳ ಮೇಲೆ ಮರಬಿದ್ದು ಒಟ್ಟು 1.20 ಲಕ್ಷ ರೂ.ನಷ್ಟ ಸಂಭಿಸಿದೆ. ವಿಮಲಾ ಶೆಡ್ತಿ, ಗುಲಾಬಿ ಶೆಡ್ತಿ, ಸಾಧು ಶೆಡ್ತಿ ಹಾಗೂ ಮನೆ ಮೇಲೆ ಮರಬಿದ್ದು ತಲಾ 40 ಸಾವಿರ ನಷ್ಟ ಸಂಭವಿಸಿದೆ.
Comments are closed.