ಲಕ್ನೋ: ಪತಿ, ಮೂವರು ಮಕ್ಕಳನ್ನು ಬಿಟ್ಟು ಮಹಿಳೆಯೊಬ್ಬಳು ಫೇಸ್ಬುಕ್ ಸ್ನೇಹಿತನ ಬಳಿ ಓಡಿ ಹೋದ ಘಟನೆ ಉತ್ತರ ಪ್ರದೇಶದ ಲಕ್ನೋನ ಬಂಥಾರಾದಲ್ಲಿ ನಡೆದಿದೆ.
ಮೋಸಿನಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮುಂಬೈ ನಿವಾಸಿಯಾಗಿರುವ ಮೋಸಿನಾ ನಾಲ್ಕು ತಿಂಗಳ ಹಿಂದೆ ತನ್ನ ಮೂವರು ಮಕ್ಕಳನ್ನು ಹಾಗೂ ಪತಿಯನ್ನು ಬಿಟ್ಟು ಲಕ್ನೋಗೆ ಹೋಗಿದ್ದಳು. ಅಲ್ಲಿ ಆಕೆ ತನ್ನ ಫೇಸ್ಬುಕ್ ಸ್ನೇಹಿತ ಮಹೇಂದ್ರ ಜೊತೆ ವಾಸಿಸುತ್ತಿದ್ದಳು.
ಮೋಸಿನಾ ನಾಪತ್ತೆಯಾದಾಗ ಆಕೆಯ ಪತಿ ಮುಂಬೈನ ಪವಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಲಕ್ನೋಗೆ ತಲುಪಿದ ನಂತರ ಮೋಸಿನಾ ತನ್ನ ಹೆಸರನ್ನು ಖುಷಿ ಗುಪ್ತಾ ಎಂದು ಬದಲಾಯಿಸಿಕೊಂಡಿದ್ದಳು. ಅಲ್ಲದೆ ಹಿಂದೂ ಪದ್ಧತಿಗಳ ಪ್ರಕಾರ ಮೋಸಿನಾ ಲಕ್ನೋನಲ್ಲಿ ವಾಸಿಸುತ್ತಿದ್ದಳು.
ಖುಷಿಯಾಗಿ ಬದಲಾದ ನಂತರ ಮೋಸಿನಾ ಹಣೆಗೆ ಸಿಂಧೂರ, ತಾಳಿಯನ್ನು ಧರಿಸುತ್ತಿದ್ದಳು. ಮಹೇಂದ್ರ, ಮೋಸಿನಾಳಿಗಾಗಿ ಬಂಥಾರದಲ್ಲಿ ಮನೆ ಮಾಡಿದ್ದನು. ಮಹೇಂದ್ರಗೆ ಈಗಾಗಲೇ ಮದುವೆಯಾಗಿದ್ದು, ವಾರಕ್ಕೆ ಎರಡು ದಿನ ಆತ ಮೋಸಿನಾ ಇದ್ದ ಮನೆಗೆ ಬರುತ್ತಿದ್ದನು.
ಅಕ್ಟೋಬರ್ 17ರಂದು ಮೋಸಿನಾ, ಮಹೇಂದ್ರನಿಗಾಗಿ ಕರ್ವಾ ಚೌತ್ ವ್ರತ ಮಾಡಿದ್ದಳು. ಆದರೆ ಆ ದಿನ ಮಹೇಂದ್ರ ಮನೆಗೆ ಬರದ ಕಾರಣ ಮರುದಿನ ಮೋಸಿನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೋಸಿನಾ ಮೃತದೇಹವನ್ನು ಕಂಡ ಮಹೇಂದ್ರ ಆಕೆಯ ಗುರುತನ್ನು ಅಳಿಸಲು ಆಕೆಯ ಮುಖಕ್ಕೆ ಆ್ಯಸಿಡ್ ಎರಚಿದ್ದನು.
ಮೋಸಿನಾ ಮುಖಕ್ಕೆ ಆ್ಯಸಿಡ್ ಎರಚಿದ ಬಳಿಕ ಮಹೇಂದ್ರ ಆಕೆಯ ಮೃತದೇಹವನ್ನು ರಸ್ತೆಯಲ್ಲಿ ಎಸೆದು ಪರಾರಿಯಾಗಿದ್ದನು. ಮೃತದೇಹ ಪತ್ತೆಯಾಗಿರುವ ವಿಷಯವನ್ನು ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ಮೋಸಿನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಯಿತು.
Comments are closed.