ಕರಾವಳಿ

ಮಂಗಳೂರಿನ ಕದ್ರಿಯಿಂದ ಬೃಹತ್ ಟ್ರಕ್ ಮೂಲಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಾಗಿದ ಬ್ರಹ್ಮರಥ

Pinterest LinkedIn Tumblr

ಮಂಗಳೂರು, ಅಕ್ಟೋಬರ್.01 : ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನಾಗರಾಧಾನ ಕೇಂದ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬೆಂಗಳೂರಿನ ಉದ್ಯಮಿಗಳಾದ ಎನ್.ಮುತ್ತಪ್ಪ ರೈ ದೇರ್ಲ ಮತ್ತು ಅಜಿತ್ ಶೆಟ್ಟಿ ಕಡಬ ಇವರು ಅರ್ಪಣೆ ಮಾಡಲಿರುವ ನೂತನ ಬ್ರಹ್ಮರಥ ಕ್ಕೆ ಮಂಗಳವಾರ ಕದ್ರಿಯಿಂದ ಚಾಲನೆ ನೀಡಲಾಯಿತು.

ಸೋಮವಾರ ಕೋಟೇಶ್ವರದಿಂದ ಹೊರಟಿದ್ದ ಬ್ರಹ್ಮರಥ ಹೊತ್ತ ಬೃಹತ್ ಟ್ರಕ್ ಉಡುಪಿ ಮೂಲ್ಕಿ ಮಾರ್ಗವಾಗಿ ಆಗಮಿಸಿ ರಾತ್ರಿ ಮಂಗಳೂರು ತಲುಪಿ ಕದ್ರಿಯಲ್ಲಿ ತಂಗಿತ್ತು. ಇಂದು ಬೆಳಗ್ಗೆ ಹಾಲಿ ಶಾಸಕರು ಮಾಜಿ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಹಲವಾರು ಗಣ್ಯರ ಉಪಸ್ಥಿತಿಯಲ್ಲಿ ನಗರದ ಕದ್ರಿ ಪಾರ್ಕ್ ಮುಂಭಾಗದಿಂದ ಬ್ರಹ್ಮರಥವನ್ನು ಕೊಂಡೊಯ್ಯುವ ಟ್ರಕ್ ಸುಬ್ರಹ್ಮಣ್ಯಕ್ಕೆ ಪ್ರಯಾಣಿಸಿತು. ಕದ್ರಿಯಿಂದ ಕಡಬದ ವರೆಗೆ ಬ್ರಹ್ಮರಥ ಸಾಗಿ ಕಡಬದಲ್ಲಿ ಇಂದು ತಂಗಲಿದೆ. ಮರುದಿನ ಕಡಬದಿಂದ ವಾಹನ ಜಾಥಾ ಮೆರವಣಿಗೆ ಮೂಲಕ ಸಂಜೆ 4ಕ್ಕೆ ಬ್ರಹ್ಮರಥ ಸುಬ್ರಹ್ಮಣ್ಯಕ್ಕೆ ತಲುಪಲಿದೆ.

ಈ ವೇಳೆ ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಹರೀಶ್ ಕುಮಾರ್, ಮಾಜಿ ಶಾಸಕ ಜೆ.ಆರ್.ಲೋಬೊ, ಕದ್ರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎ.ಜೆ.ಶೆಟ್ಟಿ, ಮಾಜಿ ಮೇಯರ್ ಭಾಸ್ಕರ ಮೊಯ್ಲಿ, ಸುದೀರ್ ಶೆಟ್ಟಿ ಕಣ್ಣೂರು, ರಾಕೇಶ್ ಮಲ್ಲಿ, ಕಾಂಗ್ರೆಸ್ ಮುಖಂಡರಾದ ಟಿ.ಕೆ.ಸುಧೀರ್, ರಮಾನಂದ ಬೋಳಾರ್, ಅಶೋಕ್ ಕುಮಾರ್ .ಡಿ.ಕೆ, ವಿಶ್ವಾಸ್ ಕುಮಾರ್ ದಾಸ್, ಕಳ್ಳಿಗೆ ತಾರಾನಾಥ ಶೆಟ್ಟಿ, ಸಂಜೀವ ಮಡಿವಾಳ್, ಉದ್ಯಮಿಗಳಾದ ರಾಜಗೋಪಾಲ್ ರೈ, ಪುಷ್ಪರಾಜ ಜೈನ್, ಸುಬ್ರಹ್ಮಣ್ಯ ದೇವಸ್ಥಾನ ದ ಆಡಳಿತ ಮಂಡಳಿ ಅದ್ಯಕ್ಷ ನಿತ್ಯಾನಂದ ಮುಂಡೋಡಿ, ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.

ಎರಡುವರೆ ಕೋಟಿ ವೆಚ್ಚದಲ್ಲಿ ಬ್ರಹ್ಮರಥ ನಿರ್ಮಾಣ :

ಚಂಪ ಷ್ಠಷ್ಠಿ ಸಮಯದಲ್ಲಿ ಶ್ರದ್ಧಾ ಭಕ್ತಿಂಯಿದ ಎಳೆಯಲಾಗುವ ಬ್ರಹ್ಮರಥ ಶಿಥಿಲಾವಾಸ್ಥೆಗೆ ತಲುಪಿತ್ತು. ಹಾಗಾಗಿ ದೇವಳದ ವತಿಯಿಂದ ಪ್ರಶ್ನೆ ಚಿಂತನೆ ಮಾಡಿದ ಸಂದರ್ಭ ಈ ವಿಚಾರ ತಿಳಿದ ಬಳಿಕ ನೂತನ ರಥಕ್ಕೆ ಮೂಹರ್ತ ಮಾಡಲಾಗಿತ್ತು. ಬೆಂಗಳೂರು ಬಿಡದಿ ರಿಯಾಲಿಟಿ ವೆಂಚರ್ ಪೋರ್ ಗ್ರೂಪ್ ಸಂಸ್ಥೆಯ ಮುಖ್ಯಸ್ಥ ಉದ್ಯಮಿ ಮುತ್ತಪ್ಪ ರೈ ಹಾಗೂ ಪಾಲುದಾರ ಅಜಿತ್ ಶೆಟ್ಟಿ ಇವರ ಸಹಕಾರದೊಂದಿಗೆ ಅಂದಾಜು ಎರಡುವರೆ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ನೂತನ ಬ್ರಹ್ಮರಥವನ್ನು ದೇವಳಕ್ಕೆ ದಾನ ರೂಪದಲ್ಲಿ ನೀಡಲಾಗಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ 400 ವರ್ಷಗಳ ಇತಿಹಾಸ ಹೊಂದಿದ ಹಳೆ ಬ್ರಹ್ಮರಥದ ಮಾದರಿಯನ್ನಾಗಿಟ್ಟುಕೊಂಡು ಇದೀಗ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕೋಟೇಶ್ವರ ಸಮೀಪದ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯ ರಾಷ್ಟ್ರಪ್ರಶಸ್ತಿ ವಿಜೇತ ಶಿಲ್ಪಗುರು ಲಕ್ಷ್ಮೀನಾರಾಯಣ ಆಚಾರ್ಯ ಇವರ ನೇತೃತ್ವದಲ್ಲಿ ನಿರ್ಮಾಣಗೊಂಡಿದೆ.

ಶಿಲ್ಪಶಾಸ್ತ್ರದ ಪ್ರಕಾರ ಸ್ಕಂದ್ಯ ರಥದ ಮಾದರಿಯಲ್ಲೇ ರಥವನ್ನು ತಯಾರಿಸಲಾಗಿದೆ. ಹಳೆಯ ರಥದ ಆಯ ಮತು ಅಳತೆಗೆ ಸಮವಾಗಿ ಪ್ರಾಚೀನ ಶಿಲ್ಪ ಕಲೆಗೆ ದಕ್ಕೆ ಬರದಂತೆ ನೆಲದಿಂದ ಜಿಡೆಯವರೆಗೆ 17 ಅಡಿ ಎತ್ತರ ಮತ್ತು 17 ಅಡಿ ಅಗಲವಾಗಿ ಒಟ್ಟು ರಥ ಕಲಶದ ತುದಿಯವರೆಗೆ 63 ಅಡಿ ಎತ್ತರ ಹೊಂದಿದೆ.

ಈ ರಥದಲ್ಲಿ ಒಟ್ಟು 6 ಚಕ್ರಗಳಿದ್ದು 8.5 ಅಡಿ ಎತ್ತರವಾಗಿದೆ. ಇದರಲ್ಲಿ ಅಜ್ಜಿನ ಮರ, ನೆಗಳನ ಅಡ್ಡೆ, ಮತ್ತು ಚಕ್ರಗಳು ಕಿರಾಲು ಬೋಗಿ ಮರದಿಂದ ತಯಾರಿಸಿದ್ದು ಇನ್ನುಳಿದ ಭಾಗಕ್ಕೆ ಸಂಪೂರ್ಣ ಸಾಗುವಾನಿ ಮರವನ್ನು ಬಳಸಲಾಗಿದೆ. ಈ ರಥವು 16 ಅಂತಸ್ತುಗಳ ಚೌಕದಲ್ಲಿ ಆನೆ ಜಂತಿ, ಬಳ್ಳಿಸಾಲು, ಪದ್ಮನ ಸಾಲು, 4 ಅಂತಸ್ತು ಚಿತ್ರದ ವಿಗ್ರಹಗಳು, ವಿಷ್ಣುವಿನ ಚರ್ತುವಂಶಿ ಚಿತ್ರಗಳು, ಶೀವನ ಲೀಲೆಗಳು, ದಕ್ಷಯಜ್ಞ, ಪಾರ್ವತಿ ಕಲ್ಯಾಣ, ಸುಬ್ರಹ್ಮಣ್ಯ ಜನನ, ಕಾರ್ತಿಕೇಯ, ರಾಮಯಾಣ ಭಾಗವಾದ ಪುತ್ರ ಕಾಮ್ಟೇಯಾಗ, ದಶಾವತಾರ, ದಿಕ್ಕುಪಾಲಕರು, ದೇವರು ಕುಳಿತುಕೊಳ್ಳುವ ಪೀಠ, ಆನೆ ಮೇಲೆ ಕುಳಿತ ಸಿಂಹ, ಚತುರ್ವಿಂಶತಿ ಮೂರ್ತಿಗಳು, 4 ಮೂಲೆಯಲ್ಲಿ 5 ಅಡಿ ಎತ್ತರದ ದ್ವಾರಪಾಲಕರೂ ಸೇರಿದಂತೆ ಸಾವಿರಾರೂ ಚಿತ್ರಗಳು ಕಾಷ್ಠ ಶಿಲ್ಪ ಕೆತ್ತನೆಯ ಶಿಲ್ಪಿಗಳಿಂದ ವೈಭವವಾಗಿ ಮೂಡಿಬಂದಿದೆ. ಸುಮಾರು ಒಂದೂವರೆ ವರ್ಷಗಳ ಅವಧಿಯಲ್ಲಿ 42ಕ್ಕೂ ಅಧಿಕ ಮಂದಿ ಶಿಲ್ಪಿಗಳ ಮೂಲಕ ಹಳೆಯ ಶೈಲಿಯಲ್ಲಿಯೇ ನೂತನವಾಗಿ ಈ ಬ್ರಹ್ಮರಥ ನಿರ್ಮಾಣಗೊಂಡಿದೆ.

Comments are closed.