ಕರಾವಳಿ

ಕೆದೂರಿನಲ್ಲಿ ಬೈಕ್‌ಗಳೆರಡು ಮುಖಾಮುಖಿ ಢಿಕ್ಕಿ: ಯುವಕ ದಾರುಣ ಸಾವು, ಇಬ್ಬರಿಗೆ ಗಾಯ

Pinterest LinkedIn Tumblr

ಉಡುಪಿ: ಎರಡು ಬೈಕುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ತೀವ್ರ ಗಾಯಗೊಂಡ ಬೈಕ್ ಸವಾರ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಕುಂದಾಪುರ ತಾಲೂಕಿನ ಕೆದೂರು ಎಂಬಲ್ಲಿ ನಡೆದಿದೆ. ಕೆದೂರು ಸಮೀಪದ ಶಾನಾಡಿ ನಿವಾಸಿ ರಾಮಚಂದ್ರ ಕುಲಾಲ್ (26) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದು ಇವರು ಕೆದೂರಿನಲ್ಲಿ ಆಟೋ ವರ್ಕ್ಸ್ ಶಾಪ್’ನಲ್ಲಿ ಕೆಲಸ ಮಾಡುತ್ತಿದ್ದರು.

ಘಟನೆ ವಿವರ: ತೆಕ್ಕಟ್ಟೆಯಿಂದ ಹೊಸಮಠದೆಡೆಗೆ ಬೈಕ್‌ನಲ್ಲಿ ಸಾಗುತ್ತಿದ್ದ ಬೈಕ್ ಸವಾರ ಅರುಣ ಕುಮಾರ್ ಶೆಟ್ಟಿ ಹಾಗೂ ಹಿಂಬದಿ ಸವಾರರಾಗಿದ್ದ ಅಕ್ಷತ್ ಅವರ ಬೈಕ್‌ಗೆ ಚಾರುಕೊಟ್ಟಿಗೆಯಿಂದ ಕೆದೂರು ಕಡೆಗೆ ಸಾಗುತ್ತಿದ್ದ ರಾಮಚಂದ್ರ ಕುಲಾಲ್ ಅವರ ಬೈಕ್ ಮುಖಾಮುಖಿಯಾಗಿ ಢಿಕ್ಕಿಯಾಗಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಮೃತ ರಾಮಚಂದ್ರ ಕುಲಾಲ್ ಅವರು ವಿವಾಹಿತರಾಗಿದ್ದು ತನ್ನ ಪತ್ನಿ ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ.

ಹೊಸಮಠ ಅರಳಿಕಟ್ಟೆ ಮನೆ ನಿವಾಸಿಯಾದ ಅರುಣ ಕುಮಾರ್ ಶೆಟ್ಟಿ ಶಿಕ್ಷಕರಾಗಿದ್ದು ಅಪಘಾತದಿಂದ ಗಂಭೀರ ಗಾಯಗಳಾಗಿದ್ದು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಕ್ಷತ್ ಅವರಿಗೂ ಗಾಯಗಳಾಗಿದೆ ಎನ್ನಲಾಗಿದೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.