ಕರಾವಳಿ

ಪಡೀಲ್ ದುರ್ಘಟನೆ : ಸರಕಾರದಿಂದ 10 ಲಕ್ಷ, ವೈಯಕ್ತಿಕವಾಗಿ 1 ಲಕ್ಷ ಪರಿಹಾರ ಚೆಕ್ ವಿತರಿಸಿದ ಶಾಸಕ ಕಾಮತ್ 

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.09: ಪಡೀಲ್ ಕೊಡಕ್ಕಲ್ ಎಂಬಲ್ಲಿ ನಿನ್ನೆ ರಾತ್ರಿ ಕಂಪೌಂಡ್ ಕುಸಿದು ಸಾವನ್ನಪ್ಪಿದ 2 ಮಕ್ಕಳ ಕುಟುಂಬಕ್ಕೆ ಜಿಲ್ಲಾಡಳಿತ ವತಿಯಿಂದ ರೂ. 10 ಲಕ್ಷ ರೂ. ಚೆಕ್ಕನ್ನು ಶಾಸಕ ವೇದವ್ಯಾಸ ಕಾಮತ್ ವಿತರಿಸಿದರು.

ಪಡೀಲ್ ಬಳಿಯ ಕೊಡಕ್ಕಲ್ ನ ಶಿವನಗರದಲ್ಲಿ ಭಾನುವಾರ ರಾತ್ರಿ ಪಕ್ಕದ ಮನೆಯ ಆವರಣ ಗೋಡೆ ಕುಸಿದು ರಾಮಣ್ಣ ಗೌಡ- ರಜನಿ ದಂಪತಿಯ ಪುತ್ರಿ ವರ್ಷಿಣಿ (9) ಹಾಗೂ ವೇದಾಂತ್ (7) ಮೃತಪಟ್ಟಿದ್ದರು. ಸುದ್ದಿ ತಿಳಿದ ತಕ್ಷಣ ಶಾಸಕ ಡಿ ವೇದವ್ಯಾಸ ಕಾಮತ್ ಸ್ಥಳಕ್ಕೆ ಭೇಟಿ ನೀಡಿ ಹೆತ್ತವರಿಗೆ ಸಾಂತ್ವನ ಹೇಳಿದ್ದರು ಮತ್ತು ಆರ್ಥಿಕ ಸಹಾಯದ ಭರವಸೆ ನೀಡಿದ್ದರು.

ಅದರಂತೆ ಮರುದಿನ ಅಂದರೆ ಇಂದು ಬೆಳಿಗ್ಗೆ ಘಟನಾ ಸ್ಥಳಕ್ಕೆ ತೆರಳಿದ ಶಾಸಕ ಕಾಮತ್ ಅವರು ರಾಜ್ಯ ಸರಕಾರದ ವತಿಯಿಂದ ಹತ್ತು ಲಕ್ಷ ರೂಪಾಯಿ ಪರಿಹಾರದ ಚೆಕ್ ಹಾಗೂ ತಮ್ಮ ವೈಯಕ್ತಿಕ ನೆಲೆಯಿಂದ ತಮ್ಮದೇ ಸೇವಾ ಸಂಸ್ಥೆಯಾದ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಮೂಲಕ ಒಂದು ಲಕ್ಷ ರೂಪಾಯಿ ಚೆಕ್ ನೀಡಿದರು.

ಇನ್ನು ರಾಮಣ್ಣ ಗೌಡ-ರಜನಿ ದಂಪತಿಗೆ ಮನೆ ಕಟ್ಟಲು ಸರಕಾರದ ವತಿಯಿಂದ ಜಾಗ ಹಾಗೂ ಮನೆ ಕಟ್ಟಲು ಸಹಾಯ ಧನ ಕೂಡ ಸರಕಾರದ ವತಿಯಿಂದ ನೀಡುವುದಾಗಿ ಶಾಸಕ ಕಾಮತ್ ತಿಳಿಸಿದ್ದಾರೆ.

ಶಾಸಕರೊಂದಿಗೆ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ಬಿಜೆಪಿ ಮುಖಂಡರಾದ ಸುಧೀರ್ ಶೆಟ್ಟಿ ಕಣ್ಣೂರು, ವಸಂತ ಜೆ ಪೂಜಾರಿ ಹಾಗೂ ಕಂದಾಯ ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.

ಭಾರೀ ಮಳೆಗೆ ಮನೆ ಮೇಲೆ ಆವರಣಗೋಡೆ ಕುಸಿದು ಇಬ್ಬರು ಮಕ್ಕಳು ಮೃತ್ಯು : ಪಡೀಲ್ ಕೊಡಕ್ಕಲ್‌ನಲ್ಲಿ ಘಟನೆ

Comments are closed.