ಮಂಗಳೂರು ಅಗಸ್ಟ್ 17: ಮಂಗಳೂರಿನ ಪಂಪ್ವೆಲ್ ಬಳಿಯ ಲಾಡ್ಜ್ ವೊಂದರಲ್ಲಿ ಶುಕ್ರವಾರ ರಾತ್ರಿ ಪೊಲೀಸರಿಂದ ಬಂದಿಸಲ್ಪಟ್ಟ ಎಂಟು ಮಂದಿ ಆರೋಪಿಗಳ ಹಿಂದೆ ಭಾರೀ ವಂಚನಾ ಜಾಲ ಇದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷ ತಿಳಿಸಿದ್ದಾರೆ.
ಶನಿವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸ್ವಾತಂತ್ಯೋತ್ಸವದ ಪ್ರಯುಕ್ತ ಮಂಗಳೂರು ನಗರದಾದ್ಯಂತ ಬಂದೋಬಸ್ತ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಗರದದ್ಯಾಂತ ಪೊಲೀಸರು ತಪಾಷಣೆಯಲ್ಲಿ ತೊಡಗಿದ್ದರು. ಈ ವೇಳೆ ಪಂಪ್ ವೆಲ್ ಬಳಿಯ ಲಾಡ್ಜ್ ವೊಂದರಲ್ಲಿ ಅನುಮಾನಾಸ್ಪದವಾಗಿ ತಂಗಿದ್ದ ತಂಡವೊಂದರ ವಿಚಾರಣೆಗೆ ಪೊಲೀಸರು ಮುಂದಾದಾಗ ತಂಡದಲ್ಲಿದ್ದವರು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಕೂಡಲೇ ಪೊಲೀಸರು ಒಟ್ಟು 8 ಮಂದಿಯನ್ನು ಬಂಧಿಸಿದ್ದಾರೆ.
ಕೇರಳದ ಕೋಯಿಲಾಡ್ ನಿವಾಸಿ ಟಿ ಸ್ಯಾಮ್ ಪೀಟರ್ (53), ಮಡಿಕೇರಿ ಸಿದ್ಧಪುರದ ಟಿ.ಕೆ. ಬೋಪಣ್ಣ (33), ಬೆಂಗಳೂರು ನೀಲಸಂದ್ರ ನಿವಾಸಿ ಮದನ್ (41), ಬೆಂಗಳೂರು ಕನಕಪುರದ ಸುನೀಲ್ ರಾಜು (35), ಬೆಂಗಳೂರು ಉತ್ತರಹಳ್ಳಿಯ ಕೋದಂಡರಾಮ (39), ಕೊಡಗು ಜಿಲ್ಲೆಯ ವಿರಾಜಪೇಟೆ ನಿವಾಸಿ ಚಿನ್ನಪ್ಪ (38), ಪಳ್ನೀರ್ ನಿವಾಸಿ ಎಸ್.ಎ.ಕೆ. ಅಬ್ದುಲ್ ಲತೀಫ್ (59), ಕೂಳೂರು ನಿವಾಸಿ ಜಿ ಮೊಯ್ದಿನ್ ಯಾನೆ ಚೆರಿಯ (70) ಬಂಧಿತ ಆರೋಪಿಗಳು ಎಂದು ತಿಳಿಸಿದರು.
ಈ ತಂಡದ ನಟೋರಿಯಸ್ ಲೀಡರ್ ಕೇರಳ ಮೂಲದ ಸ್ಯಾಮ್ ಪೀಠರ್ ಎಂಬಾತನಿಗೆ ಕೊಲ್ಕತ್ತಾ, ಭುವನೇಶ್ವರ ಸೇರಿ ಹಲವೆಡೆ ಸಂಪರ್ಕವಿದೆ. ಸರ್ಕಾರಿ ಅಧಿಕಾರಿಗಳಿಗೆ ಇರುವಂತೆ ಈತನಿಗೂ 5 ಗನ್ ಮ್ಯಾನ್ ಗಳಿದ್ದು ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈತನಿಗೆ ನೆರವು ನೀಡಿದ ಆರೋಪದಲ್ಲಿ ಮಂಗಳೂರು ನಿವಾಸಿಗಳಾದ ಲತೀಫ್ ಮತ್ತು ಮೊಯ್ದಿನ್ ರನ್ನೂ ಬಂಧಿಸಲಾಗಿದೆ ಎಂದು ಅಯುಕ್ತರು ತಿಳಿಸಿದರು.
ಆರೋಪಿಗಳು ತಂಗಿದ್ದ ಲಾಡ್ಜ್ ಎದುರು ಸೆಂಟ್ರಲ್ ಇನ್ವೆಷ್ಟಿಗೇಷನ್ ಬ್ಯುರೋ ಎಂಬ ಹೆಸರಿನ ಭಾರತ ಸರ್ಕಾರದ ಬೋರ್ಡ್ ಹಾಕಿ, ಟಿಂಟ್ ಹಾಕಿದ ಅನುಮಾನಾಸ್ಪದ ಕಾರು ಪತ್ತೆಯಾಗಿದ್ದು, ಇದು ಆರೋಪಿಗಳ ಪತ್ತೆಗೆ ನೆರವಾಯಿತು. ಆರೋಪಿಗಳ ವಶದಿಂದ 2 ಕಾರು, ಒಂದು ರಿವಾಲ್ವಾರ್, 8 ಗುಂಡುಗಳು ಹಾಗು ಇತರ ಸೊತ್ತುಗಳನ್ನು ಪಡೆಯಲಾಗಿದೆ ಎಂದು ಅಯುಕ್ತರು ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಇವರೆಲ್ಲರು ಅಂತರ್ ರಾಜ್ಯ ವಂಚನಾ ಜಾಲದ ತಂಡದ ಸದಸ್ಯರು ಎನ್ನುವುದು ತಿಳಿದುಬಂದಿದ್ದು, ಬಗ್ಗೆ ಸಮಗ್ರ ತನಿಖೆಗೆ ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಲಕ್ಷ್ಮೀ ಗಣೇಶ್, ಅರುಣಾನಿಶ್ ಗಿರಿ ಹಾಗೂ ಮತ್ತಿತ್ತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಉಗ್ರರ ದಾಳಿ ಹಿನ್ನಲೆಯಲ್ಲಿ ನಡೆದ ತಪಾಷಣೆ ಸಂದರ್ಭ ಬಲೆಗೆ ಬಿದ್ದ ಆರೋಪಿಗಳು :
ಬಂಧಿತರೆಲ್ಲರೂ ಜನರನ್ನು ಬೆದರಿಸಿ ಹಣ ವಸೂಲಿ ಮಾಡುವವರಾಗಿದ್ದು.ಮೇಲ್ನೋಟಕ್ಕೆ ಇವರೆಲ್ಲರು ಅಂತರ್ ರಾಜ್ಯ ವಂಚನಾ ಜಾಲದ ತಂಡದ ಸದಸ್ಯರು ಎನ್ನುವುದು ತಿಳಿದುಬಂದಿದೆ. ಇವರು ಕೇಂದ್ರ ಸರ್ಕಾರದ ಅಧಿಕಾರಿಗಳ ಹೆಸರಿನಲ್ಲಿ ವಂಚಿಸುತ್ತಿದ್ದು, ಸರಕಾರದ ವಿವಿಧ ಇಲಾಖೆಗಳ ನಕಲಿ ಫಲಕಗಳನ್ನು ಹಾಕಿಕೊಂಡು ಜನರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಬಂಧಿತರಿಂದ ಸೆಂಟ್ರಲ್ ಇನ್ವೆಷ್ಟಿಗೇಷನ್ ಬ್ಯುರೋ ಹಾಗೂ ಗೌರ್ವನಮೆಂಟ್ ಆಫ್ ಇಂಡಿಯಾ ಎಂಬ ನಾಮಫಲಕವಿರುವ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕೇಂದ್ರ ಸರಕಾರ ಉಗ್ರರ ದಾಳಿ ಹಿನ್ನಲೆಯಲ್ಲಿ ಕರಾವಳಿಯಲ್ಲಿ ಕಟ್ಟೆಚ್ಚರಕ್ಕೆ ಸೂಚಿಸಿದ ಹಿನ್ನಲೆಯಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಕದ್ರಿ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ.

















Comments are closed.