ಕರಾವಳಿ

ಮಂಗಳೂರಿನಲ್ಲಿ ‘ಮೈ ಬೀಟ್ ಮೈ ಪ್ರೈಡ್’ – ‘ನಮ್ಮ ಕುಡ್ಲ ಪೊಲೀಸ್’ ವಾಟ್ಸ್ ಆ್ಯಪ್ ಗ್ರೂಪ್‌ಗೆ ಚಾಲನೆ

Pinterest LinkedIn Tumblr

ಮಂಗಳೂರು, ಆಗಸ್ಟ್.16: ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಾರ್ವಜನಿಕರನ್ನು ಒಳಗೊಂಡ ‘ನಮ್ಮ ಕುಡ್ಲ ಪೊಲೀಸ್’ ವಾಟ್ಸ್ ಆ್ಯಪ್ ಗ್ರೂಪ್ ‘ಮೈ ಬೀಟ್ ಮೈ ಪ್ರೈಡ್’ (ನಮ್ಮ ಬೀಟ್, ನಮ್ಮ ಹೆಮ್ಮೆ)ಗೆ ಶುಕ್ರವಾರ ಆಯುಕ್ತಾಲಯದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಚಾಲನೆ ನೀಡಿದರು.

ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯು ಜನಸ್ನೇಹಿಯಾಗಿರಬೇಕು, ಜನರ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಬೇಕು. ತಂತ್ರಜ್ಞಾನ ಯುಗದಲ್ಲಿ ಸೋಶಿಯಲ್ ಮೀಡಿಯಾ ಹೆಚ್ಚು ಪರಿಣಾಮಕಾರಿಯಾಗಿರುವುದರಿಂದ ‘ನಮ್ಮ ಕುಡ್ಲ ಪೊಲೀಸ್’ ವಾಟ್ಸ್ ಆಯಪ್ ಗ್ರೂಪ್ ರಚಿಸಿ ಬೀಟ್ ಪೊಲೀಸ್ ವ್ಯವಸ್ಥೆ ಬಲಗೊಳಿಸಲಾಗಿದೆ ಎಂದು ತಿಳಿಸಿದರು.

“ನಮ್ಮ ಬೀಟ್, ನಮ್ಮ ಹೆಮ್ಮೆ ಎಂಬ ಯೋಜನೆ ಮಂಗಳೂರು ನಗರ ಪೊಲೀಸರು ನಗರದ ಗಸ್ತು ವ್ಯವಸ್ಥೆಯನ್ನು ಸಬಲಗೊಳಿಸುವ ಈ ಯೋಜನೆಯಾಗಿದೆ. ಇದರ ವಿಶೇಷತೆ ಏನೆಂದರೆ ಇಡೀ ನಗರವನ್ನು ಚಿಕ್ಕದ ಬೀಟ್ ಗಳನ್ನಾಗಿ ವಿಂಗಡನೆ ಮಾಡಿ ಪ್ರತಿ ಬೀಟ್ ಗೆ ಒಬ್ಬ ಪೇದೆ ಅಥವಾ ಒಬ್ಬಮುಖ್ಯ ಪೇದೆ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗುತ್ತದೆ. ಮಾತ್ರವಲ್ಲದೆ ಪ್ರತಿ ಬೀಟ್ ಗೂ ವಾಟ್ಸಪ್ ಗ್ರೂಪ್ ರಚಿಸಿ ಅದರಲ್ಲಿ ಸಾಮಾಜದ ಎಲ್ಲಾ ವರ್ಗ, ಸಮುದಾಯದ ನಾಗರೀಕರನ್ನು ಸದಸ್ಯರನ್ನಾಗಿ ಸೇರ್ಪಡೆಗೊಳಿಸಿ ಅವರ ಸಲಹೆ ಸೂಚನೆ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುವ ವೇದಿಕೆಯನ್ನಾಗಿ ವಾಟ್ಸಪ್ ಗ್ರೂಪ್ ಬಳಸಲಾಗುತ್ತದೆ ಎಂದು ಅಯುಕ್ತರು ಹೇಳಿದರು.

“ನಗರವನ್ನು 756 ಬೀಟ್ ವ್ಯವಸ್ಥೆಗಳಾಗಿ ವಿಂಗಡಿಸಲಾಗಿದ್ದು ಇದರಲ್ಲಿ ಈಗಾಗಲೇ 722 ವಾಟ್ಸಪ್ ಗ್ರೂಪ್ ರಚಿಸಲಾಗಿದೆ. ಪೊಲೀಸ್ ಆಯುಕ್ತರಿಂದ ಹಿಡಿದು ಎಸ್ಸೈವರೆಗಿನ ಅಧಿಕಾರಿಗಳು ತಿಂಗಳಿಗೊಮ್ಮೆ ಬೀಟ್ ಪೊಲೀಸರ ಜೊತೆ ಬೀಟ್ ಮಾಡಲಿದ್ದಾರೆ. ಆ ಮೂಲಕ ಜನರ ಬಳಿಗೆ ಪೊಲೀಸರು ತೆರಳಿ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಹೊಸ ಆಯಪ್ ರಚಿಸಲಾಗಿದ್ದು, ಜನಸ್ನೇಹಿ ಬೀಟ್ ಪೊಲೀಸ್ ಜೊತೆ ಕೈ ಜೋಡಿಸಲು ಆಸಕ್ತಿ ಇರುವವರು ಹೆಸರು ನೋಂದಾಯಿಸಿ ವ್ಯವಸ್ಥೆ ಬಲಪಡಿಸಲು ಕೈ ಜೋಡಿಸ ಬಹುದು ಎಂದು ಡಾ.ಪಿ.ಎಸ್.ಹರ್ಷ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಡಿಸಿಪಿಗಳಾದ ಲಕ್ಷ್ಮೀ ಗಣೇಶ್, ಅರುಣಾನಿಶ್ ಗಿರಿ, ನಿವೃತ್ತ ಡಿವೈಎಸ್ಪಿ ಟಿಸಿಎಂ ಶರೀಫ್, ಡಾ. ಉದಯ ಕುಮಾರ್, ರಾಜವರ್ಮ ಬಲ್ಲಾಳ್ ಮತ್ತಿತರರು ಉಪಸ್ಥಿತರಿದ್ದರು. ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ‌ ಕೋದಂಡರಾಮ ಸ್ವಾಗತಿಸಿದರು. ಇನ್ ಸ್ಪೆಕ್ಟರ್ ಗುರು ಕಾಮತ್ ಕಾರ್ಯಕ್ರಮ ನಿರೂಪಿಸಿದರು.

Comments are closed.