ಕರಾವಳಿ

ಫೋನ್ ಕದ್ದಾಲಿಕೆ ಬಗ್ಗೆ ತನಿಖೆಯಾಗಲಿ : ಶಾಸಕ ವೇದವ್ಯಾಸ ಕಾಮತ್

Pinterest LinkedIn Tumblr

ಮಂಗಳೂರು :ಫೋನ್ ಕದ್ದಾಲಿಕೆ ಬಗ್ಗೆ ಮಾಧ್ಯಮಗಳಲ್ಲಿ ನಿರಂತರವಾಗಿ ವರದಿಗಳು ಬರುತ್ತಿದ್ದು, ಇದಕ್ಕೆ ಅಂತ್ಯ ಸಿಗಬೇಕಾದರೆ ಸೂಕ್ತ ತನಿಖೆಯಾಗಬೇಕು ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.

ಹಿಂದಿನ ಮೈತ್ರಿ ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಫೋನ್ ಕದ್ದಾಲಿಕೆ ಬಗ್ಗೆ ಮಾಧ್ಯಮಗಳಲ್ಲಿ ನಿರಂತರವಾಗಿ ವರದಿಗಳು ಬರುತ್ತವೆ. ಕಳೆದ ದೋಸ್ತಿ ಸರಕಾರದ ಅತೀ ದೊಡ್ಡ ಸಾಧನೆ ಎಂದರೆ ಫೋನ್ ಕದ್ದಾಲಿಕೆ ಮಾಡಿರುವುದು ಎನ್ನುವುದು ಸ್ಪಷ್ಟವಾಗಿದೆ.

ಕಾಂಗ್ರೆಸ್ ಪಕ್ಷದ ಶಾಸಕರು ಮತ್ತು ಜೆಡಿಎಸ್ ಪಕ್ಷದ ಶಾಸಕರು ಪರಸ್ಪರರ ಮೇಲೆ ಆರೋಪ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಬಳಸಿ ಕುಮಾರಸ್ವಾಮಿಯವರು ಮಾಡಿದ್ದರೆನ್ನಲಾದ ಫೋನ್ ಕದ್ದಾಲಿಕೆಯ ಬಗ್ಗೆ ಉನ್ನತ ಮಟ್ಟದಲ್ಲಿ ತನಿಖೆ ಆದರೆ ನೈಜ ವಿಷಯ ಬೆಳಕಿಗೆ ಬರುತ್ತದೆ.

ಆಗ ತಪ್ಪಿತಸ್ಥರು ಯಾರು ಎಂದು ಗೊತ್ತಾಗುವುದರಿಂದ ಅವರಿಗೆ ಸೂಕ್ತ ಶಿಕ್ಷೆ ಕೂಡ ಕಾನೂನಿನ ಅಡಿಯಲ್ಲಿ ಸಿಗಬಹುದು. ಯಾವುದೇ ಕ್ರಿಮಿನಲ್ ಹಿನ್ನಲೆಯ ವ್ಯಕ್ತಿಗಳು, ದೇಶದ್ರೋಹ ಕೃತ್ಯ ಮಾಡುವ ವ್ಯಕ್ತಿಗಳ ಫೋನ್ ಕದ್ದಾಲಿಸುವುದನ್ನು ಬಿಟ್ಟು ಬೇರೆ ಯಾವುದೇ ಗೌರವಾನ್ವಿತ ನಾಗರಿಕರ ಫೋನ್ ಕದ್ದಾಲಿಸುವುದು ಘೋರ ತಪ್ಪು. ಇದಕ್ಕೆಲ್ಲ ಅಂತ್ಯ ಸಿಗಬೇಕಾದರೆ ಸೂಕ್ತ ತನಿಖೆ ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಮಾತ್ರ ಪರಿಹಾರ ಎಂದು ಶಾಸಕ ಕಾಮತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments are closed.