ಕರಾವಳಿ

ಮಳೆಯ ನಡುವೆಯೂ ಕುಂದಾಪುರದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ- ಸಾಧಕ ವಿದ್ಯಾರ್ಥಿಗಳಿಗೆ ಲ್ಯಾಪ್’ಟಾಪ್

Pinterest LinkedIn Tumblr

ಕುಂದಾಪುರ: ಬೆಳಿಗ್ಗೆನಿಂದ ಎಡಬಿಡದೇ ಸುರಿಯುತ್ತಿರುವ ಮಳೆಯ ನಡುವೆಯೂ ಕುಂದಾಪುರದ ಗಾಂಧೀ ಮೈದಾನದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಗುರುವಾರದಂದು ಆಚರಿಸಲಾಯಿತು. ಇದೇ ಸಂದರ್ಭ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಕುಂದಾಪುರ ವಲಯದ ಸರಕಾರಿ ಪ್ರೌಢ ಶಾಲೆಯ ಐದು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಿ ಪ್ರೋತ್ಸಾಹಿಸಲಾಯಿತು.

ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್ ಡಾ. ಮಧುಕೇಶ್ವರ್ ಧ್ವಜಾರೋಹಣಗೈದು ಸ್ವಾತಂತ್ರ್ಯೋತ್ಸವ ಸಂದೇಶ ನೀಡಿ, ಕೇಸರಿ ಬಿಳಿ, ಹಸಿರು ಬಣ್ಣದ ತ್ರಿವರ್ಣ ಧ್ವಜ ನೋಡಲು ಹೆಮ್ಮೆ. ಆದರೆ ಇದನ್ನು ಪಡೆಯಲು ಹಲವರ ತ್ಯಾಗ ಬಲಿದಾನವಿದೆ. ಬ್ರಿಟೀಷರ ದಾಸ್ಯದಿಂದ ಹೊರತಂದು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಶ್ರಮಿಸಿದ ಹಲವು ಮಹಾನ್ ನಾಯಕರ ತ್ಯಾಗವನ್ನು ಸ್ಮರಿಸುವ ಮೂಲಕ ಅವರು ಹಾಕಿಕೊಟ್ಟ ಉತ್ತಮ ಹೆಜ್ಜೆಯಲ್ಲಿ ನಾವು ಸಾಗಬೇಕು. ನಮಗೆ ಸಿಕ್ಕ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಬ್ದಾರಿ ಮತ್ತು ಕರ್ತವ್ಯ. ದೇಶದ ಸಮಗ್ರತೆ, ಭದ್ರತೆಯನ್ನು, ಏಕತೆಯನ್ನು ಛಿದ್ರಗೊಳಿಸಲು ಮುಂದಾದ ಕೆಲವು ದುಷ್ಟ ಶಕ್ತಿಗಳ ವಿರುದ್ಧ ನಾವೆಲ್ಲರೂ ಒಗ್ಗೂಡಿ ಹೋರಾಡಬೇಕಿದೆ. ಕುಂದಾಪುರ ಈ ಹಿಂದೆ ಮದ್ರಾಸ್ ಪ್ರಾಂತಕ್ಕೆ ಸೇರಿದ್ದು ಕರಾವಳಿ ಭಾಗದ ಸ್ವತಂತ್ರ್ಯ ಕಲಿಗಳು ತಮ್ಮ ಕಿಚ್ಚನ್ನು ಬ್ರಿಟೀಷರಿಗೆ ಮುಟ್ಟಿಸಿ ಅವರನ್ನು ಹಿಮ್ಮೆಟ್ಟಿಸಿದ ಕಾರ್ಯವನ್ನು ನೆನೆಯಬೇಕು. ದೇಶದ ವಿವಿದೆಡೆ ನೆರೆ ಸಮಸ್ಯೆಯಿದ್ದು ಕೈಲಾದಷ್ಟು ಸಹಕಾರವನ್ನು ಚೆಕ್ ಮುಖಾಂತರ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಬಹುದಾಗಿದೆ ಎಂದು ಕರೆಕೊಟ್ಟರು.

ಮಳೆ ಅಡ್ಡಿ..
ರಾಜ್ಯದ ಹಲೆವೆಡೆ ನೆರೆ ಹಿನ್ನೆಲೆ ಸರಳ ಸ್ವಾತಂತ್ರ್ಯೋತ್ಸವ ಆಚರಣೆಗೆ ಈ ಹಿಂದೆಯೇ ಸೂಚಿಸಲಾಗಿತ್ತು. ಗುರುವಾರ ಬೆಳಿಗ್ಗೆಯೂ ಎಡಬಿಡದೆ ಮಳೆ ಸುರಿದಿದ್ದು ಪರೇಡ್ ಮಾಡಲು ಅಡಚಣೆಯಾಗಿತ್ತು. ಕುಂದಾಪುರ ಠಾಣಾಧಿಕಾರಿ ಹರೀಶ್ ಆರ್. ನಾಯ್ಕ್ ಅವರ ನೇತೃತ್ವದಲ್ಲಿ ಪೊಲೀಸ್, ಗೃಹ ರಕ್ಷಕ, ಎನ್‌ಸಿಸಿ, ಸ್ಕೌಟ್ಸ್ ಎಂಡ್ ಗೈಡ್ಸ್, ಭಾರತ್ ಸೇವಾದಳ ತಂಡ, ವಿವಿಧ ಶಾಲೆಯ ವಿದ್ಯಾರ್ಥಿಗಳು ಪಥ ಸಂಚಲನಕ್ಕೆ ಸಿದ್ಧತೆ ಮಾಡಿಕೊಂಡಿದ್ದರೂ ಕೂಡ ಮಳೆ ಹಿನ್ನೆಲೆ ಅದನ್ನು ರದ್ಧುಗೊಳಿಸಲಾಗಿತ್ತು. ಮಳೆಯ ನಡುವೆಯೂ ಮಕ್ಕಳು ಕೊಡೆ ಹಿಡಿದು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕುಂದಾಪುರ ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷ ರಾಮಕಿಶನ್ ಹೆಗ್ಡೆ ಕರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಡಿವೈ‌ಎಸ್ಪಿ ಬಿ.ಪಿ. ದಿನೇಶ್ ಕುಮಾರ್, ತಹಶಿಲ್ದಾರ್ ತಿಪ್ಪೇಸ್ವಾಮಿ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಮಂಜಪ್ಪ, ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ನಾಗಭೂಷಣ್ ಉಡುಪ, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಂಪಾರು ದಿನಕರ ಶೆಟ್ಟಿ, ಪುರಸಭೆ ಹಾಲಿ ಸದಸ್ಯರು, ಮಾಜಿ ಪುರಸಭಾಧ್ಯಕ್ಷೆ ವಸಂತಿ ಸಾರಂಗ, ಉಪಾಧ್ಯಕ್ಷ ರಾಜೇಶ್ ಕಾವೇರಿ ಮೊದಲಾದವರು ಉಪಸ್ಥಿತರಿದ್ದರು.

ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.