ಕರಾವಳಿ

ಮಂಗಳೂರಿನಲ್ಲಿ 73ನೇ ಸ್ವಾತಂತ್ರ್ಯೋತ್ಸವ : ಕೊಡೆ ಹಿಡಿದೇ ಧ್ವಜಾರೋಹಣ ನೆರವೇರಿಸಿ ನೆರೆ ಸಂತ್ರಸ್ತರ ನೆರವಿಗೆ ಸದಾ ಸಿದ್ದ ಎಂದ ಜಿಲ್ಲಾಧಿಕಾರಿಗಳು

Pinterest LinkedIn Tumblr

ಮಂಗಳೂರು, ಆಗಸ್ಟ್.15:ಮಂಗಳೂರಿನ ಕೇಂದ್ರ ಮೈದಾನದಲ್ಲಿ ಬುಧವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 73ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಧಾರಾಕಾರವಾಗಿ ಸುರಿವ ಮಳೆಯ ನಡುವೆ ಧ್ವಜಾರೋಹಣಗೈದು ಸ್ವಾತಂತ್ರ್ಯ ಸಂದೇಶ ನೀಡಿದರು.

ಕರಾವಳಿ ಸೇರಿದಂತೆ ಜಿಲ್ಲೆಯಾದ್ಯಂತ ಹಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯ ಅಬ್ಬರದ ನಡುವೆಯು ನಗರದ ನೆಹರೂ ಮೈದಾನದಲ್ಲಿ ಇಂದು ಸರಳ ರೀತಿಯಲ್ಲಿ 73 ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಸುರಿಯುತ್ತಿರುವ ಮಳೆಯಲ್ಲಿ ಕೊಡೆ ಹಿಡಿದುಕೊಂಡೇ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಧ್ವಜಾರೋಹಣದ ಬಳಕ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದ ಅವರು, ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ನೂರು ವರ್ಷಗಳಲ್ಲಿ ಕಂಡರಿಯದ ನೆರೆ ಪ್ರವಾಹ ಉಂಟಾಗಿದೆ. ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯಾಗಿ ಜನಸಾಮಾನ್ಯರ ಬದುಕು ಬೀದಿ ಪಾಲಾಗಿ ಸಂಕಷ್ಟದಲ್ಲಿದ್ದಾರೆ. ಅವರ ಬಾಳಲ್ಲಿ ಪುನರ್ವಸತಿಗೆ ಸಂಬಂಧಿಸಿದಂತೆ ಜಿಲ್ಲೆಯ ಸಾರ್ವಜನಿಕರು ಸಹಾಯ ಹಸ್ತದ ನೆರವು ನೀಡಿ ಸರಕಾರದೊಂದಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಕ.ಜಿಲ್ಲೆಯು ಹಿಂದೆಂದೂ ಕಂಡು ಕೇಳರಿಯದ ಪ್ರವಾಹಕ್ಕೆ ಒಳಗಾಗಿದ್ದು ಈ ಸಂದರ್ಭದಲ್ಲಿ ರಕ್ಷಣಾ ಕಾರ್‍ಯಾಚರಣೆಯಲ್ಲಿ ಕೈ ಜೋಡಿಸಿರುವ ಎನ್.ಡಿ.ಆರ.ಎಫ್. ತಂಡವೂ ಸೇರಿದಂತೆ ಎಲ್ಲ ರಕ್ಷಣಾ ತಂಡಗಳಿಗೆ ಮತ್ತು ಅವಿರತವಾಗಿ ಶ್ರಮಿಸಿರುವ ವಿವಿಧ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಮತ್ತು ಸರಕಾರದೊಂದಿಗೆ ರಕ್ಷಣಾ ಕಾರ್‍ಯದಲ್ಲಿ ಕೈಜೋಡಿಸಿರುವ ವಿವಿಧ ಸಂಘ ಸಂಸ್ಥೇಗಳು, ಸಾರ್ವನಿಕರು, ದನಿಗಳು ಮತ್ತು ಮಾಧ್ಯಮ ಮಿತ್ರರಿಗೆ ಸರಕಾರದ ಪರವಾಗಿ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದರು.

ಜಿಲ್ಲೆಯಲ್ಲಿ ಗರಿಷ್ಟ ಮಟ್ಟದಲ್ಲಿ ಅನೇಕ ಕಡೆ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ, ರಸ್ತೆಗಳಿಗೆ ಹಾನಿಯಾಗಿದೆ. ಹಾನಿಗೊಂಡ ಪ್ರದೇಶಗಳ ಪುನರ್ ನಿರ್ಮಾಣಕ್ಕೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ. ಪ್ರವಾಹ ಪರಿಹಾರ ಕಾಮಗಾರಿ ಗಳನ್ನು ಕೈಗೊಳ್ಳಲು ಸರಕಾರದಿಂದ ಜಿಲ್ಲೆಗೆ ಈ ಸಾಲಿನಲ್ಲಿ ಒಟ್ಟು 48.29 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇದರಡಿ 918 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹಾನಿಗೊಂಡ ಪ್ರದೇಶಗಳ ಪುರ್ನನಿರ್ಮಾಣಕ್ಕೆ ಹಲವು ಕಾರ್‍ಯಕ್ರಮ ಹಮ್ಮಿಕೊಂಡಿದ್ದು, ಕಾರ್‍ಯಾಚರಣೆಯ ನಿರಂತರವಾಗಿ ಜರಗುತ್ತಿದೆ. ತಮ್ಮೆಲ್ಲವನ್ನೂ ಕಳೆದುಕೊಂಡು ಸಂಕಷ್ಟ ಪರಿಸ್ಥಿತಿಯಲ್ಲಿಯೂ ಸಂಯಮದಿಂದ ಸಹಕರಿಸಿರುವ ನಿಮ್ಮ ಜತೆ ಇಡೀ ಜಿಲ್ಲಾಡಳಿತವೇ ಇದೆ ಎಂದು ನೆರೆ ಸಂತ್ರಸ್ತರಿಗೆ ಭರವಸೆ ನೀಡಿದ ಜಿಲ್ಲಾಧಿಕಾರಿಗಳು, ನೆರೆಯಿಂದಾಗಿ ಸಂಕಷ್ಟ ಸ್ಥಿತಿಯಲ್ಲಿ ಸಂತೃಸ್ತರು ಇದ್ದರೂ ಜಿಲ್ಲಾಡಳಿತದೊಂದಿಗೆ ಸಂಯಮದಿಂದ ಸಹಕಾರ ನೀಡಿದ್ದು, ನಿಮ್ಮ ಸೇವೆಗೆ ಸದಾ ಸಿದ್ಧ ಎಂದು ಹೇಳಿದರು.

 

ಸ್ವಾತಂತ್ರ್ಯ ಸಂಭ್ರಮದ ಈ ಗಳಿಗೆಯಲ್ಲಿ ದೇಶದ ಪ್ರಗತಿ, ಏಳಿಗೆ ಮತ್ತು ಐಕ್ಯತೆಗೆ ಮಾರಕವಾದ ದುಷ್ಟ ಶಕ್ತಿಗಳನ್ನು ಎದುರಿಸುವ ದೃಢ ಸಂಕಲ್ಪಗಳನ್ನು ಭಾರತೀಯರಾದ ನಾವಿಂದು ಮಾಡಬೇಕಿದೆ. ಜೊತೆಗೆ ಜಾತಿ-ಮತ ಭೇದಗಳನ್ನು ಮರೆತು ಸರ್ವ ಧರ್ಮಗಳನ್ನು ಪ್ರೀತಿಸುವುದರ ಮೂಲಕ ನಾವೆಲ್ಲರೂ ಭಾರತೀಯರು ಎಂಬ ಒಂದೇ ಮನೋಭಾವದಿಂದ ದೇಶವನ್ನು ಪ್ರಬಲ ರಾಷ್ಟ್ರವನ್ನಾಗಿ ಮುನ್ನಡೆಸಲು ನಾವು ಬದ್ಧರಾಗಬೇಕಾಗಿದೆ. ಒಂದು ಪೀಳಿಗೆ ಸ್ವಾತಂತ್ರಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿ ಇತಿಹಾಸ ಸೃಷ್ಟಿಸಿತು. ಈಗ ನಾವೆಲ್ಲ ಭಾರತವನ್ನು ವಿಶ್ವತ ಅತ್ಯುನ್ನತ ಸ್ಥಾನಕ್ಕೆ ಏರಿಸಲು ನಮ್ಮ ಜೀವನವನ್ನು ತೊಡಗಿಸಿಕೊಂಡು ಇತಿಹಾಸ ಸೃಷ್ಟಿಸೋಣ. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಶಾಂತಿಯಿಂದ ಬಾಳು ಕಟ್ಟಿಕೊಳ್ಳಲು ಶ್ರಮಿಸೋಣ ಎಂದು ಅವರು ಹೇಳಿದರು.

ತುಂತುರು ಮಳೆಯ ನಡುವೆಯು ಎನ್.ಸಿ.ಸಿ, ಸ್ಕೌಟ್ ವಿದ್ಯಾರ್ಥಿಗಳಿಂದ, ಪೊಲೀಸ್, ಗೃಹ ರಕ್ಷಕ ದಳದಿಂದ ಆಕರ್ಷಕ ಪಥಸಂಚಲನ ನಡೆಯಿತು. ಅತ್ಯುತ್ತಮವಾಗಿ ಪಥ ಸಂಚಲನ ನಡೆಸಿದ ಎನ್‌ಸಿಸಿ ಏರ್‌ವಿಂಗ್ ಸೀನಿಯರ್ ತಂಡ ಪ್ರಥಮ ಸ್ಥಾನ ಪಡೆದರೆ, ಎನ್‌ಸಿಸಿ ನೇವ್ ತಂಡ ದ್ವಿತೀಯ ಸ್ಥಾನ ಪಡೆಯಿತು.

ವಿಂಗ್ ಕಮಾಂಡರ್ ಮಳೆಯಲ್ಲಿ ತೊಯ್ದುಕೊಂಡೇ ಗೌರವ ಸಲ್ಲಿಸಿದರು. ಪೊಲೀಸ್ ಬ್ಯಾಂಡ್‌ನಲ್ಲಿ ರಾಷ್ಟ್ರಗೀತೆ, ವಿದ್ಯಾರ್ಥಿಗಳಿಂದ ನಾಡಗೀತೆ, ರೈತಗೀತೆ ನಡೆಯಿತು.

ಇದೇ ಮೊದಲ ಬಾರಿ ಕರಾವಳಿ ಕಾವಲು ಪೊಲೀಸ್ ಪಡೆ ಸೇರಿದಂತೆ ಒಟ್ಟು 18 ತಂಡಗಳು ಹಾಗೂ ಎರಡು ವಾದ್ಯ ತಂಡಗಳು ಆಕರ್ಷಕ ಪಥ ಸಂಚಲನದಲ್ಲಿ ಭಾಗವಹಿಸಿದವು.ಮಳೆಯ ಕಾರಣವಾಗಿ ಸಾಂಕೇತಿಕವಾಗಿ ಸ್ವಾತಂತ್ರ್ಯ ದಿನಾಚರಣೆ ನಡೆಸಿದ್ದು ಈ ಬಾರಿಯ ವಿಶೇಷ. ವಿಶೇಷ ಚೇತನ ಮಕ್ಕಳು ಸೇರಿದಂತೆ ಪ್ರತಿಯೊಬ್ಬರೂ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ನೇಮಕವಾದ ಬಳಿಕ ಸಚಿವ ಸಂಪುಟ ವಿಸ್ತರಣೆ ಆಗದೆ, ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗದ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನೆರವೇರಿಸುವಂತೆ ಸರ್ಕಾರ ಆದೇಶ ನೀಡಿತ್ತು. ಈ ನಿಟ್ಟಿನಲ್ಲಿ ಎಲ್ಲಾ ಜೆಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ನೆರವೇರಿಸಿದ್ದು ಈ ಬಾರಿಯ ವಿಶೇಷ.

ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್‍ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಯು.ಟಿ.ಖಾದರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪ್ ಕಲ್ಕೂರ ಹಾಗೂ ಮತ್ತಿತ್ತರ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.