ಮಂಗಳೂರು /ಬಂಟ್ವಾಳ : ಪಶ್ಚಿಮ ಘಟ್ಟ, ಜಲಾನಯನ ಪ್ರದೇಶ ಹಾಗೂ ದ.ಕ. ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಗರಕ್ಕೆ ಕುಡಿಯುವ ನೀರು ಪೂರೈಸುವ ತುಂಬೆ ವೆಂಟೆಡ್ ಡ್ಯಾಂ ಭರ್ತಿಯಾಗಿದ್ದು, ಇಲ್ಲಿನ 30 ಡ್ಯಾಂ ಬಾಗಿಲಗಳ ಪೈಕಿ 29 ಬಾಗಿಲ ಅನ್ನು ತೆರೆಯಲಾಗಿದೆ.
ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದು ವರಿದಿದ್ದು, ನೇತ್ರಾವತಿ ನದಿ ಭೋರ್ಗರೆಯುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಸಮತೋಲನವನ್ನು ಕಾಪಾಡುವ ದೃಷ್ಟಿಯಿಂದ ತುಂಬೆ ವೆಂಟೆಡ್ ಡ್ಯಾಂನಿಂದ ಅಪಾರ ಪ್ರಮಾಣದ ನೀರು ಹೊರಬಿಡಲಾಗುತ್ತಿದೆ.
ನೇತ್ರಾವತಿ ನದಿಯ ಅಪಾಯದ ಮಟ್ಟ 8.5 ಮೀಟರ್. ಹೊರಹರಿವು ಹೊರತು ಪಡಿಸಿ ನದಿಯಲ್ಲಿ 7.9.ಮೀಟರ್ ನೀರು ದಾಖಲಾಗಿದೆ. ಸದ್ಯಕ್ಕೆ 8 ಮೀಟರ್ನಷ್ಟು ನೀರು ದಾಖಲಾಗಿದ್ದವು. ಯಾವುದೇ ಕ್ಷಣದಲ್ಲೂ ನೆರೆ ಏರುವ ಸಾಧ್ಯತೆಯಿರುವುದರಿಂದ ನದಿ ತೀರದ ಜನರು ಎಚ್ಚರವಹಿಸುವುದು ಅಗತ್ಯವಾಗಿದೆ. ಮಳೆಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವ ಸಾಧ್ಯತೆ ಇದೆ. ನದಿಪಾತ್ರಗಳಲ್ಲಿರುವ ಜನರ ಎಚ್ಚರ ಅಗತ್ಯ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ಶಂಭೂರು ಎಎಂಆರ್ ಡ್ಯಾಂ ಭರ್ತಿಯಾಗಿದ್ದು, ಇಲ್ಲಿನ 30 ಗೇಟ್ಗಳ ಪೈಕಿ 10 ಗೇಟ್ ಅನ್ನು ತೆರವು ಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




Comments are closed.