ಕರಾವಳಿ

ಕಾಪು ಸಿಪಿಐ ಕಾರ್ಯಾಚರಣೆ-ಖತರ್ನಾಕ್ ಅಂತರ್ ರಾಜ್ಯ ವಾಹನ ಚೋರರ ಬಂಧನ; 23 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ವಶ

Pinterest LinkedIn Tumblr

ಉಡುಪಿ: ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 2016 ರಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಗೂಡ್ಸ್ ಟೆಂಪೋ, ಕಾರುಗಳನ್ನು ಕಳವು ಮಾಡಿ ತಮಿಳುನಾಡಿಗೆ ಮಾರಾಟ ಮಾಡುತ್ತಿದ್ದ ಅಂತರ್‌ರಾಜ್ಯ ವಾಹನ ಕಳ್ಳರ ತಂಡವನ್ನು ಬಂಧಿಸಿ ಕಳವು ಮಾಡಿದ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಉಡುಪಿ ಜಿಲ್ಲೆಯ ಕಾಪು ಪೊಲೀಸ್ ವೃತ್ತ ನಿರೀಕ್ಷಕರ ನೇತೃತ್ವದ ತಂಡ ಯಶಸ್ವಿಯಾಗಿದೆ.

1) ಸಯ್ಯದ್ ಮಜರ್ ಪಾಷಾ (23), 2) ಪಿ.ಕೆ. ಎಲಿಯಾಸ್ ಯಾನೆ ಬಾಬು (58), 3) ಸಯ್ಯದ್ ಮೇಹಬೂಬ್ ಪಾಷಾ. (57) ಮತ್ತು 4) ಜಿಯಾವುಲ್ ಹಕ್ (37), ತಂದೆ ಶೌಕತ್ ಅಲಿ ಬಂಧಿತ ಆರೋಪಿಗಳಾಗಿದ್ದು ಅವರ ಬಳಿಯಲ್ಲಿದ್ದ ಇಂಡಿಕಾ ಕಾರು, ನಕಲಿ ನಂಬರ್ ಪ್ಲೇಟ್‌ಗಳು, ಕೀ ಗೊಂಚಲು, 5 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಎಲ್ಲೆಲ್ಲಿ ಕಳವಾಗಿತ್ತು:
ಜ.1ರ 2018ರಂದು ರಾತ್ರಿ ವೇಳೆಯಲ್ಲಿ ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಾಜಿ ಟ್ರೇಡರ್ಸ್ ಅಂಗಡಿಯ ಎದುರುಗಡೆ ನಿಲ್ಲಿಸಿದ್ದ ಕೆಎ20ಬಿ9170 ನೋಂದಣಿಯ ಮಹೀಂದ್ರ ಬೊಲೊರೋ ವಾಹನವನ್ನು ಕಳ್ಳರು ಕದ್ದ ಬಗ್ಗೆ ಕೆ. ಲಕ್ಷ್ಮೀನಾರಾಯಣ ಭಂಡಾರ್ಕರ್ ದೂರು ನೀಡಿದ್ದರು. ಜೂ.16 ರ 2019 ರಂದು ಕಾಪು ಠಾಣಾ ವ್ಯಾಪ್ತಿಯ ಕಟಪಾಡಿ ಕಲ್ಲಾಪು ಬಳಿ ನಿಲ್ಲಿಸಿದ್ದ ಮೊಹಮ್ಮದ್ ರಕೀಬ್ ಎಂಬವರ ಮಹೀಂದ್ರ ಪಿಕ್‌ಅಪ್ ವಾಹನ ಕೆಎ19ಸಿ8184 ಕಳವಾದ ಬಗ್ಗೆ ಪ್ರಕರಣ ದಾಖಲಾಗಿತ್ತು.

(ಕಾಪು ಸಿಪಿಐ ಮಹೇಶ್ ಪ್ರಸಾದ್)

ಆರಂಭವಾಗಿತ್ತು ಉನ್ನತ ತನಿಖೆ….
ಕುಂದಾಪುರ ಹಾಗೂ ಕಾಪು ಠಾಣಾ ವ್ಯಾಪ್ತಿಗಳಲ್ಲಿ ವಾಹನಗಳು ಕಳವಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳವಾದ ವಾಹನ ಹಾಗೂ ಆರೋಪಿಗಳ ಪತ್ತೆಯ ಬಗ್ಗೆ ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ತಂಡವು ಆರೋಪಿಗಳ ಹಾಗೂ ವಾಹನಗಳ ಪತ್ತೆಯ ಬಗ್ಗೆ ಹುಬ್ಬಳ್ಳಿ, ಧಾರವಾಡ, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮತ್ತು ಹೊರ ರಾಜ್ಯವಾದ ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಸಂಚರಿಸಿ ವಾಹನ ಕಳ್ಳರ ಬಗ್ಗೆ ಮತ್ತು ಕಳವಾದ ವಾಹನದ ಪತ್ತೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಉಡುಪಿ ಜಿಲ್ಲೆಯ ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ, ಶಿವಮೊಗ್ಗ ಜಿಲ್ಲೆಯಲ್ಲಿ, ತುಮಕೂರು ಜಿಲ್ಲೆಗಳಲ್ಲಿ ವಾಹನಗಳನ್ನು ಕಳ್ಳತನ ಮಾಡಿದ ವಾಹನ ಚೋರರ ತಂಡ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಂಚರಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು.

ಸಿಕ್ಕಿಬಿದ್ದ ಚೋರರು…
ಜು.19ರ 2019 ರಂದು ರಾತ್ರಿ ಕಾಪು ಪಿ.ಎಸ್.ಐ. ಜಯ ಹಾಗೂ ಪ್ರೊಬೇಷನರಿ ಪಿ.ಎಸ್.ಐ. ಸದಾಶಿವ ಹಾಗೂ ಸಿಬ್ಬಂದಿಯವರು ಕಟಪಾಡಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಕಾರ್ಯ ಕೈಗೊಳ್ಳುತ್ತಿದ್ದು ಮಧ್ಯ ರಾತ್ರಿ ವೇಳೆ ಉಡುಪಿ ಕಡೆಯಿಂದ ಬರುತ್ತಿದ್ದ ಇಂಡಿಕಾ ಕಾರಿನಲ್ಲಿ ನಾಲ್ಕು ಜನರಿದ್ದು, ಕಾರಿನ ದಾಖಲಾತಿಯ ಬಗ್ಗೆ ವಿಚಾರಿಸಿದಾಗ ಯಾವುದೇ ದಾಖಲಾತಿ ಇಲ್ಲದೇ ಇರುವುದು ಕಂಡುಬಂದ ಹಿನ್ನಲೆ ಸಂಶಯಗೊಂಡ ಪಿಎಸ್ಐ ಕಾಪು ಸಿಪಿಐ ಅವರಿಗೆ ಮಾಹಿತಿ ನೀಡಿದ್ದರು. ಅಂತೆಯೇ ಸಿಪಿಐ ಅವರು ಕಟಪಾಡಿ ಚೆಕ್‌ಪೋಸ್ಟ್‌ಗೆ ಹೋಗಿ ಕಾರಿನಲ್ಲಿದ್ದ ನಾಲ್ವರನ್ನು ಕೂಲಂಕುಷವಾಗಿ ವಿಚಾರಿಸಿದ್ದು ತಾವು ನಾಲ್ವರು ಕರಾವಳಿಯಲ್ಲಿ ಯಾವುದಾದರೂ ಪಿಕ್‌ಅಪ್ ವಾಹನ ಕಳವು ಮಾಡಿಕೊಂಡು ಹೋಗಲು ಸಂಚುಮಾಡಿ ಬಂದಿದ್ದ ಬಗ್ಗೆ ಒಪ್ಪಿಕೊಂಡಿದ್ದರು. ಕಾರಿನ ಬಗ್ಗೆ ವಿಚಾರಿಸಿದಾಗ ನೋಂದಣಿ ಸಂಖ್ಯೆ ಕೆಎ20ಎಬಿ8799 ಇದ್ದು, ಕಾರಿನೊಳಗೆ ಬೇರೆ ನಂಬ್ರ ಪ್ಲೇಟ್ ಕೆಎ04ಎಬಿ9279 ಇದ್ದು, ಈ ಬಗ್ಗೆ ಆರೋಪಿಗಳಲ್ಲಿ ವಿಚಾರಿಸಿದಾಗ ಕಾರೊಳಗಿದ್ದ ನಂಬರ್ ಪ್ಲೇಟ್ ಅಸಲಿ ನಂಬರ್ ಪ್ಲೇಟ್ ಆಗಿದ್ದು ಕಾರಿಗೆ ಹಾಕಿದ ನಂಬ್ರ ಪ್ಲೇಟ್‌ನ್ನು ಬದಲಾಯಿಸಿ ನಕಲಿ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ.

ಆರೋಪಿಗಳಿಂದ ವಾಹನಗಳು ವಶಕ್ಕೆ….
ತನಿಖೆಯನ್ನು ಮುಂದುವರಿಸಿ ಕಾಪು ಠಾಣಾ ಅಪರಾಧಕ್ಕೆ ಸಂಬಂಧಿಸಿದ 1,50,000/- ಅಂದಾಜು ಮೌಲ್ಯದ ಬೊಲೆರೋ ಪಿಕ್‌ಅಪ್ ವಾಹನವನ್ನು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕು ಹೊನ್ನೆಕುಡಿ ಗ್ರಾಮದ ಹಂತ್ವಾನೆ ಎಂಬಲ್ಲಿ ವಶಕ್ಕೆ ಪಡೆದಿದ ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿತ್ತು. ಆರೋಪಿಗಳನ್ನು ತಮಿಳುನಾಡಿಗೆ ಕರೆದುಕೊಂಡು ಹೋಗಿ ತಮಿಳುನಾಡು ರಾಜ್ಯದ ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಮ್‌ನಲ್ಲಿ ಆರೋಪಿ ಜಿಯಾವುಲ್ ಹಕ್‌ನ ಬಾಬ್ತು ಗುಜರಿ ಅಂಗಡಿಯಲ್ಲಿ ಇರಿಸಲಾಗಿದ್ದ 4 ಮಹೀಂದ್ರ ಬೊಲೆರೋ ಪಿಕ್‌ಅಪ್ ವಾಹನಗಳನ್ನು, 5 ಅಶೋಕ್ ಲೈಲ್ಯಾಂಡ್ ದೋಸ್ತ್ ವಾಹನಗಳನ್ನು, 1 ಟೊಯೋಟ ಕ್ವಾಲಿಸ್, 1 ಮಾರುತಿ 800 ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳ ಹಿನ್ನೆಲೆ….
1) ಸಯ್ಯದ್ ಮಜರ್ ಪಾಷಾ (23), ತಂದೆ ಸಯ್ಯದ್ ಮೆಹಬೂಬ್ ಪಾಷಾ. ವಾಸ: 6 ನೇ ಅಡ್ಡ ರಸ್ತೆ(ಬಲ ಬದಿ), ಟಿಪ್ಪು ನಗರ, ಶಿವಮೊಗ್ಗ, ಶಿವಮೊಗ್ಗ ಜಿಲ್ಲೆ ಮತ್ತು ತಾಲೂಕು. ಈತನು ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ನಕಲಿ ಕೀ ಬಳಸಿ ಕಾರು ಮತ್ತು ಗೂಡ್ಸ್ ವಾಹನಗಳನ್ನು ಕಳ್ಳತನ ಮಾಡಿ ಎಲಿಯಾಸ್ ಮತ್ತು ತಮಿಳುನಾಡಿನ ಜಿಯಾಉಲ್ ಹಕ್‌ಗೆ ಮಾರಾಟ ಮಾಡುತ್ತಿದ್ದು, ಈತನು ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು ಠಾಣೆಯ 2 ಪ್ರಕರಣಗಳಲ್ಲಿ ಜೈಲುವಾಸ ಅನುಭವಿಸಿದ್ದು, ಇನ್ನೂ ಹಲವಾರು ವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ.
2) ಕೆ. ಎಲಿಯಾಸ್ ಯಾನೆ ಬಾಬು (58), ತಂದೆ ಕೊರದ್, ವಾಸ: ಪಾಲೆಹಿಲ್ ಹೌಸ್, ಸೈಂಟ್ ಮೆರೀಸ್, ಆಕ್ವಿಟ್ ಚರ್ಚ್ ಹತ್ತಿರ, ಹಂತವಾನೆ, ಹೊನ್ನೆಕುಡಿ ಗ್ರಾಮ ಮತ್ತು ಅಂಚೆ, ಎನ್.ಆರ್.ಪುರ ತಾಲೂಕು, ಚಿಕ್ಕಮಗಳೂರು. ಈತನು ಕದ್ದ ವಾಹನಗಳನ್ನು ಸ್ವೀಕರಿಸುವವನಾಗಿದ್ದು, ತಮಿಳುನಾಡು ಮತ್ತು ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದು, ಹಲವಾರು ಕಳವು ಪ್ರಕರಣಗಳು ಮತ್ತು ಶ್ರೀಗಂಧ ಕಳವು ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ.
3) ಸಯ್ಯದ್ ಮೆಹಬೂಬ್ ಪಾಷಾ (57), ತಂದೆ ಸಯ್ಯದ್ ಮೊಹಮ್ಮದ್ ಹುಸೇನ್, ಕೇರಾಫ್ ಅಬ್ದುಲ್ ಅಜೀಜ್, ವಾಸ: ೬ ನೇ ಅಡ್ಡ ರಸ್ತೆ(ಬಲ ಬದಿ), ಟಿಪ್ಪು ನಗರ, ಶಿವಮೊಗ್ಗ, ಶಿವಮೊಗ್ಗ ಜಿಲ್ಲೆ. ಈತನು ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ನಕಲಿ ಕೀ ಬಳಸಿ ಕಾರು ಮತ್ತು ಗೂಡ್ಸ್ ವಾಹನಗಳನ್ನು ಕಳ್ಳತನ ಮಾಡಿ ಎಲಿಯಾಸ್ ಮತ್ತು ತಮಿಳುನಾಡಿನ ಜಿಯಾಉಲ್ ಹಕ್‌ಗೆ ಮಾರಾಟ ಮಾಡುತ್ತಿದ್ದು, ಈತನು ಭದ್ರಾವತಿ ಠಾಣೆಯಲ್ಲಿ ಶ್ರೀಗಂಧ ಕಳವು ಪ್ರಕರಣದಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿದ್ದು, ಇನ್ನೂ ಹಲವಾರು ವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ.
4) ಜಿಯಾವುಲ್ ಹಕ್ (37), ತಂದೆ ಶೌಕತ್ ಅಲಿ, ವಾಸ: ಮನೆ ನಂಬ್ರ ೨೦೧, ವೇದಯ್ಯ ನಗರ, ಶಿರುಮುಗೈ ರಸ್ತೆ, ಮೆಟ್ಟುಪಾಳ್ಯಮ್, ತಮಿಳುನಾಡು. ಈತನು ತಮಿಳುನಾಡಿನ ಮೆಟ್ಟುಪಾಳ್ಯಂನಲ್ಲಿ ಕದ್ದವಾಹನಗಳನ್ನು ನಂಬರ್ ಪ್ಲೇಟ್, ಎಂಜಿನ್ ನಂಬರ್, ಚಾಸಿಸ್ ನಂಬರ್, ಬಣ್ಣ ಬದಲಿಸಿ ಮಾರಾಟ ಮಾಡುವ ವ್ಯವಹಾರ ಮಾಡಿಕೊಂಡಿದ್ದು, ಕರ್ನಾಟಕ ಮತ್ತು ಇತರ ರಾಜ್ಯಗಳ ವಿವಿಧ ಮಾದರಿಯ ಕಳವು ವಾಹನಗಳನ್ನು ಖರೀದಿಸಿ ವ್ಯಾಪಾರ ಜಾಲ ಹೊಂದಿರುತ್ತಾನೆ.

ವಶಪಡಿಸಿಕೊಂಡ ಸೊತ್ತುಗಳ ವಿವರ :
1) ಕಾಪು, ಶಿವಮೊಗ್ಗ ದೊಡ್ಡಪೇಟೆ, ತೀರ್ಥಹಳ್ಳಿ ಮತ್ತು ಕುಂದಾಪುರ ಠಾಣಾ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 4 ಬೊಲೆರೋ ಪಿಕ್ ಅಪ್ ವಾಹನಗಳು.
2) ಶಿವಮೊಗ್ಗ, ಶಿವಮೊಗ್ಗ ತುಂಗ ನಗರ, ಶಿವಮೊಗ್ಗ ವಿನೋಬ ನಗರ, ಶಿವಮೊಗ್ಗ ದೊಡ್ಡಪೇಟೆ ಮತ್ತು ತುಮಕೂರು ನಗರ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 5 ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನಗಳು.
3) ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ 1 ಕ್ವಾಲಿಸ್ ಕಾರು.
4) ಆರೋಪಿತರು ಕೃತ್ಯದ ಸಮಯ ಬಳಸುತ್ತಿದ್ದ 1 ಟಾಟಾ ಇಂಡಿಕಾ ಕಾರು
5) ನಕಲೀ ಕೀಗಳು, 5 ಮೊಬೈಲ್ ಫೋನ್‌ಗಳು ಮತ್ತು ನಕಲಿ ನಂಬರ್ ಪ್ಲೇಟ್‌ಗಳು.
ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ 23,75,000 ರೂ. ಎನ್ನಲಾಗಿದೆ.

ಕಾರ್ಯಾಚರಣೆ ತಂಡ…
ಉಡುಪಿ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ನಿರ್ದೇಶನದಂತೆ ಸಹಾಯಕ ಪೊಲೀಸ್ ಅಧೀಕ್ಷಕ ಕೆ. ಕೃಷ್ಣಕಾಂತ್‌ರವರ ಮಾರ್ಗದರ್ಶನದಲ್ಲಿ ಕಾಪು ಸಿಪಿಐ ಮಹೇಶ್ ಪ್ರಸಾದ್ ನೇತೃತ್ವದ ಈ ವಿಶೇಷ ಕಾರ್ಯಾಚರಣೆಯ ತಂಡದಲ್ಲಿ ಕಾಪು ಪಿಎಸ್ಐ ಕೆ.ಜಯ, ಪ್ರೊಬೇಷನರಿ ಪಿಎಸ್‌ಐ ಉದಯರವಿ, ಸದಾಶಿವ ಗವರೋಜಿ, ಮಹದೇವ ಬೋಸ್ಲೆ ಹಾಗೂ ಸಿಬ್ಬಂದಿಯವರಾದ ಪ್ರವೀಣ್ ಕುಮಾರ್, ರಾಜೇಶ್, ರವಿಕುಮಾರ್, ಸುಧಾಕರ್ ಬಿಜೂರು, ಜಗದೀಶ್, ರುದ್ರೇಶ, ಶಶಿಧರ, ರಘು, ಸಂದೇಶ್, ಸಂದೀಪ್ ಶೆಟ್ಟಿ, ರಾಘವೇಂದ್ರ ಜೋಗಿ, ಪ್ರಕಾಶ, ಶರಣಪ್ಪ, ಮಂಜುನಾಥ, ಪರಶುರಾಮ ಹಾಗೂ ರಾಜೇಂದ್ರ ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.