ಕರಾವಳಿ

ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಳಿಯ ಮಂಗಳೂರಿನ ನೇತ್ರಾವತಿ ಸೇತುವೆ ಸಮೀಪ ನಿಗೂಢ ನಾಪತ್ತೆ : ಡೆತ್‌ನೋಟ್ ಪತ್ತೆ – ಪತ್ರದಲ್ಲೇನಿದೆ..

Pinterest LinkedIn Tumblr

ಮಂಗಳೂರು : ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಳಿಯ ಕಾಫಿ ಡೇ ಆಡಳಿತ ನಿರ್ದೇಶಕ ಸಿದ್ಧಾರ್ಥ ಮಂಗಳೂರಿನ ತೊಕ್ಕೋಟ್ ನೇತ್ರಾವತಿ ಸೇತುವೆ ಸಮೀಪ ಸೋಮವಾರ ತಡರಾತ್ರಿ ನಿಗೂಢವಾಗಿ ನಾಪತ್ತೆಯಾಗಿದ್ದು, ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ನದಿಯಲ್ಲಿ ಶೋಧಕಾರ್ಯ ಮುಂದುವರೆದಿದೆ. ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್‌, ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀ ಗಣೇಶ್, ಎಸಿಪಿ ಶ್ರೀನಿವಾಸ್ ಸಿಬ್ಬಂದಿ, ಅಗ್ನಿಶಾಮಕದಳಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಹುಡುಕಾಟ ನಡೆಸಿದ್ದಾರೆ.

ಲಭ್ಯ ಮಾಹಿತಿ ಪ್ರಕಾರ ಸಕಲೇಶಪುರದತ್ತ ತೆರಳುತ್ತಿದ್ದ ಸಿದ್ಧಾರ್ಥ ಕಾರು ಚಾಲಕನಲ್ಲಿ ಏಕಾಏಕಿ ಮಂಗಳೂರು ಪಂಪ್‌ವೆಲ್ ಕಡೆ ತಿರುಗಿಸುವಂತೆ ಹೇಳಿದ್ದರು.ಪಂಪ್‌ವೆಲ್ ತಲುಪಿದ ಬಳಿಕ ನೇತ್ರಾವತಿ ಸೇತುವೆ ಬಳಿ ತೆರಳುವಂತೆ ತಿಳಿಸಿದ್ದರು. ರಾತ್ರಿ ಸುಮಾರು 7.30ರಿಂದ 8ರ ನಡುವೆ ಸ್ಥಳಕ್ಕೆ ತೆರಳಿದ್ದು, ಸೇತುವೆ ತುದಿಯಲ್ಲಿ ಡ್ರೈವರ್‌ಗೆ ಕಾರು ನಿಲ್ಲಿಸಲು ಸೂಚಿಸಿದ್ದರು. ಅಲ್ಲಿ ಕಾರಿನಿಂದ ಕೆಳಗಿಳಿದಿದ್ದು, ನಂತರ ಮಂಗಳೂರಿನಿಂದ ತೊಕ್ಕೋಟ್ ಕಡೆ ಸಾಗುವ ಸೇತುವೆ ಒಂದು ಭಾಗದಲ್ಲಿ ಉದ್ದಕ್ಕೂ ಮೊಬೈಲ್‌ನಲ್ಲಿ ಮಾತಾಡಿಕೊಂಡು ನಡೆದಿದ್ದರು.

ಆ ಬಳಿಕ ಸೇತುವೆ ಮತ್ತೊಂದು ಭಾಗ ತೊಕ್ಕೋಟ್‌ನಿಂದ ಮಂಗಳೂರು ಕಡೆ ಬರೋ ದಾರಿಯಲ್ಲಿ ಸೇತುವೆಯ ಮಧ್ಯಭಾಗದಿಂದಲೇ ನಾಪತ್ತೆಯಾಗಿದ್ದಾರೆ. ಘಟನೆಯ ವೇಳೆ ಮಳೆ ಸುರಿಯುತ್ತಿದ್ದದ್ದರಿಂದ ಸಿದ್ದಾರ್ಥ ಉದ್ದಕ್ಕೆ ಮಾತಾಡಿಕೊಂಡು ಯಾವ ಕಡೆ ತೆರಳಿದ್ದಾರೆಂದು ಅವರ ಇನ್ನೋವಾ ಚಾಲಕನಿಗೂ ಮಾಹಿತಿ ದೊರೆತಿರಲಿಲ್ಲ ಎಂದು ತಿಳಿದು ಬಂದಿದೆ.

ಏತನ್ಮಧ್ಯೆ ಸಿದ್ಧಾರ್ಥ ಎರಡು ದಿನಗಳ ಹಿಂದೆ ನೌಕರರಿಗೆ, ಆಡಳಿತ ಮಂಡಳಿ ನಿರ್ದೇಶಕರಿಗೆ ಬರೆದಿರುವ ಪತ್ರ ಲಭಿಸಿದ್ದು, ಪತ್ರದಲ್ಲಿ ಹಲವಾರು ಅಂಶಗಳನ್ನು ಬಿಚ್ಚಿಟ್ಟಿದ್ದಾರೆ.

ಪತ್ರದ ಸಾರಂಶ:

37 ವರ್ಷಗಳ ಕಾಲ ಕಂಪನಿಯ ಯಶಸ್ವಿಗಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಕಾಫಿ ಡೇ ಮೂಲಕ 30 ಸಾವಿರ ಜನರಿಗೆ ಕೆಲಸ ಕೊಟ್ಟಿದ್ದೇನೆ. ಅಷ್ಟೇ ಅಲ್ಲದೆ ನನ್ನ ಐಟಿ ಕಂಪನಿ ಮೂಲಕ 20 ಸಾವಿರ ಜನರಿಗೆ ಕೆಲಸ ಕೊಟ್ಟಿದ್ದೇನೆ. ಆದರೆ ನನ್ನ ಪರಿಶ್ರಮದ ಹೊರತಾಗಿಯೂ ಆ ಎರಡೂ ಕಂಪನಿಗಳು ಲಾಭದಲ್ಲಿ ನಡೆಯಲಿಲ್ಲ. ಆದರೆ ನನ್ನಿಂದ ಯಶಸ್ವಿ ಉದ್ಯಮಿಯಾಗಲು ಸಾಧ್ಯವಾಗಿಲ್ಲ. ನನಗೆ ಅನೇಕ ಕಡೆಯಿಂದ ಒತ್ತಡ ಹೆಚ್ಚಾಗಿದ್ದು, ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಆರು ತಿಂಗಳ ಹಿಂದಷ್ಟೇ ಭಾರೀ ಮೊತ್ತದ ಸಾಲ ಮಾಡಿದ್ದೆ, ಅಲ್ಲದೇ ಇತರ ಸಾಲಗಾರರ ಒತ್ತಡದಿಂದ ನನಗೆ ಈ ಪರಿಸ್ಥಿತಿ ಬಂದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಯಾರಿಗೂ ಮೋಸ ಮಾಡುವ, ದಿಕ್ಕು ತಪ್ಪಿಸುವ ಉದ್ದೇಶ ನನಗಿರಲಿಲ್ಲ. ಆದರೆ ಈಗ ಎಲ್ಲವೂ ನನ್ನ ಕೈ ಮೀರಿ ಹೋಗಿದೆ ಎಂದು ಪತ್ರದಲ್ಲಿದೆ ಸಿದ್ದಾರ್ಥ ತಿಳಿಸಿದ್ದಾರೆ.

ನಾನು ನಿಮ್ಮಲ್ಲಿ ಈ ಮೂಲಕ ವಿನಮ್ರನಾಗಿ ವಿನಂತಿಸಿಕೊಳ್ಳುತ್ತಿದ್ದೇನೆ ನೀವೆಲ್ಲ ಒಗ್ಗಟ್ಟಿನಿಂದ ಇದ್ದು, ನೂತನ ಆಡಳಿತದೊಂದಿಗೆ ಈ ಉದ್ಯಮವನ್ನು ಮುಂದುವರಿಸಿಕೊಂಡು ಹೋಗಬೇಕು. ಈ ಎಲ್ಲಾ ಸಮಸ್ಯೆಗಳಿಗೂ ನಾನೊಬ್ಬನೇ ಹೊಣೆ. ನನ್ನ ಅವಧಿಯಲ್ಲಿನ ಎಲ್ಲಾ ವಹಿವಾಟಿಗೂ ನಾನೇ ಜವಾಬ್ದಾರನಾಗಿದ್ದೇನೆ. ನನ್ನ ಕಂಪನಿಯ ಆಡಿಟರ್ಸ್ ಮತ್ತು ಸೀನಿಯರ್ ಮ್ಯಾನೇಜ್ ಮೆಂಟ್ ಗಾಗಲಿ, ನನ್ನ ಕುಟುಂಬಸ್ಥರಿಗಾಗಲಿ ನನ್ನ ವ್ಯವಹಾರದ ಬಗ್ಗೆ ಏನೂ ತಿಳಿದಿಲ್ಲ. ಕಾನೂನು ನನ್ನ ಕೈ ಕಟ್ಟಿಹಾಕಿದೆ. ಇದಕ್ಕೆ ನಾನೊಬ್ಬನೇ ಹೊಣೆಗಾರ. ನನ್ನ ಉದ್ದಿಮೆಯನ್ನು ಲಾಭದಾಯಕವಾಗಿ ಮಾಡಲು ಎಲ್ಲಾ ಬಾಗಿಲುಗಳು ಮುಚ್ಚಿವೆ. ಹೀಗಾಗಿ ನಾನು ಕಂಪನಿ ನಡೆಸುವುದರಲ್ಲಿ ವಿಫಲನಾದೆ. ಇದು ನನ್ನ ಪರಿಸ್ಥಿತಿಯಾಗಿದೆ. ಒಂದಲ್ಲಾ ಒಂದು ದಿನ ನೀವು ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತೀರಿ ಮತ್ತು ನನ್ನ ಕ್ಷಮಿಸುತ್ತೀರಿ. ಈ ಮೂಲಕ ನನ್ನೆಲ್ಲಾ ನೋವವನ್ನು ತೋಡಿಕೊಂಡಿದ್ದೇನೆ ಎಂದು ಪತ್ರದಲ್ಲಿ ಸಿದ್ದಾರ್ಥ ವಿವರಿಸಿದ್ದಾರೆ.

ಹಿಂದಿನ ಆದಾಯ ತೆರಿಗೆ ಇಲಾಖೆ ಡಿಜಿಯಿಂದ ಕಿರುಕುಳ ಅನುಭವಿಸಿದ್ದೇನೆ. ನನಗೆ ಎಷ್ಟೇ ತೊಂದರೆಯಾಗಿದ್ದರು, ಒತ್ತಡದ ನಡುವೆಯೂ ಐಟಿ ರಿಟರ್ನ್ಸ್ ಸಲ್ಲಿಸಿದ್ದೇನೆ. ಐಟಿ ಡಿಜಿ ಎರಡು ಬಾರಿ ನನ್ನ ಕಂಪನಿಯ ಷೇರುಗಳನ್ನು ಜಪ್ತಿ ಮಾಡಿದ್ದರು. ಇದರಿಂದಾಗಿ ನಾನು ಮತ್ತಷ್ಟು ಸಾಲಗಾರನಾಗಬೇಕಾಯಿತು. ನನ್ನ ಐಟಿ ಕಂಪನಿ ಮೂಲಕ 20 ಸಾವಿರ ಜನರಿಗೆ ಕೆಲಸ ಕೊಟ್ಟಿದ್ದೇನೆ. ಈಗ ಒತ್ತಡ ನನ್ನಿಂದ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Comments are closed.