ಉಡುಪಿ: ಉಡುಪಿ-ಮಣಿಪಾಲ ರಸ್ತೆ ಸಮೀಪ, ಇಂದ್ರಾಳಿ ರೈಲ್ವೇ ಸೇತುವೆ ಬಳಿ ಇರುವ ಹಿರೋ ದ್ವಿಚಕ್ರ ವಾಹನದ ಶೋರೂಂ ಇರುವ ಕಟ್ಟಡದಲ್ಲಿ ಬೆಂಕಿ ದುರಂತ ಸಂಭವಿಸಿದ ಘಟನೆ ಭಾನುವಾರ ತಡ ರಾತ್ರಿ ನಡೆದಿದೆ.
ಜಯದೇವ ಮೋಟಾರು, ಜಿಮ್, ಸೇರಿದಂತೆ ವಿವಿಧ ವಾಣಿಜ್ಯ ಸಂಕೀರ್ಣಗಳುಳ್ಳ ಮೂರು ಮಹಡಿಗಳ ಕಟ್ಟಡ ಇದಾಗಿದ್ದು ಭಾನುವಾರ ರಾತ್ರಿ ಈ ಕಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ನೋಡನೋಡುತ್ತಿದ್ದಂತೆಯೇ ಬೆಂಕಿ ಸಂಪೂರ್ಣ ಕಟ್ಟಡವನ್ನು ವ್ಯಾಪಿಸಿ ಧಗಧಗನೆ ಕಟ್ಟಡ ಹೊತ್ತಿ ಉರಿಯಲು ಆರಂಭಿಸಿದೆ. ಬೆಂಕಿ ಬಿದ್ದ ಕಟ್ಟಡದ ಪಕ್ಕದಲ್ಲಿ ಪೆಟ್ರೋಲ್ ಪಂಪ್ ಇದ್ದಿದ್ದು ಭೀತಿ ಎದುರಾಗಿತ್ತು. ಅಗ್ನಿಶಾಮಕದಳ ಸಿಬ್ಬಂದಿಗಳು ಪೆಟ್ರೋಲ್ ಬಂಕ್ ಸ್ಥಗಿತಗೊಳಿಸಿ ಬಹಳಷ್ಟು ಮುನ್ನೆಚ್ಚರಿಕಾ ಕ್ರಮಕೈಗೊಂಡರು.
ಸ್ಥಳಕ್ಕೆ ದೌಡಾಯಿಸಿದ ಎರಡು ಅಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ಶ್ರಮಿಸಿದ್ದು ಅಷ್ಟೋತ್ತಿಗಾಗಲೇ ಭಾಗಶಃ ಕಟ್ಟಡ ಬೆಂಕಿಗಾಹುತಿಯಾಗಿತ್ತು. ಹಲವಾರು ಬೈಕ್ ಬೆಂಕಿಗಾಹುತಿಯಾಗಿದ್ದು ಲಕ್ಷಾಂತರ ನಷ್ಟ ಸಂಭವಿಸಿದೆ ಎನ್ನಲಾಗುತ್ತಿದ್ದು ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ಬೆಂಕಿ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆಯಾದರೂ ನಿಖರ ಕಾರಣ ತಿಳಿದಿಲ್ಲ.
Comments are closed.