ಕರಾವಳಿ

ಮೋದೀಜಿ ಮತ್ತೆ ಪ್ರಧಾನಿಯಾಗುವ ವಿಶ್ವಾಸ : ಮೇ.24ರಂದು ಮಂಗಳೂರಿನಲ್ಲಿ ಕಟೀಲು ದೇವಿಗೆ ಹರಕೆಯ ಯಕ್ಷಗಾನ ಬುಕ್ಕಿಂಗ್

Pinterest LinkedIn Tumblr

 

ಮಂಗಳೂರು: ದೇಶದಲ್ಲಿ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆಂಬ ವಿಶ್ವಾಸದಲ್ಲಿ ಫಲಿತಾಂಶ ಪ್ರಕಟವಾಗುವ ಮುನ್ನವೇ ವಿಜಯ ಸಂಕಲ್ಪ ಈಡೇರಿದ ಸಂಭ್ರಮಾಚರಣೆಗೆ ಯಕ್ಷಗಾನ ಬುಕ್ಕಿಂಗ್‌ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ದೇಶಾದ್ಯಂತ ಲೋಕಸಭಾ ಚುನಾವಣೆ ಕಾವೇರಿದ್ದು,ಎಲ್ಲಾ ಹಂತದ ಚುನಾವಣೆ ಮುಗಿದಿದೆ. ದೇಶದ ಜನತೆ ಚುನಾವಣಾ ಫಲಿತಾಂಶಕ್ಕೆ ನಿರೀಕ್ಷೆಯಿಂದ ಕಾಯುತ್ತಿದ್ದಾರೆ.

ಆದರೆ ಈತನ್ಮಧ್ಯೆ ಮಂಗಳೂರಿನಲ್ಲಿ ‘ನಮೋ ಎಗೈನ್‌, ನಮೋ ಫಿರ್‌ಸೇ, ಟೀಮ್‌ಮೋದಿ, ನಮೋ ಮಿಷನ್‌400 ಪ್ಲಸ್‌’ ಟೀಮ್‌ ದೇಶಾದ್ಯಂತ ಬಿಜೆಪಿ ಜಯಭೇರಿ ಬಾರಿಸಿ ಬಹುಮತದೊಂದಿಗೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆಂಬ ವಿಶ್ವಾಸದಲ್ಲಿ ವಿಜಯ ಸಂಕಲ್ಪ ಯಕ್ಷಗಾನ ಬುಕ್ಕಿಂಗ್‌ ಮಾಡಿದೆ.

ನಮೋ ಎಗೈನ್‌ ತಂಡದ ಮುಖ್ಯಸ್ಥ ನರೇಶ್‌ ಶೆಣೈ ಈ ಬಗ್ಗೆ ಮಾತನಾಡಿ, ದೇಶದಲ್ಲಿ ಬಿಜೆಪಿ ಅಲೆಯಿರುವುದು ಸ್ಪಷ್ಟವಾಗಿದೆ. ದೇಶದಲ್ಲಿ ಬಿಜೆಪಿ ಜಯಭೇರಿ ಬಾರಿಸಿ ಮೋದಿ ಪ್ರಧಾನಿಯಾಗಬೇಕೆಂಬ ಅಭಿಲಾಷೆಯಿಂದ ಕಟೀಲು ದೇವಿಗೆ ಯಕ್ಷಗಾನ ಹರಕೆ ಹೇಳಿದ್ದೇವೆ. ಕಟೀಲು ಮಾತೆಯ ಅನುಗ್ರಹದಿಂದ ಮೋದೀಜಿ ಮತ್ತೆ ಪ್ರಧಾನಿಯಾಗುವ ಎಲ್ಲ ವಿಶ್ವಾಸ ವ್ಯಕ್ತವಾಗಿದೆ. ಅದಕ್ಕಾಗಿ ಈ ವರ್ಷವೇ ಯಕ್ಷಗಾನ ನಡೆಸುವ ಉದ್ದೇಶದಿಂದ ಫಲಿತಾಂಶದ ಮರುದಿನವೇ ಯಕ್ಷಗಾನ ನಡೆಸುವ ಉದ್ದೇಶದಿಂದ ಮುಂಚಿತವಾಗಿಯೇ ಯಕ್ಷಗಾನ ಬುಕ್ಕಿಂಗ್‌ ಮಾಡಲಾಗಿದೆ ಎಂದು ಹೇಳಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ಮೇಳದಿಂದ ಮೇ 24ರ ಶುಕ್ರವಾರ ರಾತ್ರಿ 8.30ರಿಂದ ಮಂಗಳೂರಿನ ರಥಬೀದಿಯಲ್ಲಿ “ಶ್ರೀ ದೇವಿ ಮಹಾತ್ಮ್ಯಂ” ಎಂಬ ಪುಣ್ಯ ಕಥಾ ಪ್ರಸಂಗ ನಡೆಯಲಿದೆ. ಚೌಕಿ ಪೂಜೆಯ ಬಳಿಕ ಅನ್ನಪ್ರಸಾದವೂ ನಡೆಯಲಿದೆ ಎಂದು ಆಮಂತ್ರಣ ಮುದ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ.

Comments are closed.