ಮಂಗಳೂರು : ಆಟವಾಡುತ್ತಿದ್ದ ಇಬ್ಬರು ಪುಟ್ಟ ಮಕ್ಕಳಿಗೆ ಕ್ಷುಲ್ಲಕ ಕಾರಣವನ್ನು ಮುಂದಿಟ್ಟುಕೊಂಡು ನೆರೆಮನೆಯ ವ್ಯಕ್ತಿಯೊಬ್ಬ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಆಘಾತಕಾರಿ ಘಟನೆ ಶಕ್ತಿನಗರದ ಪ್ರೀತಿ ನಗರದಲ್ಲಿ ಶನಿವಾರ ನಡೆದಿದೆ.
ಮಕ್ಕಳು ಅಡುವಾಗ ತನಗೆ ಕಿರಿಕಿರಿಯಾಗುತ್ತಿದೆ ಎಂದು ಕುಡಿದ ಮತ್ತಿನಲ್ಲಿ ಆರೋಪಿ ಶಕ್ತಿನಗರ ನಿವಾಸಿ ದೇವರಾಜು ಯಾನೆ ಅಣ್ಣು (40) ಎಂಬಾತ ನೆರೆಮನೆಯ ಪುಟ್ಟ ಮಕ್ಕಳಿಗೆ ಚೂರಿಯಿಂದ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯಿಂದ ಗಾಯಗೊಂಡಿರುವ ಹಾರ್ದಿಕ್ (4) ಮತ್ತು ಚಿರಾಗ್ (9) ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ (ಮೇ 05) ಸಂಜೆ ಚಿರಾಗ್ ಹಾಗೂ ಹಾರ್ದಿಕ್ ಇತರೆ ಮಕ್ಕಳ ಜೊತೆ ನೆರೆಮನೆಯಲ್ಲಿ ಆಡುತ್ತಿದ್ದಾಗ ಆರೋಪಿ ದೇವರಾಜು ಚಾಕುವಿನಿಂದ ಹಲ್ಲೆಗೈದು ಓಡಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಶಾಲೆಗೆ ರಜೆ ಇರುವ ಕಾರಣ ಸಹೋದರರಾದ ಹಾರ್ದಿಕ್ ಮತ್ತು ಚಿರಾಗ್ ಸ್ನೇಹಿತರೊಂದಿಗೆ ಮನೆಯ ಎದುರು ಆಡುತ್ತಿದ್ದರು. ಆಗ ತನಗೆ ಕಿರಿಕಿರಿಯಾಗುತ್ತಿದೆ ಎಂದು ಹೇಳಿ ದೇವರಾಜು ಚೂರಿ ಹಿಡಿದುಕೊಂಡು ಮಕ್ಕಳ ಮೇಲೆ ಹಲ್ಲೆಗೆ ಮುಂದಾದ. ಆಗ ಕೆಲವು ಮಕ್ಕಳು ಓಡಿ ಹೋದರು. ಈ ಸಂದರ್ಭ ಕೈಗೆ ಸಿಕ್ಕ ಹಾರ್ದಿಕ್, ಚಿರಾಗ್ಗೆ ಆರೋಪಿ ಚೂರಿಯಿಂದ ಇರಿದಿದ್ದು, ಮಕ್ಕಳ ಕೈ, ತಲೆ ಹಾಗೂ ಮುಖಕ್ಕೆ ಗಾಯವಾಗಿದೆ.
ಬೊಬ್ಬೆ ಧಾವಿಸಿ ಬಂದ ಪೋಷಕರು ಹಾಗೂ ಸ್ಥಳೀಯರು ಕೂಡಲೇ ಮಕ್ಕಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಕಂಕನಾಡಿ ಪೊಲೀಸರು ರವಿವಾರ ಬೆಳಗ್ಗೆ ಆರೋಪಿಯನ್ನು ಬಂಧಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Comments are closed.