ಕರಾವಳಿ

ಮಂಗಳೂರಿನಲ್ಲಿ ಮಾಧ್ಯಮದವರನ್ನು ಕಂಡು ಮುಖತಿರುಗಿಸಿ ಹೊರಟ ಕುಮಾರಸ್ವಾಮಿ

Pinterest LinkedIn Tumblr

(ಕಡತ ಚಿತ್ರ)

ಮಂಗಳೂರು, ಎಪ್ರಿಲ್ .29: ರಾಜ್ಯ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾದ ನಂತರ ಹೆಚ್ ಡಿ ಕುಮಾರಸ್ವಾಮಿಯವರಿಗೆ ಮಾಧ್ಯಮದವರ ಜೊತೆ ವಿಪರೀತ ಕೋಪ ಬಂದ ಹಾಗೆ ಕಾಣುತ್ತಿದೆ. ತಮ್ಮ ಬಗ್ಗೆ ಇಲ್ಲಸಲ್ಲದ ಆರೋಪ, ಅಪಪ್ರಚಾರವನ್ನು ಮಾಧ್ಯಮಗಳು ಮಾಡುತ್ತವೆ ಎಂಬ ಅಸಮಾಧಾನ ತೋಡಿಕೊಂಡಿರಿವ ಕುಮಾರಸ್ವಾಮಿಯವರಿಗೆ ಸುದ್ದಿವಾಹಿನಿಗಳ ಮೇಲೆ ವಿರಕ್ತಿ ಮೂಡಿದೆ ಎಂದೇ ಹೇಳ ಬಹುದು.

ಅದರಲ್ಲೂ ದ.ಕ.ಹಾಗೂ ಉಡುಪಿ ಜಿಲ್ಲೆಯ ಮಾಧ್ಯಮದವರನ್ನು ಕೋಪ ಸ್ವಲ್ಪ ಜಾಸ್ತಿಯೇ ಇದೆ ಎಂಬಂತೆ ವರ್ತಿಸುತ್ತಿದ್ದಾರೆ ಮುಖ್ಯಮಂತ್ರಿಗಳು. ಇದಕ್ಕೆ ಪೂರಕವೆಂಬಂತೆ ನಿನ್ನೆ ರಾತ್ರಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಉಡುಪಿಗೆ ತೆರಳಲೆಂದು ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಧ್ಯಮದವರ ಜತೆ ಮಾತನಾಡದೇ ಮುಖ ತಿರುಗಿಸಿಕೊಂಡು ನೇರವಾಗಿ ಕಾರನ್ನೇರಿ ಹೊರಟು ಹೋಗಿದ್ದಾರೆ.

ರಾತ್ರಿ 9:30ರ ಸುಮಾರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜೊತೆ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಮಾಧ್ಯಮದವರು ಎದುರುಗೊಳ್ಳುತ್ತಿದ್ದಂತೆ ಕಂಡು ಕಾಣದಂತೆ ಕಾರು ಹತ್ತಿ ಉಡುಪಿಯತ್ತ ಪಯಣ ಬೆಳೆಸಿದ್ದಾರೆ.

ಉಡುಪಿಯಲ್ಲಿ ಮಾಜಿ ಶಾಸಕ ಗೋಪಾಲ ಪೂಜಾರಿಯವರ ಪುತ್ರಿ ವಿವಾಹ ಸಮಾರಂಭದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಉಡುಪಿಗೆ ಆಗಮಿಸಿದ್ದರು. ಬಳಿಕ ಕುಮಾರಸ್ವಾಮಿ ಕಾಪುವಿನಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯಲು ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಬಾರಿ ಮಂಗಳೂರಿಗೆ ಬಂದಾಗಲೂ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಕುಮಾರ ಸ್ವಾಮಿ ಅವರು ಮಾಧ್ಯಮದವರ ವಿರುದ್ಧವೇ ವಾಕ್ಸಮರ ನಡೆಸಿ ತೆರಳಿದ್ದರು.

Comments are closed.