ಕರಾವಳಿ

ಕುತ್ತಾರ್ ಕಲ್ಲು ತೂರಾಟ ಹಾಗೂ ಘರ್ಷಣೆ ಪ್ರಕರಣ : ಏಳು ಮಂದಿಯ ಬಂಧನ

Pinterest LinkedIn Tumblr

ಮೋದಿಯವರ ರ‍್ಯಾಲಿಯಿಂದ ವಾಪಸಾಗುತ್ತಿದ್ದ ವಾಹನಗಳ ಮೇಲಿನ ಕಲ್ಲು ತೂರಾಟ ಹಾಗೂ ಘರ್ಷಣೆ ಪ್ರಕರಣ : ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಕೊಣಾಜೆ ಠಾಣೆಗೆ ಮುತ್ತಿಗೆ ಹಾಕಿದ ಬಿಜೆಪಿ ಕಾರ್ಯಕರ್ತರು

ಮಂಗಳೂರು / ಉಳ್ಳಾಲ: ಮಂಗಳೂರಿನ ಕೇಂದ್ರ ಮೈದಾನದಲ್ಲಿ ಶನಿವಾರ ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರ‍್ಯಾಲಿಯಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದ ವಾಹನಗಳ ಮೇಲೆ ಳ್ಳಾಲ ಪೊಲೀಸ್‌ ಠಾಣೆ ವ್ಯಾಪ್ತಿಯ ಕುತ್ತಾರು ಮದನಿ ನಗರದ ಬಳಿ ನಡೆದ ಕಲ್ಲು ತೂರಾಟ ಪ್ರಕರಣ ಹಾಗೂ ಬಳಿಕ ನಡೆದ ಗುಂಪು ಘರ್ಷಣೆಗೆ ಸಂಬಂಧಿಸಿ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ಘಟನೆ ಸಂಬಂಧಿಸಿ ಸಿಸಿಟಿವಿ ದಾಖಲೆಗಳನ್ನು ಪರಿಶೀಲಿಸಿ ಮತ್ತಷ್ಟು ಮಂದಿಯನ್ನು ಬಂಧಿಸಲು ಪೊಲೀಸರು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.

ಘಟನೆಯ ವಿವರ :

ಮಂಗಳೂರಿನಲ್ಲಿ ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರ‍್ಯಾಲಿಯಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದ ವಾಹನವೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದುದನ್ನೇ ನೆಪವಾಗಿಟ್ಟು ಕೊಂಡು ಉಳ್ಳಾಲ ಪೊಲೀಸ್‌ ಠಾಣೆ ವ್ಯಾಪ್ತಿಯ ಕುತ್ತಾರು ಮದನಿ ನಗರದ ಬಳಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಎರಡು ಬಸ್‌ಗಳು, ಕಾರುಗಳಿಗೆ ಹಾನಿಯಾ ಗಿದೆ. ಇತ್ತಂಡಗಳ ಹೊಡೆದಾಟದಲ್ಲಿ ಮಹಿಳೆ ಸೇರಿದಂತೆ ಐವರು ಗಾಯಗೊಂಡಿದ್ದಾರೆ.

ಮಂಗಳೂರಿನ ರ‍್ಯಾಲಿಯನ್ನು ಮುಗಿಸಿ ಸಂಜೆ 6 ಗಂಟೆ ಸುಮಾರಿಗೆ ಕೊಣಾಜೆ, ನಡುಪದವು, ಕಡೆ ಸಾಗುತ್ತಿದ್ದ ಬಸ್‌ಗಳಿಗೆ ದುಷ್ಕರ್ಮಿಗಳು ಕಲ್ಲು ತೂರಿದ್ದೂ ಅಲ್ಲದೆ ಕಾರಿನಲ್ಲಿ ಬರುತ್ತಿದ್ದ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಥಳಿಸಿದ್ದರಿಂದ ಅವರು ಗಾಯಗೊಂಡು ಆಸ್ಪತ್ರೆಗೆ ದಾಖ ಲಾದರು. ಕುಂಪಲ ನಿವಾಸಿಗಳಾದ ಸುಜನ್‌, ನಹುಶ ಅವರು ಗಾಯಾಳುಗಳು.ಕಲ್ಲು ತೂರಾಟ ಮತ್ತು ಹಲ್ಲೆ ಯಿಂದ ಮದನಿನಗರ ನಿವಾಸಿಗಳಾದ ಸಂಶೀರ್‌, ಮಹಮ್ಮದ್‌ ಅಜ್ಮಲ್‌ ಗಾಯಗೊಂಡಿದ್ದಾರೆ.

ರ‍್ಯಾಲಿಯಿಂದ ಮರಳುತ್ತಿದ್ದ ಬಿಜೆಪಿ ಕಾರ್ಯಕರ್ತರಿದ್ದ ಕಾರು ಮತ್ತು ಇನ್ನೊಂದು ಸಮುದಾಯದ ಮಹಿಳೆ ಸಾಗುತ್ತಿದ್ದ ಸ್ಕೂಟರ್‌ ನಡುವೆ ಮದನಿ ನಗರದ ಬಳಿ ಅಪಘಾತ ಸಂಭವಿಸಿದ್ದು, ಸ್ಥಳೀಯರು ಮತ್ತು ಕಾರಿನಲ್ಲಿದ್ದವರ ನಡುವೆ ಮಾತಿನ ಚಕಮಕಿ ನಡೆಯಿತು. ಇದೇ ವೇಳೆ ರ್ಯಾಲಿಯಿಂದ ವಾಪಸಾಗುತ್ತಿದ್ದ ಬಸ್‌ ಕೂಡ ಸ್ಥಳಕ್ಕೆ ತಲುಪಿದ್ದು, ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದು ಹೊಡೆದಾಟಕ್ಕೆ ತಿರುಗಿತು. ಕಾರಿನಲ್ಲಿದ್ದವರಿಗೆ ಸ್ಥಳೀಯರು ಥಳಿಸಿ ಕಾರನ್ನು ಪುಡಿಗೈದರು.

ಎರಡೂ ತಂಡಗಳ ನಡುವೆ ಹೊಡೆದಾಟ ನಡೆಯುತ್ತಿದ್ದಂತೆ ರ‍್ಯಾಲಿಯಿಂದ ಬರುತ್ತಿದ್ದ ಬಸ್‌ಗಳ ಒಳಗೆ ನುಗ್ಗಿದ ದುಷ್ಕರ್ಮಿಗಳು ಬಸ್‌ಗಳಲ್ಲಿದ್ದ ಕಾರ್ಯಕರ್ತರನ್ನು ಹೊರಗೆ ಎಳೆದು ಹಲ್ಲೆಗೈದರು. ಒಂದು ಬಸ್ಸಿನಲ್ಲಿದ್ದ ಮಹಿಳಾ ಕಾರ್ಯಕರ್ತರನ್ನು ಎಳೆದಾಡಿದ್ದು ಓರ್ವ ಮಹಿಳೆ ಗಾಯಗೊಂಡರು. ಸುಮಾರು 15 ನಿಮಿಷ ಕಾಲ ಕಲ್ಲು ತೂರಾಟ, ದೊಣ್ಣೆಯಿಂದ ಹೊಡೆದಾಟ ಮುಂದುವರಿದಿತ್ತು.

ಈ ಸಂದರ್ಭ ಬಸ್ಸಿಗೆ ನುಗ್ಗಿ ಮಹಿಳೆಯರನ್ನು ಎಳೆದಾಡಿದ ಘಟನೆಗೆ ಸಂಬಂಧಿಸಿ ಆರೋಪಿಗಳನ್ನು ತತ್‌ಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿ ಸಾವಿರಕ್ಕೂ ಮಿಕ್ಕಿ ಬಿಜೆಪಿ ಕಾರ್ಯಕರ್ತರು ಕೊಣಾಜೆ ಪೊಲೀಸ್‌ ಠಾಣೆಯ ಎದುರು ತಡರಾತ್ರಿವರೆಗೆ ಪ್ರತಿಭಟನೆ ನಡೆಸಿದ್ದರು.
ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಮದನಿ ನಗರದಲ್ಲಿ ಘಟನೆ ನಡೆದರೂ ಕಾರ್ಯಕರ್ತರು ನೇರವಾಗಿ ವಾಹನಗಳನ್ನು ಕೊಣಾಜೆ ಪೊಲೀಸ್‌ ಠಾಣೆಯ ಎದುರು ನಿಲ್ಲಿಸಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.

ಕೊಣಾಜೆ, ಮುಡಿಪು, ನಡುಪದವು, ಹರೇಕಳ, ಪಾವೂರು, ಫಜೀರು, ಬೋಳಿಯಾರು, ಸಜಿಪ, ಇರಾ, ಬಾಳೆಪುಣಿ ಮೊದಲಾದೆಡೆಗಳಿಂದ ಬಂದಿದ್ದ ಸುಮಾರು 15ಕ್ಕೂ ಹೆಚ್ಚು ಬಸ್‌ಗಳು, ನೂರಾರು ಇತರ ವಾಹನಗಳು ಮತ್ತು ಸಾವಿರಕ್ಕೂ ಅಧಿಕ ಸಾರ್ವಜನಿಕರು ಠಾಣೆಯೆದುರು ಜಮಾಯಿಸಿದ್ದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ಅವರು, ಮಹಿಳೆಯರ ಮೇಲಿನ ದೌರ್ಜನ್ಯ ಖಂಡನೀಯ. ಕುತ್ತಾರು ಪ್ರದೇಶದಲ್ಲಿ ಸಿಸಿಟಿವಿ ದಾಖಲೆಗಳನ್ನು ಪಡೆಯಲು ಸೂಚಿಸಲಾಗಿದೆ. ದಾಳಿಗೊಳಗಾದ ಮಹಿಳೆಯರ ಮಾಹಿತಿ ಪಡೆದುಕೊಳ್ಳಲಾಗಿದೆ. ಇಬ್ಬರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮೂವರು ಇನ್ಸ್‌ ಪೆಕ್ಟರ್‌ಗಳು ಮತ್ತು 20 ಸಿಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಆರೋಪಿಗಳ ವಿರುದ್ಧ ಕಠಿನ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸುತ್ತೇವೆ ಎಂದು ಹೇಳಿದ್ದಾರೆ.. ಸುಮಾರು 10.30ರ ವರೆಗೆ ಠಾಣೆಯೆದುರು ಪ್ರತಿಭಟನೆ ನಡೆಯಿತು. ತಡರಾತ್ರಿಯೇ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತೇವೆ ಎಂದ ಕಮಿಷನರ್ ಹೇಳಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಗಿತ್ತು.

Comments are closed.