ಕರಾವಳಿ

ಉಡುಪಿ: ಬಾಲಕಿ ಮೇಲಿನ ಅತ್ಯಾಚಾರ; ಅಪರಾಧಿಗೆ 27 ವರ್ಷ ಜೈಲು

Pinterest LinkedIn Tumblr

ಉಡುಪಿ: ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಉಡುಪಿ ಸಮೀಪದ ಪೆರಂಪಳ್ಳಿಯ ಅರುಣ ಆಚಾರಿ(32)ಗೆ ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯ 27 ವರ್ಷ ಕಠಿಣ ಸಜೆ ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.

ಅರುಣ ಆಚಾರಿ 2016ರ ಜು.16ರಂದು ಬೆಳಗ್ಗೆ 8.30ರ ವೇಳೆಗೆ ಶಾಲೆಗೆ ಹೊರಟಿದ್ದ ಮಂದ ಬುದ್ಧಿಯ ಬಾಲಕಿಯನ್ನು ಅಪಹರಿಸಿ ಮಣಿಪಾಲದ ಎರಡು ಲಾಡ್ಜ್ ಗಳಿಗೆ ಕರೆದೊಯ್ದಿದ್ದ. ಅಲ್ಲಿ ರೂಮ್‌ ಸಿಗದಿದ್ದಾಗ ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಂದಿನ ಸಿಐ ಗಿರೀಶ್‌ ಎಸ್‌.ವಿ ತನಿಖೆ ನಡೆಸಿದ್ದು, ಬಳಿಕ ವೃತ್ತ ನಿರೀಕ್ಷಕ ಸಂಪತ್‌ ಕುಮಾರ್‌ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಜಿಲ್ಲಾ ವಿಶೇಷ ನ್ಯಾಯಾಲಯದಲ್ಲಿ 30 ಸಾಕ್ಷಿಗಳ ವಿಚಾರಣೆ ನಡೆದಿತ್ತು. ವಾದ ವಿವಾದ ಆಲಿಸಿದ್ದ ಪ್ರಧಾನ ನ್ಯಾಯಾಧೀಶ ಸಿ.ಎಂ.ಜೋಷಿ ಅವರು ಆರೋಪ ಸಾಬೀತಾಗಿರುವುದಾಗಿ ಎ.10ರಂದು ತೀರ್ಪು ನೀಡಿದ್ದರು. ಸರಕಾರದ ಪರವಾಗಿ ಜಿಲ್ಲಾ ವಿಶೇಷ ಸರಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ ವಾದಿಸಿದ್ದರು.

ಅತ್ಯಾಚಾರ(ಲೈಂಗಿಕ ಹಲ್ಲೆ) ಮಾಡಿರುವುದಕ್ಕೆ 10 ವರ್ಷ ಕಠಿಣ ಸಜೆ ಮತ್ತು 30 ಸಾ. ರೂ. ದಂಡ, ಪೋಕ್ಸೋ ಪ್ರಕರಣದಡಿ 10 ವರ್ಷ ಕಠಿಣ ಸಜೆ ಮತ್ತು 50 ಸಾ. ರೂ. ದಂಡ, ಅಪಹರಣ ಪ್ರಕರಣಕ್ಕೆ 7 ವರ್ಷಗಳ ಕಠಿಣ ಸಜೆ ಮತ್ತು 30 ಸಾ. ರೂ. ದಂಡ ವಿಧಿಸಲಾಗಿದೆ. ಅಪಹರಣ ಹೊರತುಪಡಿಸಿ ಉಳಿದೆರಡು ಶಿಕ್ಷೆಗಳನ್ನು ಜತೆಯಾಗಿ ಅನುಭವಿಸಬೇಕು. ಒಟ್ಟು 1.10 ಲ.ರೂ. ದಂಡದಲ್ಲಿ 1 ಲ.ರೂ.ಗಳನ್ನು ಸಂತ್ರಸ್ತ ಬಾಲಕಿಗೆ ನೀಡಬೇಕು. 10 ಸಾ. ರೂ.ಗಳನ್ನು ನ್ಯಾಯಾಲಯದ ವೆಚ್ಚಕ್ಕೆ ಬಳಸಬೇಕು ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.

Comments are closed.