ಕರಾವಳಿ

ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ : ಸಂಚಾರಿ ನಿಯಮ ಪಾಲಿಸದವರ ವಿರುದ್ಧ ಸೂಕ್ತ ಕಾನೂನು ಕ್ರಮದ ಎಚ್ಚರಿಕೆ

Pinterest LinkedIn Tumblr

ಮಂಗಳೂರು, ಮಾರ್ಚ್. 02: ನಂಬರ್ ಪ್ಲೇಟ್ ಅಳವಡಿಸದ ವಾಹನಗಳು, ಕರ್ಕಶ ಹಾರ್ನ್, ನಿಯಮ ಉಲ್ಲಂಗಿಸಿ ಟಿಂಟ್ ಫಿಲಂ ಅಳವಡಿಕೆ, ನೋ ಪಾರ್ಕಿಂಗ್ ವಲಯದಲ್ಲಿ ಪಾರ್ಕಿಂಗ್ ಮಾಡುವುದು ಮುಂತಾದ ಸಂಚಾರಿ ನಿಯಮಗಳನ್ನು ಪಾಲಿಸದವರ ವಿರುದ್ಧ ಮಂಗಳೂರು ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ಆರಂಭಿಸಿದೆ.

ಪೊಲೀಸ್ ಆಯುಕ್ತಾಲಯದಲ್ಲಿ ಶುಕ್ರವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಿ ಮಾತನಾಡಿದ ಮಂಗಳೂರಿನ ನೂತನ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ವಿಶೇಷ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದರು.

ವಾಹನಗಳಿಗೆ ಟಿಂಟ್ ಅಳವಡಿಸುವ ವಿಷಯದಲ್ಲಿ ಸುಪ್ರೀಂ ಕೋರ್ಟು ತೀರ್ಪು ನೀಡಿದ್ದರೂ ಪಾಲನೆಯಾಗುತ್ತಿಲ್ಲ. ನಂಬರ್ ಪ್ಲೇಟ್, ಕರ್ಕಶ ಹಾರ್ನ್, ವಾಹನಗಳ ಪಾರ್ಕಿಂಗ್‌ಗೆ ಸಂಬಂಧಿಸಿ ಮೋಟಾರು ವಾಹನ ಕಾಯ್ದೆಯಡಿ ನಿಯಮಗಳನ್ನು ರೂಪಿಸಲಾಗಿದೆ. ಅದನ್ನೂ ಉಲ್ಲಂಸಲಾಗುತ್ತದೆ. ಇವೆಲ್ಲದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಕೆಲವು ಬಸ್, ಲಾರಿ ಮತ್ತಿತರ ಘನ ವಾಹನಗಳಲ್ಲಿ ಬ್ರೇಕ್‌ಲೈಟ್, ಇಂಡಿಕೇಟರ್ ಉರಿಯುವುದಿಲ್ಲ. ಇದರಿಂದ ಹಿಂದಿನಿಂದ ಬರುವವರಿಗೆ ಯಾವುದೇ ಮುನ್ಸೂಚನೆ ಸಿಗದೆ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ದೂರಿದರು. ಈ ಬಗ್ಗೆ ಗಮನ ವಹಿಸುವಂತೆ ಬಸ್ ಮಾಲಕರ ಸಂಘದ ಅಧ್ಯಕ್ಷರಿಗೆ ಆಯುಕ್ತರು ಸೂಚಿಸಿದರಲ್ಲದೆ ಆರ್‌ಟಿಒ ಗಮನಕ್ಕೂ ತರಲಾಗುವುದು ಎಂದು ಕಮಿಷನರ್ ತಿಳಿಸಿದರು.

ನಗರ ಸಂಚಾರ ಸಮಸ್ಯೆ ನಿವಾರಿಸಲು ಮತ್ತು ತುರ್ತು ಕ್ರಮ ಜರುಗಿಸಲು ಸಾಮಾಜಿಕ ಜಾಲತಾಣವಾದ ಟ್ವಿಟರ್ ಬಳಸಿ. ಇದು ಹೆಚ್ಚು ಪಾರದರ್ಶಕವಾಗಿದೆ. ಬೆಂಗಳೂರು ಮತ್ತಿತರ ಪ್ರಮುಖ ನಗರಗಳಲ್ಲಿ ಈ ವ್ಯವಸ್ಥೆ ಇದೆ. ಮಂಗಳೂರಿನಲ್ಲಿಯೂ ಟ್ವಿಟರ್ ಅಕೌಂಟ್ ವ್ಯವಸ್ಥೆಯನ್ನು ಜನಪ್ರಿಯಗೊಳಿಸಬೇಕು ಎಂದು ಸಂದೀಪ್ ಪಾಟೀಲ್ ಸಲಹೆ ಮಾಡಿದರು.

ಶುಕ್ರವಾರ ನಡೆದ 107ನೇ ಫೋನ್ ಇನ್ ಕಾರ್ಯಕ್ರಮದಲ್ಲಿ 17 ಕರೆಗಳು ಬಂದವು. ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್, ಎಸಿಪಿಗಳಾದ ಮಂಜುನಾಥ್ ಶೆಟ್ಟಿ ಮತ್ತು ವಿನಯ್ ಎ. ಗಾಂವ್‌ಕರ್, ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲಾ, ಗುರುದತ್ ಕಾಮತ್, ಹರೀಶ್ ಕೆ ಪಾಟಿಲ್, ಎಸ್ಸೈ ಶೀತಲ್ ಹಲಗೂಡು, ಎಎಸ್ಸೈ ಯೋಗೇಶ್ವರನ್, ಹೆಚ್‌ಸಿ ಪುರುಷೋತ್ತಮ, ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ರಾಜ ಆಳ್ವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Comments are closed.