ಕರಾವಳಿ

ಮಂಗಳೂರಿನಲ್ಲಿ ಕಾಣಿಸಿಕೊಂಡ ಐಶ್ವರ್ಯಾ ರೈ – ಅಭಿಷೇಕ್‌ ಬಚ್ಚನ್‌

Pinterest LinkedIn Tumblr

ಮಂಗಳೂರು : ಬಾಲಿವುಡ್‌ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಹಾಗೂ ಪತಿ ಅಭಿಷೇಕ್‌ ಬಚ್ಚನ್‌ ಅವರು ರವಿವಾರ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತ್ಯಕ್ಷ ಆಗುವ ಮೂಲಕ ವಿಮಾನ ನಿಲ್ದಾಣದಲ್ಲಿದ್ದವರಿಗೆ ಅಚ್ಚರಿ ಮೂಡಿಸಿದರು.

ಇತ್ತೀಚೆಗೆ ನಿಧನ ಹೊಂದಿದ ತಮ್ಮ ಸಂಬಂಧಿಕರಾದ ಮಂಗಳೂರಿನ ಬಿಜೈ ನಿವಾಸಿ ದೀನನಾಥ ರೈ ಅವರ ಉತ್ತರಕ್ರಿಯೆಯಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಐಶ್ವರ್ಯಾ ಪತಿಯ ಜತೆಗೆ ಮಂಗಳೂರಿಗೆ ಆಗಮಿಸಿದ್ದರು. ರವಿವಾರ ಬೆಳಗ್ಗೆ 10.30ಕ್ಕೆ ಇಂಡಿಗೋ ವಿಮಾನದಲ್ಲಿ ಮುಂಬಯಿಯಿಂದ ಆಗಮಿಸಿದ್ದ ಐಶ್ವರ್ಯ ರೈ ದಂಪತಿಗಳನ್ನು ನೋಡಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದವರಿಗೆ ಪರಮಾಶ್ಚರ್ಯವಾಗಿದೆ.

ಪತಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಅವರನ್ನು ರೈ ಕುಟುಂಬಿಕರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ ಬರಮಾಡಿಕೊಂಡರು. ಬಳಿಕ ತಮ್ಮ ಚಿಕ್ಕಪ್ಪನ ಶ್ರಾದ್ದದಲ್ಲಿ ಭಾಗವಹಿಸಲು ಐಶ್ವರ್ಯ ರೈ ಅವರು ತಮ್ಮ ಪತಿ ಬಾಲಿವುಡ್ ಸ್ಟಾರ್ ಅಭಿಷೇಕ್ ಬಚ್ಚನ್ ಜೊತೆಗೆ ವಿಮಾನ ನಿಲ್ದಾಣದಿಂದ ಕಾರಿನ ಮೂಲಕ ನೇರವಾಗಿ ಶ್ರೀ ಕ್ಷೇತ್ರ ಕದ್ರಿಗೆ ತೆರಳಿದರು.

ಕದ್ರಿಯ ಅಭಿಷೇಕ ಮಂದಿರದಲ್ಲಿ ನಡೆಯುತ್ತಿದ್ದ ಉತ್ತರಕ್ರಿಯೆಯಲ್ಲಿ ಪಾಲ್ಗೊಂಡ ದಂಪತಿ ಸಂಬಂಧಿಕರ ಜತೆಗೆ ಕಾಲ ಕಳೆದರು ಸಂಜೆ ಸುಮಾರು 4ರ ಸುಮಾರಿಗೆ ವಿಮಾನದಲ್ಲಿ ಮುಂಬಯಿಗೆ ವಾಪಸಾದರು. ಆದರೆ ಐಶ್ – ಅಭಿಷೇಕ್ ಬಚ್ಚನ್ ದಂಪತಿಗಳ ಮುದ್ದಿನ ಮಗಳಾದ ಆರಾಧ್ಯ ಮಾತ್ರ ಆಗಮಿಸಿರಲಿಲ್ಲ.

ಐಶ್ವರ್ಯಾ ಅವರು ತನ್ನ ತಂದೆ ಕೃಷ್ಣರಾಜ ರೈ 2017ರಲ್ಲಿ ನಿಧನ ಹೊಂದಿದ್ದ ಸಂದರ್ಭದಲ್ಲಿ ಪಿಂಡ ಪ್ರದಾನಕ್ಕಾಗಿ ಮಂಗಳೂರಿಗೆ ಆಗಮಿಸಿದ್ದರು. ಆಗಲೂ ಕದ್ರಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿಯ ನದಿಯಲ್ಲಿ ಪಿಂಡ ಪ್ರದಾನ ಮಾಡಿದ್ದರು. ಬಳಿಕ ಕಳೆದ ವರ್ಷ ತನ್ನ ತಾಯಿ ಬೃಂದಾ ರೈ ಅವರ ಸೋದರನ ಮಗಳ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಮಗಳು ಆರಾಧ್ಯ ಬಚ್ಚನ್‌ ಜತೆಗೆ ಮಂಗಳೂರಿನ ಟಿಎಂಎ ಪೈ ಸಭಾಂಗಣಕ್ಕೆ ಆಗಮಿಸಿದ್ದರು.

Comments are closed.