ಮಂಗಳೂರು, ಫೆಬ್ರವರಿ.11: ನಗರದ ಬಂಟ್ಸ್ ಹಾಸ್ಟೇಲ್ ಸಮೀಪದ ಕರಂಗಲ್ಪಾಡಿಯ ವಾಣಿಜ್ಯ ಸಂಕೀರ್ಣವೊಂದರಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಮಂಗಳೂರು ಪೂರ್ವ ಠಾಣಾ ಪೊಲೀಸರು ಒಂಬತ್ತು ಮಂದಿ ಆರೋಪಿಗಳನ್ನು ಬಂಧಿಸಿ,ರೂ. 68 ಸಾವಿರ ನಗದು ಸಹಿತಾ 10.93 ಲಕ್ಷ ರೂ. ವೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಕೂಳೂರು ಪಡುಕೋಡಿ ಗ್ರಾಮ ನಿವಾಸಿ ಅಶೋಕ್ ಶೆಟ್ಟಿ(49), ದೇರೆಬೈಲ್ ಪ್ರಶಾಂತ ನಗರ ನಿವಾಸಿ ಆನಂದ(49), ಜಪ್ಪಿನಮೊಗರು ತಂದೋಳಿಗೆ ಗುಡ್ಡೆ ಮನೆ ನಿವಾಸಿ ರಾಜಶೇಖರ ಯಾನೆ ಬೆಂಡ್ ರಾಜ(46), ಮುಲ್ಕಿ ಲಿಂಗಪ್ಪಯ್ಯ ಕಾಡು ನಿವಾಸಿ ತಿಲಕ್ ರಾಜ್(33), ದೇರೆಬೈಲ್ ನಿವಾಸಿ ಶರತ್ ಕುಮಾರ್(37), ಕೊಟ್ಟಾರ ನಿವಾಸಿ ನೀಲಪ್ಪ ಭೀಮಪ್ಪ ಮೇಟಿ(30), ಕುಲಶೇಖರ ನಿವಾಸಿ ಸಾಜಿದ್ಅಹ್ಮದ್(48), ಕರಂಗಲ್ಪಾಡಿ ನಿವಾಸಿ ಜೀವನ್ ಕುಮಾರ್(59) ಹಾಗೂ ಸೂರಜ್ ತಿಮ್ಮಪ್ಪಪೂಜಾರಿ(42) ಎಂದು ಹೆಸರಿಸಲಾಗಿದೆ.
ಬಂಧಿತರಿಂದ 68,140 ರೂ. ನಗದು, 11 ಮೊಬೈಲ್ ಫೋನ್ಗಳು, ಒಂದು ಬಲೇನೋ ಕಾರು, ಎರಡು ಆಯಕ್ಟಿವಾ ಸ್ಕೂಟರ್ ಒಂದು ಕವಾಸಕಿ ಬೈಕ್ ಸಹಿತ ಒಟ್ಟು 10,93,190 ರೂ. ವೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ಕೇಂದ್ರ ಉಪ ವಿಭಾಗದ ಎಸಿಪಿ ಭಾಸ್ಕರ ಒಕ್ಕಲಿಗರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಾರುತಿ ಜಿ. ನಾಯಕ್, ಪೊಲೀಸ್ ಉಪ ನಿರೀಕ್ಷಕ ಮಾರುತಿ ಎಸ್.ವಿ. ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದಾರೆ.
Comments are closed.