ಕರಾವಳಿ

ಕುಂಭಾಸಿ: ಹಲವು ವರ್ಷದಿಂದ ಮುಚ್ಚಿದ್ದ ಶೆಡ್ ತೆರೆದಾಗ ಸಿಕ್ಕಿತು ಮಹಿಳೆಯ ಅಸ್ಥಿಪಂಜರ

Pinterest LinkedIn Tumblr

ಕುಂದಾಪುರ: ಕಳೆದ ಕೆಲವು ವರ್ಷಗಳಿಂದ ಉಪಯೋಗಿಸದ ಜಾಗವೊಂದರಲ್ಲಿದ್ದ ಶೆಡ್‌ನಲ್ಲಿ ಅಸ್ಥಿಪಂಜರ ಸಿಕ್ಕ ಘಟನೆ ಶುಕ್ರವಾರ ಸಂಜೆ ನಡೆದಿದೆ.ಕುಂಭಾಸಿ ರಾಷ್ಟ್ರೀಯ ಹೆದ್ದಾರಿಯ ಮೀನು ಮಾರ್ಕೇಟ್ ಎದುರು ಜಾಗದಲ್ಲಿನ ಶೆಡ್ ಒಳಗೆ ಮಲಗಿದ ಸ್ಥಿತಿಯಲ್ಲಿ ಮಹಿಳೆಯದ್ದು ಎನ್ನಲಾದ ಅಸ್ಥಿಪಂಜರ ಸಿಕ್ಕಿದೆ.

ಉದ್ಯಮಿಯೊಬ್ಬರು ಈ ಜಾಗವನ್ನು ಕ್ರಯ ಮಾಡಿದ್ದು ಕಳೆದ ಕೆಲವು ವರ್ಷಗಳಿಂದ ಈ ಜಾಗ ಉಪಯೋಗಿಸದ ಸ್ಥಿತಿಯಲ್ಲಿದ್ದು ಸುತ್ತಮುತ್ತಲೂ ಪೊದೆ ಬೆಳೆದಿತ್ತು. ಇಲ್ಲೊಂದು ಶೆಡ್ ಕೂಡ ನಿರ್ಮಿಸಿಡಲಾಗಿತ್ತು. ಶುಕ್ರವಾರದಂದು ಈ ಜಾಗವನ್ನು ಸ್ವಚ್ಚಗೊಳಿಸುವ ಸಲುವಾಗಿ ಜೆಸಿಬಿ ಮೂಲಕ ದಾರಿ ಸರಿಪಡಿಸಿ ಪೊದೆಗಳನ್ನು ಶುಚಿಗಳಿಸಲಾಗಿತ್ತು. ಇದೇ ವೇಳೆ ಜಾಗದೊಳಗಿದ್ದ ಬೀಗ ಹಾಕಲಾದ ಶೆಡ್ ತೆಗೆಯುವ ಸಲುವಾಗಿ ಶೆಡ್ ಮೇಲ್ಮಾಡಿನ ಶೀಟ್ ಅನ್ನು ಜೆಸಿಬಿ ಮೂಲಕ ತೆರವು ಮಾಡಿದ್ದು ಈ ವೇಳೆ ಅಸ್ಥಿಪಂಜರ ಕಂಡುಬಂದಿದೆ. ಕೂಡಲೇ ಕೆಲಸಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಕುಂದಾಪುರ ಪೊಲೀಸರು ಭೇಟಿ ನೀಡಿದ್ದರು.

ಪರಿಶೀಲನೆ ವೇಳೆ ಮಹಿಳೆಯ ರವಿಕೆಯಂತಹ ವಸ್ತು ದೊರೆತಿದ್ದು ಇದು ಮಹಿಳೆಯ ಅಸ್ಥಿಪಂಜರ ಎನ್ನಲಾಗಿದೆ. ಮೂಳೆಗಳನ್ನು ಮಣಿಪಾಲ ಫೋರೆನ್ಸಿಕ್ ಲ್ಯಾಬ್‌ಗೆ ಕಳಿಸಲಾಗಿದೆ.

ಮೇಲ್ನೋಟಕ್ಕೆ ಕೆಲವು ವರ್ಷಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು ಒಳಗಡೆಯಿಂದ ಚಿಲಕ ಹಾಕಿದ್ದರಿಂದ ಈ ಘಟನೆ ಕೆಲವು ಅನುಮಾನಗಳಿಗೆ ಕಾರಣವಾಗಿದೆ. ಸದ್ಯ ಪೊಲೀಸರು ಕೆಲವು ವರ್ಷಗಳಿಂಸ ಕಾಣೆಯಾಗಿ ಸಿಕ್ಕಿರದ ವ್ಯಕ್ತಿಗಳ ಮಾಹಿತಿ, ವಿವರಗಳನ್ನು ಕಲೆ ಹಾಕುತ್ತಿದ್ದಾರೆ. ಇನ್ನು ಡಿ.ಎನ್.ಎ. ಪರೀಕ್ಷೆ ಮೂಲಕವೂ ಪತ್ತೆಗೆ ಮುಂದಾಗಿದ್ದಾರೆ.

ಘಟನಾ ಸ್ಥಳಕ್ಕೆ ಕುಂದಾಪುರ ಡಿವೈ‌ಎಸ್ಪಿ ಬಿ.ಪಿ. ದಿನೇಶ್ ಕುಮಾರ್, ಸಿ.ಪಿ.ಐ ಮಂಜಪ್ಪ ಡಿ.ಆರ್., ಕುಂದಾಪುರ ಪಿ‌ಎಸ್‌ಐ ಹರೀಶ್ ಆರ್. ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ಮುಂದುವರಿದಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.