ಕುಂದಾಪುರ: ಲಕ್ಷಾಂತರ ರೂ. ಬೆಲೆಬಾಳುತ್ತದೆಯೆನ್ನಲಾದ ಚಿರತೆ ಚರ್ಮದ ಕ್ರಯ-ವಿಕ್ರಯಕ್ಕಾಗಿ ಕುಂದಾಪುರಕ್ಕೆ ಬಂದ ಹತ್ತು ಮಂದಿ ಆರೋಪಿಗಳನ್ನು ಕಳೆದ ಶುಕ್ರವಾರ ಬಂಧಿಸಿದ್ದು ಈ ಪೈಕಿ 10 ಮಂದಿ ಆರೋಪಿಗಳಿಗೆ ನ್ಯಾಯಾಲಯವು ಶರತ್ತುಬದ್ದ ಜಾಮೀನು ನೀಡಿದೆ.
ಮುಂಡಗೋಡು ಮೂಲದ ಪ್ರಸ್ತುತ ಭಟ್ಕಳ ನಿವಾಸಿ ಸೂರಜ್ ಸಾಮ್ಯುವೆಲ್ (34), ಭಟ್ಕಳದ ರಾಘು (30), ನಾಗರಾಜ ನಾಯ್ಕ್ (25), ಪ್ರವೀಣ್ ರಾಮ ದೇವಾಡಿಗ, ಮೋಹನ್ ಜಿ. ನಾಯ್ಕ್ (24), ಸಂಜೀವ ಪೂಜಾರಿ , ಸುಬ್ರಹ್ಮಣ್ಯ ಸದಾನಂದ ರಾಯ್ಕರ್ (34), ಹೊನ್ನಾವರದ ಜಾನ್ಸನ್ (32), ಬೈಂದೂರಿನ ನಾಗರಾಜ ದೇವಾಡಿಗ (28) ಎನ್ನುವರಿಗೆ ಜಾಮೀನು ಮಂಜೂರಾಗಿದೆ. ಆರೋಪಿಗಳಿಗೆ ಜಾಮೀನು ಕೋರಿ ಈ ಆರೋಪಿಗಳ ಪರ ವಕೀಲರಾದ ಕುಂದಾಪುರದ ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಅರ್ಜಿ ಸಲ್ಲಿಸಿದ್ದು ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕುಂದಾಪುರದಲ್ಲಿನ ಹೆಚ್ಚುವರಿ ಜೆ.ಎಂ.ಎಫ್.ಸಿ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ನೀಡಿದೆ.
(ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್)
ಆರೋಪಿಗಳಲ್ಲಿ ಕೆಲವರು ಭಟ್ಕಳ, ಬೈಂದೂರು ಭಾಗದಿಂದ ಮಾರಾಟಕ್ಕಾಗಿ ಲಕ್ಷಾಂತರ ಬೆಲೆ ಬಾಳುತ್ತದೆನ್ನಲಾದ ಈ ಚಿರತೆ ಚರ್ಮ ತಂದಿದ್ದು ಅದನ್ನು ಖರೀದಿಸಲು ಕೆಲವರು ಬಂದಿದ್ದರು. ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ವ್ಯಾಪಾರದ ಡೀಲ್ ಕುದುರಿಸುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದ ಕುಂದಾಪುರದ ವಲಯ ಅರಣ್ಯಾಧಿಕಾರಿ ಹಾಗೂ ಬೆಂಗಳೂರಿನ ಅರಣ್ಯ ಸಿಐಡಿ ಇನ್ಸ್ಪೆಕ್ಟರ್ ನೇತೃತ್ವದ ತಂಡವು ಆರೋಪಿಗಳನ್ನು ಚಿರತೆ ಚರ್ಮ ಸಹಿತ ಬಂಧಿಸಿದ್ದು 2 ಕಾರುಗಳನ್ನು ವಶಕ್ಕೆ ಪಡೆಯಲಾಗಿತ್ತು. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಷರತ್ತುಬದ್ಧ ಜಾಮೀನು..
ಆರೋಪಿಗಳು ತಿಂಗಳ ಪ್ರತಿ ಎರಡು ಶನಿವಾರ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು, ಸಾಕ್ಷಿಗಳ ಮೇಲೆ ಯಾವುದೇ ಪರಿಣಾಮ ಬೀರಬಾರದೆಂದು ಶರತ್ತು ವಿಧಿಸಲಾಗಿದೆ.
Comments are closed.