ಕರ್ನಾಟಕ

ಮೋದಿ ಹವಾ ನಾಪತ್ತೆಯಾಗಿದೆ, ಜನ ಬಯಸಿದ ಬದಲಾವಣೆಯ ಕಾಲ ಸನ್ನಿಹಿತವಾಗಿದೆ: ಮಾಜಿ ಸಚಿವೆ ಮೋಟಮ್ಮ

Pinterest LinkedIn Tumblr

ಚಿಕ್ಕಮಗಳೂರು/ಮೂಡಿಗೆರೆ: ದೇಶದಲ್ಲಿ ಮೋದಿ ಹವಾ ಈಗ ನಡೆಯುತ್ತಿಲ್ಲ. ಜನ ಎಚ್ಚೆತ್ತುಕೊಂಡಿದ್ದಾರೆ. ಬದಲಾವಣೆ ಬಯಸುತ್ತಿದ್ದಾರೆ. ಸಂಕಷ್ಟಗಳನ್ನು ಎದುರಿಸುತ್ತಿದ್ದ ಜನರಿಗೆ ಈಗ ಅರಿವಾಗಿದೆ. ಸುಳ್ಳು ಮಾರಾಟವಾಗವುದಿಲ್ಲ ಎಂಬುದು ಬಿಜೆಪಿಗೂ ಗೊತ್ತಾಗಿದೆ ಎಂದು ಮಾಜಿ ಸಚಿವೆ ಮೋಟಮ್ಮ ಅವರು ಹೇಳಿದ್ದಾರೆ.

ಮೂಡಿಗೆರೆಯಲ್ಲಿ ನಡೆದ ಕಾಂಗ್ರೆಸ್‌ ಪ್ರಚಾರದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ನೀಡಿರುವ ಗ್ಯಾರೆಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡುತ್ತಿರುವ ಬಿಜೆಪಿಯೇ ಈಗ ಗ್ಯಾರೆಂಟಿ ಯೋಜನೆಗಳನ್ನು ನಕಲು ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸುಳ್ಳಿನ ಸರಕುಗಳು ಈಗ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿಲ್ಲ. ಜನರು ಪ್ರಶ್ನೆ ಮಾಡಲು ಆರಂಭಿಸಿದ್ದಾರೆ. ಯೋಚಿಸಲು ಆರಂಭಿಸಿದ್ದಾರೆ. ರೈತರ ಸಾಲಮನ್ನ ಮಾಡಿದರೆ ಸರಕಾರ ದೀವಾಳಿಯಾಗುತ್ತದೆ ಎನ್ನುವ ಬಿಜೆಪಿಗರು ಕಾರ್ಪೋರೆಟ್‌ ಕುಳಗಳ 11 ಲಕ್ಷ ಕೋಟಿ ಸಾಲ ಮನ್ನ ಮಾಡಿರುವುದರೆ ದೇಶ ದೀವಾಳಿ ಆಗುವುದಿಲ್ಲವೇ? ಎಂದು ಪ್ರಶ್ನಿಸಿದರು.

ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಗ್ಯಾರೆಂಟ್‌ ಯೋಜನೆ ಪಡೆದರೆ ಮಹಿಳೆಯರು ಹಾದಿ ತಪ್ಪುತ್ತಾರೆ ಎಂದಿದ್ದಾರೆ, ಇದು ಅತ್ಯಂತ ನಾಚಿಕೆಗೇಡಿನ ಸಂಗತಿ, ಇದು ರಾಜ್ಯದ ಮಹಿಳೆಯರಿಗೆ ಮಾಡಿದ ಅವಮಾನ, ನಮ್ಮ ರಾಜ್ಯದ ಮಹಿಳೆಯರು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಹುಂಡಿಗೂ ಹಣ ಹಾಕಿದ್ದಾರೆ, ಇದರಿಂದ ಅವರ ಮನಸ್ಸಿಗೂ ನೆಮ್ಮದಿ ಸಿಕ್ಕಿದೆ. ಕುಮಾರ ಸ್ವಾಮಿಯ ಈ ಹೇಳಿಕೆಗೆ ಇದೇ ತಿಂಗಳ 26ರಂದು ತಕ್ಕ ಉತ್ತರ ನೀಡಬೇಕಾಗಿದೆ ಎಂದು ಕರೆ ನೀಡಿದರು.

ಮೂಡಿಗೆರೆಯ ಕ್ಷೇತ್ರದ ಜನ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಉತ್ತಮ ರೀತಿಯಲ್ಲಿ ಬೆಂಬಲ ನೀಡಿದ್ದೀರಿ. ಈ ಹಿಂದೆ ಜಯಪ್ರಕಾಶ ಹೆಗ್ಡೆ ಅವರಿಗೆ ಕಾರ್ಯನಿರ್ವಹಿಸಲು ಸಿಕ್ಕಿದ್ದು ಕೇವಲ 20 ತಿಂಗಳ ಕಾಲಾವಕಾಶ. ಆದರೂ ಅವರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಮತ್ತೊಮ್ಮೆ ಅವಕಾಶ ನೀಡಬೇಕಾಗಿದೆ. ರಾಜ್ಯದ ಯೋಜನೆಗಳನ್ನು ತರಲಿಕ್ಕೆ ನನ್ನಿಂದಾದ ಪ್ರಯತ್ನ ಮಾಡುವೆ. ಅದೇ ರೀತಿ ಕೇಂದ್ರದಿಂದ ಯೋಜನೆಗಳನ್ನು ತರಲು ನಮಗೆ ಒಬ್ಬ ಸಮರ್ಥ ನಾಯಕರ ಅಗತ್ಯವಿದೆ. ಆ ಕಾರ್ಯವನ್ನು ಜಯಪ್ರಕಾಶ ಹೆಗ್ಡೆ ಅವರು ಸಮರ್ಥವಾಗಿ ನಿಭಾಯಿಸಬಲ್ಲರು. ಆದ್ದರಿಂದ ಹೆಗ್ಡೆ ಅವರನ್ನು ಆಯ್ಕೆ ಮಾಡಿ ನಮ್ಮ ಕ್ಷೇತ್ರವನ್ನು ಉತ್ತಮಪಡಿಸಿಕೊಳ್ಳಬೇಕು ಎಂದರು.

ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್‌ ಸೇರಿರುವ ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವ ಜನಪ್ರಿಯತೆ ಕಳೆಗುಂದುತ್ತಿದೆ. ಯುವ ಕಾರ್ಯಕರ್ತರು ಬಿಜೆಪಿಯನ್ನು ತೊರೆದು ಕಾಂಗ್ರೆಸ್‌ ಸೇರುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ. ದೇಶದ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಜನರು ಇಂದು ಕಾಂಗ್ರೆಸ್‌ ಪಕ್ಷವನ್ನುಬೆಂಬಲಿಸಬೇಕಾದ ಅನಿವಾರ್ಯತೆ ಇದೆ. ಅಂಬಾನಿ ಮತ್ತು ಅದಾನಿಯನ್ನು ಶ್ರೀಮಂತರನ್ನಾಗಿ ಮಾಡಿದ ಮೋದಿ, ರಾಮ ಮಂತ್ರವ ಜಪಿಸಲು ಹೇಳಿದರು. ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಯುವ ಜನರು ಹತಾಶರಾಗಿದ್ದಾರೆ. ಆದ್ದರಿಂದ ಪರಿಸ್ಥಿತಿ ಇನ್ನೂ ವಿಕೋಪಕ್ಕೆ ತಲಪುವ ಮೊದಲು ಜನ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

ಉಡುಪಿ-ಚಿಕ್ಕಮಗಳೂರು ಲೋಕಸಭೆಯ ಕಾಂಗ್ರೆಸ್‌ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ಅವರು ಮಾತನಾಡಿ, ಈ ಹಿಂದೆಯೂ ಅವಕಾಶ ನೀಡಿದ್ದೀರಿ, ಆಗ ಅಲ್ಪ ಅವಧಿಯಲ್ಲಿಯೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವೆ. ಈಗ ಮತ ಕೇಳಲು ಹೋದಾಗ ಜನ ಅತ್ಯಂತ ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ. ಜನರು ಬದಲಾವಣೆ ಬಯಸಿದ್ದಾರೆ. ಎಲ್ಲರೂ ಒಮ್ಮತದಿಂದ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಬೇಕಾದ ಅಗತ್ಯ ಎದುರಾಗಿದೆ’ ಎಂದರು.

Comments are closed.