ಕರಾವಳಿ

ಲಂಚ ಪ್ರಕರಣ ಬಯಲಿಗೆಳೆದು 18 ಕುಟುಂಬಗಳಿಗೆ ನ್ಯಾಯ ಸಿಗುವಂತೆ ಮಾಡಿದ ಹರೀಶ್‌ರಿಗೆ ಭ್ರಷ್ಟಾಚಾರ ನಿಗ್ರಹ ದಳದಿಂದ ಸನ್ಮಾನ

Pinterest LinkedIn Tumblr

ಮಂಗಳೂರು  : ಭ್ರಷ್ಟಾಚಾರ ನಿಗ್ರಹ ದಳ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇಲ್ಲಿಯ ಪ್ರಕರಣದಲ್ಲಿ ದೂರುದಾರರಾದ ಹರೀಶ್ ಕುಮಾರ್, ಉದೇರಿ ಮನೆ, ಮುರುಳ್ಯ ಗ್ರಾಮ, ಸುಳ್ಯ ತಾಲೂಕು ಇವರನ್ನು ಅಂತಾರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ತಡೆ ದಿನಾಚರಣೆಯ ಸಂದರ್ಭದಲ್ಲಿ ವಿಶ್ವೇಶ್ವರಯ್ಯ ಮ್ಯೂಸಿಯಂ ಸಭಾಂಗಣ, ಕಸ್ತೂರಬಾ ರಸ್ತೆ, ಬೆಂಗಳೂರು ಇಲ್ಲಿ ಸನ್ಮಾನಿಸಲಾಯಿತು.

ದೂರುದಾರರಾದ ಹರೀಶ್ ಕುಮಾರ್‍ರವರು ದಿನಾಂಕ 21.08.2017 ರಂದು ತನ್ನ 94ಸಿ ಅರ್ಜಿಯನ್ನು ಲಂಚ ಪಡೆದುಕೊಳ್ಳುವ ಉದ್ದೇಶದಿಂದ ವಿಲೇವಾರಿ ಮಾಡದೇ ಇಟ್ಟುಕೊಂಡಿದ್ದ ಈ ಹಿಂದಿನ ಪಂಜ ಕಂದಾಯ ನಿರೀಕ್ಷಕರ ವಿರುದ್ದ ದೂರನ್ನು ನೀಡಿದ್ದು, ಅವರು ದೂರುದಾರರಿಂದ ರೂ. 8,000 ಲಂಚದ ಹಣವನ್ನು ಸುಳ್ಯದಲ್ಲಿ ಸ್ವೀಕರಿಸುವ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಎಸಿಬಿ ಬಲೆಗೆ ಬಿದ್ದಿದ್ದರು.

ಇವರ ಒಂದು ದೂರಿನಿಂದ ಇತರ 18 ಕುಟುಂಬದವರು ಬಾಕಿ ಇದ್ದ 94ಸಿ ಹಕ್ಕುಪತ್ರ ಪಡೆಯುವಂತಾಯಿತು. ಈ ಪ್ರಕರಣ ದಾಖಲಾದ ಬಳಿಕ ದ.ಕ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದ ಕಾರ್ಯದ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.

ಈ ನಿಟ್ಟಿನಲ್ಲಿ ದೂರುದಾರರಾದ ಹರೀಶ್ ಕುಮಾರ್‍ರವರನ್ನು ಬೆಂಗಳೂರು ಎಸಿಬಿ ಕೇಂದ್ರ ಕಛೇರಿಯ ಐಜಿಪಿ ಚಂದ್ರಶೇಖರ್, ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ಎ. ಚಂದ್ರಶೇಖರ್ ಹಾಗೂ ಕರ್ನಾಟಕದ ಅಡ್ವೋಕೇಟ್ ಜನರಲ್ ಉದಯ ಹೊಳ್ಳ ರವರು ಸನ್ಮಾನಿಸಿರುತ್ತಾರೆ. ಎಂದು ಪೊಲೀಸ್ ಅಧೀಕ್ಷಕರು, ಎಸಿಬಿ, ಪಶ್ಚಿಮ ವಲಯ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Comments are closed.