ಕರಾವಳಿ

ಮೂಡುಬಿದಿರೆ : 15ನೇ ವರ್ಷದ ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ’ಗೆ ಅದ್ದೂರಿ ಚಾಲನೆ

Pinterest LinkedIn Tumblr

ಮೂಡುಬಿದಿರೆ, ನವೆಂಬರ್ .16: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್‌ನ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 15ನೇ ವರ್ಷದ ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ’ಗೆ ಶುಕ್ರವಾರ ಬೆಳಗ್ಗೆ ಅದ್ದೂರಿ ಚಾಲನೆ ನೀಡಲಾಯಿತು.

‘ಕರ್ನಾಟಕ ದರ್ಶನ: ಬಹುರೂಪಿ ಆಯಾಮಗಳು’ ಎಂಬ ಪರಿಕಲ್ಪನೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಮೂಡುಬಿದಿರೆಯ ಸುಂದರಿ ಆನಂದ ಆಳ್ವ ಆವರಣದಲ್ಲಿರುವ ಸಂತ ಶಿಶುನಾಳ ಶರೀಫ ಸಭಾಂಗಣದ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆಯುವ ಸಮ್ಮೇಳನವನ್ನು ಖ್ಯಾತ ಸಂಶೋಧಕ ಡಾ.ಷ.ಶೆಟ್ಟರ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಸಂಶೋಧಕರು ಆಳವಾದ ಅಧ್ಯಯನ ಮಾಡಬೇಕು. ಆಕರ ಗ್ರಂಥಗಳನ್ನು ಸಿದ್ದ ಮಾದರಿಯಾಗಿಸುವುದು ಬೇಡ. ಸಂಶೋಧಕರು ಎಚ್ಚರಿಕೆಯಿಂದಿದ್ದರೆ ಸಂಸ್ಕೃತಿಯ ಬೇರನ್ನು ಪತ್ತೆ ಹಚ್ಚಬಹುದು ಎಂದು ಹೇಳಿದರು.

ತೆಲುಗು ಲಿಪಿಕಾರಾರು ಮೊದಲು ಬಳಸುತ್ತಿದ್ದುದು ಕನ್ನಡ ಲಿಪಿಯನ್ನೇ. ಹದಿಮೂರನೇ ಶತಮಾನದವರೆಗೂ ಅವರು ಕನ್ನಡ ಲಿಪಿಯನ್ನೇ ಬಳಸಿದ್ದರು. ಆ ನಂತರ ತೆಲುಗು ಲಿಪಿಯನ್ನು ಲಿಪಿಕಾರರು ಕಂಡುಹಿಡಿದರು ಎಂದ ಡಾ.ಷಟ್ಟರ್, ಸಂಸ್ಕೃತದ ಮೇಲೂ ಕನ್ನಡದ ಪ್ರಭಾವವಿದೆ. ಆದರೆ ಅದನ್ನು ಗುರುತಿಸುವಲ್ಲಿ ವಿಫಲರಾಗಿದ್ದೇವೆ ಎಂದು ತಿಳಿಸಿದರು. ನಮಗಿಂದು ಧರ್ಮದ ಸ್ವಾತಂತ್ರವಿಲ್ಲ, ಲಾಠಿ, ಪಿಸ್ತೂಲ್ ಎಲ್ಲೆಡೆ ಮೇಳೈಸುತ್ತದೆ. ಹೀಗಾಗಿ ಎಲ್ಲಿದೆ ಸಹಿಷ್ಣುತೆ ಎಂದು ಪ್ರಶ್ನಿಸಿದ ಡಾ.ಷ ಶೆಟ್ಟರ್, ಈ ಶತಮಾನ ಅಸಹಿಷ್ಣುತೆಯ ಶತಮಾನ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷೆ ಸಾಹಿತಿ, ಸಂಶೋಧಕಿ ಡಾ.ಮಲ್ಲಿಕಾ ಎಸ್.ಘಂಟಿ ಅಧ್ಯಕ್ಷತೆ ವಹಿಸಿದ್ದರು. ‘ಆಳ್ವಾಸ್ ನುಡಿಸಿರಿ’ಯ ರೂವಾರಿ ಹಾಗೂ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವಾ ಸ್ವಾಗತಿಸಿ, ಪ್ರಸ್ತಾವನೆಗೈದರು.

ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಎ.ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಕೆ.ಅಭಯಚಂದ್ರ ಜೈನ್, ಅಮರನಾಥ ಶೆಟ್ಟಿ, ಕಸಾಪ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಶಶಿಧರ್ ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.

Comments are closed.