ಕರಾವಳಿ

ಆರೆಸ್ಸೆಸ್‌ ಬೈಠಕ್‌‌‍ನಲ್ಲಿ ಪಾಲ್ಗೊಳ್ಳಲು ಮಂಗಳೂರಿಗೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ

Pinterest LinkedIn Tumblr

ಮಂಗಳೂರು, ನವೆಂಬರ್ 15 : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಭೆಯಲ್ಲಿ ಪಾಲ್ಗೊಳ್ಳಲು ಬುಧವಾರ ಮಂಗಳೂರಿಗೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮಂಗಳೂರು ವಿಮಾನ ನಿಲ್ದಾಣ ಮೂಲಕ ರಾತ್ರಿ 8:30ಕ್ಕೆ ಆಗಮಿಸಿ, ನೇರವಾಗಿ ನಗರದ ಮಣ್ಣಗುಡ್ಡೆಯ ಸಂಘನಿಕೇತನದಲ್ಲಿ ನಡೆದ ಆರೆಸ್ಸೆಸ್‌ನ ದಕ್ಷಿಣ ಭಾರತದ ಬೈಠಕ್‌ನಲ್ಲಿ ಪಾಲ್ಗೊಂಡರು.

ಬುಧವಾರ ರಾತ್ರಿ ವಿಶೇಷ ವಿಮಾನದ ಮೂಲಕ ಅವರು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಸಂಜೆ 7 ಗಂಟೆಗೆ ಬಂದಿಳಿಯಬೇಕಾಗಿದ್ದ ಅಮಿತ್ ಶಾ ಅವರಿ 8.30ಕ್ಕೆ ಬಂದರು. ಅಮಿತ್ ಶಾ ಅವರ ಜತೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ರಾಮಲಾಲ್ ಭಾಗಿ ಸಹಿತ ಹಲವು ಪ್ರಮುಖ ನಾಯಕರು ಆಗಮಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ಶಾ ಅವರನ್ನು ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮಾತ್ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ 7 ಶಾಸಕರು, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪಕ್ಷದ ಜಿಲ್ಲಾ ನಾಯಕರು ಹಾಗು ಉಡುಪಿ ಬಿಜೆಪಿಯ ಮುಖಂಡರು ಹೂಗುಚ್ಛ ನೀಡಿ, ಶಾಲು ಹೊದಿಸಿ ಅಮಿತ್ ಶಾ ಅವರನ್ನು ಸ್ವಾಗತಿಸಿದರು.

ಬಳಿಕ ವಿಮಾನ ನಿಲ್ದಾಣದಿಂದ ನೇರವಾಗಿ ಅವರು ಮಂಗಳೂರಿನ ಮಣ್ಣಗುಡ್ಡದಲ್ಲಿರುವ ಸಂಘ ನಿಕೇತನಕ್ಕೆ ತೆರಳಿದರು. ಸಂಘನಿಕೇತನದಲ್ಲಿ ಹಮ್ಮಿಕೊಳ್ಳಲಾದ ಆರ್‌ಎಸ್ಎಸ್ ಬೈಠಕ್ ನಲ್ಲಿ ಅಮಿತ್ ಶಾ ಪಾಲ್ಗೊಂಡರು.ಅಮಿತ್ ಶಾ ಆಗಮನದ ಹಿನ್ನಲೆಯಲ್ಲಿ ಸಂಘ ನಿಕೇತನದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

Comments are closed.