
ಮಂಗಳೂರು, ನವೆಂಬರ್ .03: ನಗರದಲ್ಲಿ ಬೆಂಗಳೂರು – ಮುಂಬಾಯಿ ಸಹಿತಾ ದೂರ್ದೂರುಗಳಿಗೆ ಪ್ರಯಾಣಿಸುವ ಲಕ್ಸುರಿ ಬಸ್ಗಳ ಹಾವಾಳಿಯಿಂದ ಪಾದಚಾರಿಗಳಿಗೆ, ಸಾರ್ವಜನಿಕರಿಗೆ ಹಾಗೂ ಇತರ ವಾಹನಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕ ವಲಯದಿಂದ ದೂರು ಬಂದ ಹಿನ್ನೆಲೆಯಲ್ಲಿ ಲಕ್ಸುರಿ ಬಸ್ಗಳು ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ನಗರಕ್ಕೆ ಪ್ರವೇಶಿಸುವಂತಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಸೂಚನೆ ನೀಡಿದ್ದಾರೆ.
ನಗರದ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಶುಕ್ರವಾರ ನಡೆದ ಪೊಲೀಸ್ ಫೋನ್ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ನೀಡಿದ ದೂರುಗಳಿಗೆ ಸ್ಪಂದಿಸಿ ಅವರು ಮಾತನಾಡಿದರು. ನಗರದ ವಿವಿಧೆಡೆ ಲಕ್ಸುರಿ ಬಸ್ಗಳು ಗಂಟೆಗಟ್ಟಲೇ ನಿಲ್ಲುವುದರಿಂದ ಪಾದಚಾರಿಗಳಿಗೆ, ಸಾರ್ವಜನಿಕರಿಗೆ ಹಾಗೂ ಇತರ ವಾಹನಗಳಿಗೆ ಸಮಸ್ಯೆಯಾಗುತ್ತಿದೆ. ಮಿಲಾಗ್ರಿಸ್ ಬಳಿ ಮುಂಬೈ ಮತ್ತಿತರ ಲಕ್ಸುರಿ ಬಸ್ಗಳನ್ನು ಗಂಟೆಗಟ್ಟಲೇ ನಿಲ್ಲಿಸಿರುತ್ತವೆ. ಇದರಿಂದ ಇತರ ಸಿಟಿ/ಸರ್ವೀಸ್ ಬಸ್ಗಳ ನಿಲುಗಡೆಗೆ ಸ್ಥಳಾವಕಾಶ ಸಿಗದೆ ರಸ್ತೆಯಲ್ಲಿಯೇ ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಇದರಿಂದ ಪಾದಚಾರಿ, ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ಕಾರ್ಯಕ್ರಮದಲ್ಲಿ ನಾಗರೀಕರೊಬ್ಬರು ದೂರು ನೀಡಿದರು.

ಇದಕ್ಕೆ ಸ್ಪಂದಿಸಿದ ಪೊಲೀಸ್ ಆಯುಕ್ತರು, ಲಕ್ಸುರಿ ಬಸ್ಗಳು ಹಗಲು ವೇಳೆ ನಗರಕ್ಕೆ ಪ್ರವೇಶಿಸುವುದನ್ನು ತಡೆದರೆ ಇಂತಹ ಸಮಸ್ಯೆ ಉದ್ಭವವಾಗುವುದಿಲ್ಲ ಎಂದು ತಿಳಿಸಿ, ಈ ಬಗ್ಗೆ ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರು.
ಇದೇ ವೇಳೆ ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಮಾತನಾಡಿ, 1993ರಲ್ಲೇ ನಿಯಮವೊಂದನ್ನು ರೂಪಿಸಿ ನಗರ ಪ್ರವೇಶಕ್ಕೆ ಲಕ್ಸುರಿ ಬಸ್ಗಳು ನಿಷೇಧಿಸಲಾಗಿತ್ತು. ಆದರೆ ನಿಷೇಧದ ನಿಯಮ ಸಮರ್ಪಕವಾಗಿ ಅನುಷ್ಠಾನಗೊಳ್ಳಲಿಲ್ಲ. ಸದ್ಯ ಲಕ್ಸುರಿ ಬಸ್ಗಳನ್ನು ಹಗಲು ವೇಳೆ ನಗರ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ಫೋನ್ಇನ್ ಕಾರ್ಯಕ್ರಮದಲ್ಲಿ ದಾಖಲಾದ ಇತರ ಪ್ರಮುಖ ದೂರುಗಳು:
ಎನ್ಎಂಪಿಟಿ ಬಸ್ ನಿಲ್ದಾಣ ಬಳಿ ರಸ್ತೆಯುದ್ದಕ್ಕೂ ಗೂಡ್ಸ್ ವಾಹನಗಳ ಪಾರ್ಕಿಂಗ್ ಬಗ್ಗೆ.
ಹಂಪನಕಟ್ಟೆಯ ಸಿಟಿ ಮಾರ್ಕೆಟ್ ಬಳಿ ಜನತಾ ಜ್ಯೂಸ್ ಜಂಕ್ಷನ್ ಮುಂಭಾಗದಲ್ಲಿ ‘ನೋ ಪಾರ್ಕಿಂಗ್’ ಬೋರ್ಡ್ ಹಾಕಿರುವ ಬಗ್ಗೆ,
ಮೀನು ಸಾಗಾಟದ ವಾಹನಗಳಿಂದ ಮೀನಿನ ತ್ಯಾಜ್ಯ ರಸ್ತೆಯಲ್ಲೇ ಬೀಳುತ್ತಿರುವ ಬಗ್ಗೆ,
ನಗರದ ಬಸ್ಗಳಲ್ಲಿ ಅಂಗವಿಕಲರಿಗೆ ಸೀಟುಗಳು ಮೀಸಲಿದ್ದರೂ ಸೀಟಿನ ಮೇಲೆ ‘ಅಂಗವಿಕಲರಿಗಾಗಿ’ ಎನ್ನುವ ನಾಮಫಲಕ ಹಾಕಿಲ್ಲದಿರುವುದರ ಬಗ್ಗೆ,
ತಾರೆತೋಟ ಪ್ರದೇಶಕ್ಕೆ ಬಸ್ಗಳು ಬಾರದಿರುವ ಬಗ್ಗೆ ದೂರು.
ಕಾವೂರು ಭಾಗದಲ್ಲಿ ತಡರಾತ್ರಿವರೆಗೂ ಬಾರ್ಗಳು ತೆರೆಯುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲು ದೂರು.
ಸಿಟಿ ಬಸ್ಗಳಲ್ಲಿ ಟಿಕೆಟ್ ನೀಡುವ ಮಶಿನ್ ಇದ್ದರೂ ಟಿಕೆಟ್ ನೀಡದೇ ಇರುವುದು.
ಉಳ್ಳಾಲದಲ್ಲಿ ಒಂದೇ ಬೈಕ್ನಲ್ಲಿ ಮೂವರು ಸವಾರಿ ಮಾಡುತ್ತಿರುವ ಬಗ್ಗೆ.
ತೊಕ್ಕೊಟ್ಟು, ಕಾಪಿಕಾಡ್ ಭಾಗದಲ್ಲಿ ಸರಣಿ ಕಳ್ಳತನ ಪ್ರಕರಣಗಳು ನಡೆಯುತ್ತಿರುವ ಬಗ್ಗೆ.
ಮೂಡುಬಿದಿರೆಯಲ್ಲಿ ಬೀದಿನಾಯಿಗಳ ಉಪಟಳ ನಿಯಂತ್ರಿಸಲು ದೂರು.
ಬಿಜೈ ಚರ್ಚ್ ಕರಂಗಲ್ಪಾಡಿ ರಸ್ತೆಯಲ್ಲಿ ಹಂಪ್ಸ್ಗಳಿಗೆ ಹಾಕಿರುವ ಬಿಳಿ ಬಣ್ಣ ಮಾಸಿರುವ ಬಗ್ಗೆ.
ಕುಂಪಲ ಗ್ರಾಮಕ್ಕೆ ಮಧ್ಯಾಹ್ನ ಹಾಗೂ ರಾತ್ರಿ ಸಮಯದಲ್ಲಿ ಬಸ್ ಸಂಚಾರ ಇಲ್ಲದಿರುವುದು.
ಈ ಎಲ್ಲಾ ದೂರುಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ಪೊಲೀಸ್ ಅಯುಕ್ತರು ತಿಳಿಸಿದರು
ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್, ಸಂಚಾರ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ, ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್, ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ರಾಜ್ ಆಳ್ವ, ಇನ್ಸ್ಪೆಕ್ಟರ್ಗಳಾದ ಅಮಾನುಲ್ಲಾ ಎ., ಎಚ್.ಶಿವಪ್ರಕಾಶ್, ಪಿಎಸ್ಸೈ ಕಮಲಾ, ಪಿ.ಯೋಗೇಶ್ವರ್, ಹೆಡ್ಕಾನ್ಸ್ಟೇಬಲ್ ಪುರುಷೋತ್ತಮ ಉಪಸ್ಥಿತರಿದ್ದರು.
Comments are closed.