ಕರಾವಳಿ

ಮಂಗಳೂರು : ನವೆಂಬರ್ 3ರಂದು ಬಿಜೆಪಿಯಿಂದ ಮರಳಿಗಾಗಿ ಬೃಹತ್ ಪ್ರತಿಭಟನೆ

Pinterest LinkedIn Tumblr

ಮಂಗಳೂರು,ನವೆಂಬರ್ 01 : ಇದೇ ಬರುವ ನವೆಂಬರ್ 3, ಶನಿವಾರದಂದು ಭಾರತೀಯ ಜನತಾ ಪಾರ್ಟಿಯ ವತಿಯಿಂದ ಮರಳಿಗಾಗಿ (ಹೊಯಿಗೆ) ಬೃಹತ್ ಪ್ರತಿಭಟನೆಯನ್ನು ಆಯೋಜಿಸಲಾಗಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳಿನ ಕೊರತೆಯಿಂದ ವ್ಯಾಪಕ ಸಮಸ್ಯೆಯಾಗಿದೆ. ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಮರಳು ತೆಗೆಯುವುದಕ್ಕೆ ಅನುಮತಿ ನೀಡಲು ಮೀನಾಮೇಷ ಎಣಿಸುತ್ತಿವೆ. ಇದು ಸರಿಯಾದ ಕ್ರಮವಲ್ಲ. ಮುಖ್ಯಮಂತ್ರಿಯವರು ನಮ್ಮ ಜಿಲ್ಲೆಯ ಮಧ್ಯಮ, ಕೆಳ ಮಧ್ಯಮ ವರ್ಗದ ಜನರ ಕಷ್ಟವನ್ನು ಅರಿತುಕೊಳ್ಳಬೇಕು ಎಂದು ಶಾಸಕ ಕಾಮತ್ ಹೇಳಿದ್ದಾರೆ.

ರಾಜ್ಯ ಸರಕಾರದ ಈ ನೀತಿಯನ್ನು ವಿರೋಧಿಸಿ ಮಂಗಳೂರು ನಗರ ದಕ್ಷಿಣ ಮತ್ತು ಮಂಗಳೂರು ನಗರ ಉತ್ತರದ ವತಿಯಿಂದ ನವೆಂಬರ್ 3 ರಂದು ಶನಿವಾರ ಬೆಳಿಗ್ಗೆ 9.30 ರಿಂದ ಸಂಜೆ 4 ಗಂಟೆಯ ತನಕ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಗೇಟಿನ ಮುಂಭಾಗ ಬೃಹತ್ ಪ್ರತಿಭಟನೆ ಮಾಡಲಾಗುತ್ತದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜ್ವಲಂತವಾಗಿ ಕಾಡುತ್ತಿರುವ ಮರಳಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲೇ ಬೇಕಾಗಿದೆ. ಈ ಹಿಂದೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು, ಕರಾವಳಿಯ ಶಾಸಕರುಗಳು ಮತ್ತು ಇದಕ್ಕೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಹದಿನೈದು ದಿನಗಳೊಳಗೆ ಈ ಸಮಸ್ಯೆಗೆ ಪರಿಹಾರ ನೀಡಲಾಗುವುದು ಎಂದು ಸಿಎಂ ಭರವಸೆ ನೀಡಿದ್ದರು.

ಸಭೆ ನಡೆದು ಸಿಎಂ ನೀಡಿದ ಹದಿನೈದು ದಿನಗಳ ಗಡುವು ಮುಗಿದು ಒಂದು ತಿಂಗಳು ಜಾಸ್ತಿಯಾಗುತ್ತಾ ಬಂದರೂ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಮೌನಕ್ಕೆ ಶರಣಾಗಿವೆ.

ಈ ಹಿಂದೆ ಮರಳಿನ ಸಮಸ್ಯೆ ಉದ್ಭವವಾಗಿ ಸಾರ್ವಜನಿಕರಿಗೆ ತೊಂದರೆ ಆದಾಗಲೂ ಬಿಜೆಪಿ ಪ್ರತಿಭಟನೆ ಮಾಡುವ ಮೂಲಕ ಜನಪರ ನಿಲುವನ್ನು ಎತ್ತಿಹಿಡಿಯುತ್ತಾ ಬಂದಿದೆ.

ಈಗ ಶಾಶ್ವತ ಪರಿಹಾರಕ್ಕಾಗಿ ಆಗ್ರಹ ಮಾಡಬೇಕಾಗಿರುವುದರಿಂದ ನಾಗರಿಕರ ಪರವಾಗಿ ಬೃಹತ್ ಪ್ರತಿಭಟನೆಯೊಂದೇ ದಾರಿಯಾಗಿರುವುದರಿಂದ ಬಿಜೆಪಿ ಮಂಗಳೂರು ನಗರ ದಕ್ಷಿಣ ಮತ್ತು ಉತ್ತರದ ಎಲ್ಲಾ ಮುಖಂಡರು, ಮೋರ್ಚಾದ ಪದಾಧಿಕಾರಿಗಳು, ಪಾಲಿಕೆಯ ಬಿಜೆಪಿ ಸದಸ್ಯರು, ತೊಂದರೆಗೊಳಗಾಗಿರುವ ಗುತ್ತಿಗೆದಾರರು, ಸಂತ್ರಸ್ತರಾಗಿರುವ ನಾಗರಿಕರು ಹೋರಾಟದಲ್ಲಿ ಭಾಗವಹಿಸಿ ರಾಜ್ಯ ಸರಕಾರಕ್ಕೆ ಉಗ್ರ ಎಚ್ಚರಿಕೆಯನ್ನು ಕೊಡುವ ಕಾಲ ಬಂದಿದೆ. ಈ ಬಗ್ಗೆ ಮಂಗಳೂರಿನ ನಾಗರಿಕರ ಸಹಕಾರವನ್ನು ಬಯಸು ವುದಾಗಿ ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ

Comments are closed.